
ನುಗ್ಗೇಹಳ್ಳಿ: ಗ್ರಾಮದ ಹಿರೀಸಾವೆ ರಸ್ತೆಯಲ್ಲಿರುವ ಮಾದೇಶ್ವರ ಸ್ವಾಮಿ ಮೂಲ ಗದ್ದುಗೆಯಲ್ಲಿ ಮಾದೇಶ್ವರ ಸಿದ್ದೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ವೀರಶೈವ ಸಮಾಜದಿಂದ ವಿಶೇಷ ಪೂಜೆ ಜರುಗಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಸಂಜೆ ಗ್ರಾಮದ ಪೇಟೆ ಬೀದಿಯಲ್ಲಿರುವ ಮಾದೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಂಜೆ ಮೂಲ ಗದ್ದುಗೆಯಲ್ಲಿ ಪೂಜೆಗಳು ನಡೆದವು.
ಸೋಮವಾರ ಬೆಳಿಗ್ಗೆಯಿಂದಲೇ ಮೂಲ ಗದ್ದುಗೆಯಲ್ಲಿ ದೇವರಿಗೆ ವಿಶೇಷ ಪೂಜೆ ಹೂವಿನ ಅಲಂಕಾರ ಸೇರಿದಂತೆ ಗ್ರಾಮದ ಪುರವರ್ಗ ಹಿರೇಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಭಕ್ತರಿಂದ ಇಷ್ಟಲಿಂಗ ಪೂಜೆ ನೆರವೇರಿತು. ಗ್ರಾಮದ ರಾಜಬೀದಿಗಳಲ್ಲಿ ಲಿಂಗಬೀರ ಕುಣಿತ, ನಂದಿ ಧ್ವಜ ಕುಣಿತದೊಂದಿಗೆ ಮಾದೇಶ್ವರ ಸ್ವಾಮಿ ಉತ್ಸವ ನಡೆಯಿತು. ಸೋಮವಾರ ರಾತ್ರಿ ಮೂಲ ಗದ್ದುಗೆಯಲ್ಲಿ ಕೊಂಡೋತ್ಸವ ನೆರವೇರಿತು. ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಯಿತು.
ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಜಾತ್ರಾ ಮಹೋತ್ಸವದ ಅಂಗವಾಗಿ ಮೂಲ ಗದ್ದುಗೆಯಲ್ಲಿ ವಿಶೇಷ ಪೂಜೆ ಮಾಡಲಾಗುತ್ತದೆ. ಮಾದೇಶ್ವರ ಸ್ವಾಮಿ ಕೃಪೆಯಿಂದ ಈ ವರ್ಷ ಉತ್ತಮ ಮಳೆ ಬೆಳೆಯಾಗಿ ರೈತರ ಬದುಕು ಹಸನಾಗಲಿ’ ಎಂದರು.
ಪೂಜಾ ಕಾರ್ಯಕ್ರಮದಲ್ಲಿ ಜೆಡಿಎಸ್ ಯುವ ಮುಖಂಡ ಜೈದೀಪ್ ಗೌಡ, ಸಮಾಜದ ಹಿರಿಯರಾದ ಸಿಬಿ ಚನ್ನಮಲ್ಲಪ್ಪ, ತೋಟಿ ನಾಗರಾಜ್, ಎನ್.ಎಸ್.ಲಕ್ಷ್ಮಣ್, ಎಂ ಎಸ್. ಸುರೇಶ್, ಪಿಎಸ್ಐ ಭಾರತ್ ರೆಡ್ಡಿ, ವೀರಶೈವ ಸಮಾಜದ ಹೋಬಳಿ ಘಟಕದ ಅಧ್ಯಕ್ಷ ಎನ್.ಎಸ್. ಗಿರೀಶ್, ಉಪಾಧ್ಯಕ್ಷ ಕೃಪಾಶಂಕರ್, ಕಾರ್ಯದರ್ಶಿ ಎನ್ಪಿ ಪ್ರದೀಪ್, ಖಜಾಂಚಿ ಪೊಲೀಸ್ ಕುಮಾರ್, ಸಮಾಜದ ಪ್ರಮುಖರಾದ ಎನ್.ಟಿ ಸಿದ್ದಪ್ಪ, ಎನ್.ಆರ್. ಉಮೇಶ್, ಎನ್.ಬಿ. ಜಯಕೀರ್ತಿ, ಹೋಟೆಲ್ ಗುರುಪ್ರಸಾದ್, ಎನ್.ಎಚ್.ಆರ್. ಪ್ರದೀಪ್, ಎನ್ಸಿ ರೇಣುಕಸ್ವಾಮಿ, ಎನ್.ಸಿ ನಿಂಗರಾಜು, ಎನ್.ಸಿ ವಿಶ್ವನಾಥ್, ಎನ್.ಸಿ ಕುಮಾರ್, ಹೋಟೆಲ್ ಮಂಜು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.