ಹಾಸನ: ತಾಲ್ಲೂಕಿನ ಕ್ಯಾತನಹಳ್ಳಿ ಏತ ನೀರಾವರಿ ಯೋಜನೆ ಪೂರ್ಣ ಗೊಳಿಸಲು ಆಗ್ರಹಿಸಿ ಪಕ್ಷಾತೀತವಾಗಿ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ ಎಂದು ಜೆಡಿಎಸ್ಮುಖಂಡ ಅಗಿಲೆ ಯೋಗೀಶ್ ಹೇಳಿದರು.
‘ನಮ್ಮೂರ ನೀರು ನಮ್ಮೂರ ಕೆರೆಗೆ’ ಎಂಬ ಸಮಿತಿ ರಚಿಸಿ ಹೋರಾಟದ ಮೂಲಕ ಪ್ರಾರಂಭಿಸಿದ್ದ ನೀರಾವರಿ ಯೋಜನೆ ಅರ್ಧಕ್ಕೆ ಸ್ಥಗಿತಗೊಂಡಿದೆ. ಯೋಜನೆ ಪೂರ್ಣಗೊಳಿಸಲು ಆಗ್ರಹಿಸಿ ಕಡದರವಳ್ಳಿಯಿಂದ ಸೀಗೆವರೆಗೂ ಪಾದಯಾತ್ರೆ ಮಾಡಲು ತೀರ್ಮಾನಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಒಟ್ಟು 5600 ಎಕರೆ ಪ್ರದೇಶಕ್ಕೆ ನೀರು ಒದಗಿಸುವ ಸಲುವಾಗಿ ₹8.1 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊ ಳ್ಳಲಾಗಿದೆ. 24 ಎಕರೆ ಭೂಮಿಯನ್ನೂ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ರೈತರಿಗೆ ಪರಿಹಾರ ನೀಡಲು ಸರ್ಕಾರ ₹ 1.20 ಕೋಟಿಪರಿಹಾರ ಬಿಡುಗಡೆ ಮಾಡಿದೆ. ಆದರೆ. ಈ ಹಣವನ್ನು ಜಮೀನು ಕಳೆದುಕೊಂಡ ರೈತರಿಗೆ ಇದುವರೆಗೂ ನೀಡಿಲ್ಲ ಎಂದು ದೂರಿದರು.
ಭೂಮಿ ಸ್ವಾಧೀನ ಪ್ರಕ್ರಿಯೆಗೆ ಅಡ್ಡಿ ಆಗಿರುವುದರಿಂದ ಯೋಜನೆ ಅರ್ಧಕ್ಕೇ ನಿಂತಿದೆ.ಕ್ಷೇತ್ರದ ಶಾಸಕರು ಎಚ್ಚೆತ್ತುಕೊಂಡು ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಗೋಷ್ಠಿಯಲ್ಲಿ ಸಮಿತಿಯ ಹೊಸಹಳ್ಳಿ ಅಣ್ಣಯ್ಯ, ಕುಮಾರ್, ಮಂಜುನಾಥ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.