
ಅರಸೀಕೆರೆಯ ಆಸ್ಥಾನ ಮಂಟಪದಲ್ಲಿ ಪ್ರತಿಷ್ಠಾಪಿಸಿರುವ ಪ್ರಸನ್ನ ಗಣಪತಿ ಮೂರ್ತಿ
ಅರಸೀಕೆರೆ: ರಾಜ್ಯದಲ್ಲೇ ತನ್ನದೇ ಆದ ಮಹತ್ವ ಹೊಂದಿರುವ ಇಲ್ಲಿನ ದೊಡ್ಡ ಗಣಪತಿ ಎಂದೇ ಹೆಸರಾಗಿರುವ ಪ್ರಸನ್ನ ಗಣಪತಿ ಮೂರ್ತಿಯನ್ನು ಆಸ್ಥಾನ ಮಂಟಪದಲ್ಲಿ ಪ್ರತಿಷ್ಠಾಪಿಸಿ 66 ದಿನಗಳು ಕಳೆಯುತ್ತಿದ್ದು, ಅ.31ರಂದು 84ನೇ ವರ್ಷದ ಅದ್ಧೂರಿ ವಿಸರ್ಜನಾ ಮಹೋತ್ಸವ ನಡೆಯಲಿದೆ.
ಅರಸೀಕೆರೆಯ ದೊಡ್ಡ ಗಣಪತಿಯ ವಿಸರ್ಜನಾ ಮಹೋತ್ಸಕ್ಕೆ ನಗರ, ಸುತ್ತಲಿನ ಗ್ರಾಮೀಣ ಭಾಗದ ಜನರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಜನರು ಸೇರುವ ನಿರೀಕ್ಷೆ ಇದ್ದು, ಗಣಪತಿ ಮಂಡಳಿ ಸಕಲ ಸಿದ್ದತೆಗಳಲ್ಲಿ ತೊಡಗಿದೆ. ಅ.31ರಂದು ಸಂಜೆ 6ಕ್ಕೆ ಆರಂಭವಾಗುವ ಉತ್ಸವ ವಿವಿಧ ಕಲಾತಂಡಗಳೊಂದಿಗೆ ನಡೆಯಲಿದ್ದು, ವೈಭವವನ್ನು ಭಕ್ತರು ಕಣ್ತುಂಬಿಕೊಳ್ಳಲಿದ್ದಾರೆ.
ನಗರದ ರಾಜಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಸೇರಿದಂತೆ ಇನ್ನಿತರ ಸೌಲಭ್ಯಗಳ ಬಗ್ಗೆ ಮಂಡಳಿ ಹಾಗೂ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಪೊಲೀಸ್ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿವೆ.
ಗಣಪತಿ ಮೂರ್ತಿಯನ್ನು ವಿಶೇಷ ಪುಷ್ಪಾಲಂಕೃತ ಮಂಟಪದಲ್ಲಿ ಸ್ಥಾಪಿಸಿ, ಗಣ್ಯರಿಂದ ಪೂಜೆ ಸಲ್ಲಿಸಿದ ನಂತರ ಉತ್ಸವ ಆರಂಭವಾಗಲಿದೆ. ಉತ್ಸವದಲ್ಲಿ ಕರಡೆ ವಾದ್ಯ, ಕಹಳೆ ವಾದ್ಯ, ವೀರಭದ್ರ ಕುಣಿತ, ಭದ್ರಕಾಳಿ ಕುಣಿತ, ಅಣ್ಣಮ್ಮ ತಮಟೆ, ವೀರಗಾಸೆ ಹೀಗೆ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಸಾರ್ವಜನಿಕರ ಗಮನ ಸೆಳೆಯಲಿವೆ.
ಯುವಕ, ಯುವತಿಯರ ಡಿಜೆ ಮತ್ತು ಪ್ಲವರ್ ಬ್ಲಾಸ್ಟರ್ ಕಾರ್ಯಕ್ರಮವು ಶುಕ್ರವಾರ ಹಾಗೂ ಶನಿವಾರ ನಡೆಯಲಿದ್ದು, ಎಲ್ಲರ ಗಮನ ಸೆಳೆಯಲಿದೆ. ನಂತರ ಹಾಸನ ರಸ್ತೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನ ಸಮೀಪ ಶುಕ್ರವಾರ ರಾತ್ರಿ ಮದ್ದುಗುಂಡುಗಳ ಪ್ರದರ್ಶನವಿದೆ. ನಗರದ ಪ್ರಮುಖ ವೃತ್ತಗಳಲ್ಲಿ ವಿವಿಧ ಸಂಘ ಸಂಸ್ಥೆಗಳು, ಪದಾಧಿಕಾರಿಗಳು, ನಾಗರಿಕರು ಗಣಪತಿ ಮೂರ್ತಿಗೆ ವಿಶೇಷ ಹಾರ ಅರ್ಪಿಸಿ, ಪೂಜೆ ಸಲ್ಲಿಸಲು ಹಾಗೂ ಪ್ರಸಾದ ವಿತರಿಸಲು ಸಜ್ಜಾಗಿದ್ದಾರೆ.
ಅರಸೀಕೆರೆ ಪ್ರಸನ್ನ ಗಣಪತಿ ವಿಸರ್ಜನಾ ಮಹೋತ್ಸವ ರಾಜ್ಯದಲ್ಲೇ ಹೆಸರಾಗಿದ್ದು ಸಮಸ್ತ ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಉತ್ಸವ ಯಶಸ್ವಿಗೊಳಿಸಬೇಕು.ಕೆ.ಎಂ.ಶಿವಲಿಂಗೇಗೌಡ, ಶಾಸಕ
ನವೆಂಬರ್ 1ರಂದು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಇದ್ದು, ಮತ್ತೆ ರಾತ್ರಿ ಅದೇ ಸಾಂಸ್ಕ್ರತಿಕ ಕಲಾತಂಡಗಳು ಹಾಗೂ ಡಿಜೆ ಪ್ರದರ್ಶನ ಇರಲಿದೆ. ಅಕ್ಟೋಬರ್ 2 ರಂದು ಸಂಜೆ 7 ಗಂಟೆಗೆ ಕಂತೇನಹಳ್ಳಿ ಕೆರೆಯ ಆವರಣದಲ್ಲಿ ಮದ್ದು ಗುಂಡುಗಳ ಪ್ರದರ್ಶನದ ನಂತರ ದೊಡ್ಡ ಕೆರೆಯಲ್ಲಿ ಗಣಪತಿ ಮೂರ್ತಿಯನ್ನು ವಿಸರ್ಜಿಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.