ADVERTISEMENT

‘ಶಾಲಾ, ಕಾಲೇಜಿಗೆ ಸೌಲಭ್ಯ ಕಲ್ಪಿಸಿ’

ಖಾಸಗಿ ಶಿಕ್ಷಣ ಸಂಸ್ಥೆ ಜತೆ ಸರ್ಕಾರ ಶಾಮೀಲು: ರೇವಣ್ಣ ಆರೋಪ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 16:41 IST
Last Updated 4 ಅಕ್ಟೋಬರ್ 2021, 16:41 IST
ಎಚ್‌.ಡಿ.ರೇವಣ್ಣ
ಎಚ್‌.ಡಿ.ರೇವಣ್ಣ   

ಹಾಸನ: ‘ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಶಾಲಾ, ಕಾಲೇಜುಗಳಿಗೆ ಮೂಲಸೌಲಭ್ಯ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ’ ಎಂದು ಶಾಸಕ ಎಚ್.ಡಿ.ರೇವಣ್ಣಆರೋಪಿಸಿದರು.

‘ಸರ್ಕಾರ ಶಾಸಗಿ ಶಿಕ್ಷಣ ಸಂಸ್ಥೆಗಳ ಜತೆ ಶಾಮೀಲಾಗಿದೆ. ಗ್ರಾಮೀಣ ಮಕ್ಕಳಿಗೆ ಶಿಕ್ಷಣ ನೀಡಲು ಸರ್ಕಾರದ ಬಳಿ ಹಣವಿಲ್ಲ. ಕಾಲೇಜುಗಳಿಗೆ ಉಪನ್ಯಾಸಕರನ್ನು ನೇಮಕ ಮಾಡುವಲ್ಲಿ ವಿಫಲವಾಗಿದೆ.ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಹಿಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಾಕಷ್ಟು ಕೊಡುಗೆನೀಡಿದ್ದಾರೆ. ಹಲವು ಶಾಲೆಗಳಿಗೆ ಡೆಸ್ಕ್‌, ಕಂಪ್ಯೂಟರ್‌ ಸೇರಿದಂತೆ ಕೈಲಾದಷ್ಟು ಸೌಲಭ್ಯ ಒದಗಿಸಿದ್ದೇನೆ. ಬಡ ಮಕ್ಕಳು ವಿದ್ಯಾಭ್ಯಾಸ ಮಾಡುವ ಸರ್ಕಾರಿ ಶಾಲಾ, ಕಾಲೇಜಿಗೆ ಸೌಕರ್ಯಒದಗಿಸಬೇಕು’ ಎಂದು ಸೋಮವಾರ ಸುದ್ಗಿಗೋಷ್ಠಿಯಲ್ಲಿ ಮನವಿ ಮಾಡಿದರು.

‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ದ್ವೇಷ ಇಂದಿಗೂ ಮುಂದುವರಿಸಿದೆ. ಜಿಲ್ಲೆಯ ಅನೇಕ ಯೋಜನೆಗಳಿಗೆ ಅನುದಾನ ತಡೆಹಿಡಿದಿರುವುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತರಲಾಗಿದೆ. ಆದರೂಯಾವುದೇ ಕೆಲಸ ಆಗುತ್ತಿಲ್ಲ. ನಂಜುಂಡಪ್ಪ ವರದಿ ಪ್ರಕಾರ ಅನುದಾನ ಹಂಚಿಕೆ ಮಾಡುತ್ತಿಲ್ಲ’ ಎಂದುಬೇಸರ ವ್ಯಕ್ತಪಡಿಸಿದರು.

ADVERTISEMENT

‘ಹಾಸನ ಮತ್ತು ಸಿಂದಗಿಯಲ್ಲಿ ತೋಟಗಾರಿಕೆ ಮಹಾವಿದ್ಯಾಲಯ ತೆರೆಯಲು ಎಲ್ಲ ರೀತಿಯ ನೆರವನ್ನು ಹಿಂದಿನ ಸಮ್ಮಿಶ್ರ ಅವಧಿಯಲ್ಲಿ ನೀಡಲಾಗಿತ್ತು. ಆದರೆ ಯಡಿಯೂರಪ್ಪ ಅವರು ಅನುದಾನತಡೆಹಿಡಿದರು. ಸರ್ಕಾರದ ನಿರ್ಲಕ್ಷ್ಯ ಧೋರಣೆ ವಿರುದ್ಧ ಹೋರಾಟ ಮಾಡುವ ವಿಚಾರವಾಗಿಎಚ್.ಡಿ.ಕುಮಾರಸ್ವಾಮಿ, ಪಕ್ಷದ ಶಾಸಕರು ಹಾಗೂ ಮುಖಂಡರೊಂದಿಗೆ ಚರ್ಚಿಸಲಾಗುವುದು’ ಎಂದುತಿಳಿಸಿದರು.

‘ಜೆಡಿಎಸ್‌ ಒಕ್ಕಲಿಗರ ಪಕ್ಷ ಎಂಬ ಕಾಂಗ್ರೆಸ್ ಆರೋಪ ಸರಿಯಲ್ಲ. ಎಲ್ಲಾ ಸಮುದಾಯವರಿಗೂ ಸೂಕ್ತ ಸ್ಥಾನ ಮಾನ ನೀಡಲಾಗಿದೆ.ರಾಜ್ಯದಲ್ಲಿ ಕಾಂಗ್ರೆಸ್‌ ಹೀನಾಯ ಪರಿಸ್ಥಿತಿ ಎದುರಿಸುತ್ತಿದೆ. ಕೋಮುವಾದಿ ಪಕ್ಷದ ನಾಯಕರನ್ನು ಸೆಳೆಯುವ ಕೆಲಸ ಮಾಡುತ್ತಿದೆ. ಈಗ ನೆಹರು ಕಾಂಗ್ರೆಸ್‌ ಇಲ್ಲ. ಪ್ರಚಾರದ ಕಾಂಗ್ರೆಸ್‌ ಇರುವುದು. ಹಿಂದುಳಿದ ಸಮುದಾಯದ ಬಗ್ಗೆ ಕಾಂಗ್ರೆಸ್‌ ಗೆ ಕಾಳಜಿ ಇದ್ದರೆ ಮುಂದಿನ ಚುನಾವಣೆಯಲ್ಲಿ ಪರಿಶಿಷ್ಟರಿಗೆ ಅಥವಾ ಸಣ್ಣ ಸಮುದಾಯದವರಿಗೆ ಸಿ.ಎಂ ಸ್ಥಾನ ನೀಡುವುದಾಗಿ ಘೋಷಣೆ ಮಾಡಲಿ’ ಎಂದು ಸವಾಲು ಹಾಕಿದರು.

‘ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ದೇವೇಗೌಡರು, ಶಾಸಕರು ಮತ್ತು ಕಾರ್ಯಕರ್ತರ ಜತೆ ಚರ್ಚಿಸಿ ಅಭ್ಯರ್ಥಿ ಆಯ್ಕೆ ಮಾಡಲಾಗುವುದು. ಪತ್ನಿ ಭವಾನಿ ರೇವಣ್ಣ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುವಷ್ಟು ಶಕ್ತಿಯಿಲ್ಲ. ಹಾಸನಾಂಬೆ, ರಂಗನಾಥ ಸ್ವಾಮಿ, ಲಕ್ಷ್ಮಿ ನರಸಿಂಹ ಆಶೀರ್ವಾದ ಯಾರಿಗೆ ಸಿಗಲಿದೆ ಅವರಿಗೆ ಟಿಕೆಟ್‌ ದೊರೆಯಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.