ADVERTISEMENT

ಸಕಲೇಶಪುರ| ರೋಟರಿ ಇಂಗ್ಲಿಷ್‌ ಮಾಧ್ಯಮ ಶಾಲೆ: ಮಕ್ಕಳ ಸಂತೆಯಲ್ಲಿ ವ್ಯಾಪಾರ ಜೋರು  

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 2:07 IST
Last Updated 10 ನವೆಂಬರ್ 2025, 2:07 IST
ಸಕಲೇಶಪುರದ ರೋಟರಿ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ನಡೆದ ವಿಜ್ಞಾನ ವಸ್ತುಪ್ರದರ್ಶನವನ್ನು ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ.ಎಸ್. ವಿಜಯ್‌ಶಂಕರ್ ಹಾಗೂ ಕಾರ್ಯದರ್ಶಿ ಅರುಣ್‌ಕುಮಾರ್ ರಕ್ಷಿದಿ ವೀಕ್ಷಿಸಿದರು
ಸಕಲೇಶಪುರದ ರೋಟರಿ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ನಡೆದ ವಿಜ್ಞಾನ ವಸ್ತುಪ್ರದರ್ಶನವನ್ನು ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ.ಎಸ್. ವಿಜಯ್‌ಶಂಕರ್ ಹಾಗೂ ಕಾರ್ಯದರ್ಶಿ ಅರುಣ್‌ಕುಮಾರ್ ರಕ್ಷಿದಿ ವೀಕ್ಷಿಸಿದರು   

ಸಕಲೇಶಪುರ: ಇಲ್ಲಿಯ ರೋಟರಿ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ವಿಜ್ಞಾನ ವಸ್ತು ಪ್ರದರ್ಶನ, ಕ್ಲೇ ಆರ್ಟ್‌ ಪ್ರದರ್ಶನ ಹಾಗೂ ಮಕ್ಕಳ ಸಂತೆ ನಡೆಯಿತು.

ಶಾಲಾ ಆವರಣ ಜಾತ್ರೆ, ಸುಗ್ಗಿಯ ವಸ್ತು ಪ್ರದರ್ಶಕ್ಕಿಂತ ಕಡಿಮೆ ಏನು ಇರಲಿಲ್ಲ. ಮಕ್ಕಳು ಹಾಗೂ ಅವರ ಪೋಷಕರು ಮನೆಯಿಂದಲೇ ಮಾಡಿಕೊಂಡು ತಂದಿದ್ದ ವಿವಿಧ ತಿಂಡಿ ತಿನಿಸುಗಳು ಬಾಯಲ್ಲಿ ನೀರು ಹರಿಸಿತ್ತು. ಜಾಮೂನು, ಪಾನೀಪುರಿ, ಬ್ರೆಡ್‌ ಟೋಸ್ಟ್‌, ರಸ್ಮಾಲಾಯ್‌, ರವೆ ಉಂಡೆ, ಸೇರಿದಂತೆ ಎಲ್ಲಾ ಬಗೆಯ ಸಿಹಿ ತಿನಿಸುಗಳು, ಚಾಟ್ಸ್‌ ವ್ಯಾಪಾರ ಜೋರಾಗಿತ್ತು. ಒಂದೆಡೆ ತಾಜಾ ತರಕಾರಿ, ಹಣ್ಣುಗಳ ಮಾರಾಟ ನಡೆಯುತ್ತಿದ್ದರೆ, ಇನ್ನು ಕೆಲವು ಕಡೆ ಹೂವು ಹಾಗೂ ತರಕಾರಿ ಗಿಡಗಳ ಮಾರಾಟ ನಡೆಯಿತು. ಮಕ್ಕಳನ್ನು ಆಕರ್ಷಿಸುವ ಕೊಂಬೆಗಳು ಹಾಗೂ ಇನ್ನಿತರ ಆಟಿಕೆಗಳ ಮಾರಾಟದ ಒಂದು ಸ್ಟಾಲ್‌ನಲ್ಲಿ ಅಜ್ಜಿ, ತಂದೆ ತಾಯಿ ಮಕ್ಕಳು ಎಲ್ಲರೂ ಸೇರಿ ಮಾರಾಟ ಮಾಡುತ್ತಿದ್ದದ್ದು ಗಮನ ಸೆಳೆಯಿತು.

ವಿಜ್ಞಾನ ವಸ್ತು ಪ್ರದರ್ಶನ: ಪ್ರತಿಯೊಂದು ವಿದ್ಯಾರ್ಥಿಗಳು ಸಹ ವಿವಿಧ ಬಗೆಯ ವಿಜ್ಞಾನದ ವಸ್ತು ಪ್ರದರ್ಶನ ನೀಡಿದರು. ಹಸಿ ಹಸ ಹಾಗೂ ಒಣ ಕಸವನ್ನು ಸೆನ್ಸರ್‌ ಮೂಲಕ ಬೇರ್ಪಡಿಸಿ, ಹಸಿ ಕಸ ಹಸಿರು ಡಬ್ಬಕ್ಕೆ, ಒಣ ಕಸ ಕೆಂ‍ಪು ಡಬ್ಬಕ್ಕೆ, ಮೆಟಲ್‌ಗಳು ಹಳದಿ ಡಬ್ಬಕ್ಕೆ ಬೀಳುವ ತಂತ್ರಜ್ಞಾನ ಗಮನ ಸೆಳೆಯಿತು. ವಿದ್ಯಾರ್ಥಿನಿಯೊಬ್ಬಳು ಮಲೆನಾಡಿನ ಕಾಡಾನೆ ದಾಳಿಯಿಂದ ಬೆಳೆ ಹಾನಿ ತಡೆಯಲು ಸೋಲಾರ್ ಬೇಲಿ ಮಾಡಿ, ತಂತಿಯನ್ನು ಸ್ಪರ್ಶಿಸಿದ ಕೂಡಲೇ ಸೈರನ್‌ ಹಾಗೂ ಲೈಟ್ ಉರಿಯುವ ಮಾದರಿ  ಪ್ರದರ್ಶಿಸಿದಳು.

ADVERTISEMENT

ರೋಟರಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ.ಎಸ್. ವಿಜಯ್‌ಶಂಕರ್‌ ವಸ್ತುಪ್ರದರ್ಶಕ್ಕೆ ಚಾಲನೆ ನೀಡಿದರು. ಕಾರ್ಯದರ್ಶಿ ಅರುಣ್‌ಕುಮಾರ್ ರಕ್ಷಿದಿ, ರೋಟರಿ ಸಂಸ್ಥೆ ಅಧ್ಯಕ್ಷ ಕೆ.ಜಿ. ಚಂದ್ರಶೇಖರ್, ಕಾರ್ಯದರ್ಶಿ ಎಂ.ಡಿ. ವಿಜಿತ್‌, ರೋಟರಿ ಟ್ರಸ್ಟ್ ಅಧ್ಯಕ್ಷ ಎನ್‌.ಸಿ. ಸ್ವಾಮಿ, ಕಾರ್ಯದರ್ಶಿ ರವಿಕುಮಾರ್, ಪ್ರಾಂಶುಪಾಲ ಸುಮಂತ್ ಭಾರ್ಗವ್‌ ಹಾಗೂ ಶಿಕ್ಷಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.