ADVERTISEMENT

ಪ್ರಜ್ವಲ್‌ ರೇವಣ್ಣ–ಪ್ರೀತಂ ವಾಕ್ಸಮರ: ಪರಸ್ಪರ ಏಕವಚನದಲ್ಲಿ ನಿಂದನೆ

ಮದ್ಯ ಮಾರಾಟ: ಪರಸ್ಪರ ಏಕವಚನದಲ್ಲಿ ನಿಂದನೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 1:40 IST
Last Updated 7 ಏಪ್ರಿಲ್ 2020, 1:40 IST
   

ಹಾಸನ: ಅಕ್ರಮ ಮದ್ಯಮಾರಾಟ ವಿಷಯಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್‌ ರೇವಣ್ಣ ಹಾಗೂ ಹಾಸನ ಕ್ಷೇತ್ರದ ಶಾಸಕ ಪ್ರೀತಂ ಗೌಡ ನಡುವೆ ಸೋಮವಾರ ಮಾತಿನ ಚಕಮಕಿ ನಡೆದಿದ್ದು, ಪರಸ್ಪರರು ಏಕವಚನದಲ್ಲಿ ನಿಂದಿಸಿದ್ದಾರೆ.

ಕೊರೊನಾ ಸೋಂಕಿನ ನಿಯಂತ್ರಣ ಕ್ರಮ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಪ್ರಜ್ವಲ್‌, ‘ಲಾಕ್‌ಡೌನ್‌ ಇದ್ದರೂ ಮದ್ಯ ಮಾರಾಟ ಮಾಡುತ್ತಿದ್ದ ನಗರದ ಬಿಜೆಪಿ ಕಾರ್ಯಕರ್ತನಿಗೆ ಸೇರಿದ ಕ್ವಾಲಿಟಿ ಬಾರ್‌ ಮೇಲೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಸ್ಟಾಕ್‌ನಲ್ಲಿ ವ್ಯತ್ಯಾಸ ಬಂದಿದೆ. ಈವರೆಗೂ ಏಕೆ ಕ್ರಮ ಕೈಗೊಂಡಿಲ್ಲ‌?’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸಗೌಡ ಹಾಗೂ ಅಬಕಾರಿ ಉಪ ಆಯುಕ್ತ ಗೋಪಾಲಕೃಷ್ಣಗೌಡ ಅವರನ್ನು ತರಾಟೆಗೆ ತೆಗೆದುಕೊಂಡರು.

ಮಧ್ಯ ಪ್ರವೇಶಿಸಿದ ಪ್ರೀತಂ, ‘ನಿಯಮ ಉಲ್ಲಂಘಿಸಿದ ಯಾವುದೇ ಬಾರ್‌ ಪರವಾನಗಿಯನ್ನು ರದ್ದುಗೊಳಿಸಲಿ. ಅದು ಬಿಟ್ಟು ಶಾಸಕನ ಆಪ್ತನಿಗೆ ಸೇರಿದ ಬಾರ್ ಎಂದು ಮಾಧ್ಯಮಗಳಿಗೆ ಸಂಸದರು ಹೇಳಿಕೆ ನೀಡಿರುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಇಬ್ಬರ ನಡುವೆ ವಾಕ್ಸಮರ ಮುಂದುವರಿಯಿತು. ಸಚಿವರು, ಶಾಸಕರು ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್ ಅವರು ಇಬ್ಬರನ್ನೂ ಸಮಾಧಾನ ಮಾಡಲು ಹೆಣಗಾಡಿದರು.

‘ಎಲ್ಲಾ ಮದ್ಯದಂಗಡಿಗಳನ್ನು ಪರಿಶೀಲನೆ ಮಾಡಿ, ಸೀಲ್ ಹಾಕಬೇಕು. ಮತ್ತೆ ಸೀಲ್‌ ಓಪನ್‌ ಮಡಿದಾಗ ಸ್ಟಾಕ್‌ ವ್ಯತ್ಯಾಸವಿದ್ದರೆ ಕ್ರಮ ಕೈಗೊಳ್ಳುವಂತೆ’ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.