ಚನ್ನರಾಯಪಟ್ಟಣ: ತಾಲ್ಲೂಕಿನ ಆಲಗೋಡನಹಳ್ಳಿ ತೋಟದಲ್ಲಿರುವ ಒಂಟಿ ಮನೆಯಲ್ಲಿ ವೃದ್ಧ ದಂಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಮುರಳೀಧರ (80) ಮತ್ತು ಅವರ ಪತ್ನಿ ಉಮಾದೇವಿ (70) ಕೊಲೆಯಾದವರು.
ಪರಿಚಿತರಂತೆ ನಟಿಸಿ ಮನೆಯೊಳಗೆ ಪ್ರವೇಶಿಸಿರುವ ಕೊಲೆಗಾರರು, ತಲೆದಿಂಬಿನಿಂದ ಉಸಿರುಕಟ್ಟಿಸಿ ಇಬ್ಬರನ್ನು ಸಾಯಿಸಿದ್ದಾರೆ. ಉಮಾದೇವಿಯ ದೇಹ ಮಲಗುವ ಕೋಣೆಯಲ್ಲಿದ್ದರೆ, ಮುರಳೀಧರ್ ದೇಹ ಮತ್ತೊಂದು ಕೊಠಡಿಯಲ್ಲಿದೆ. ಮನೆಯಲ್ಲಿ ವಸ್ತುಗಳು ಮತ್ತು ಬಟ್ಟೆಬರೆ ಚೆಲ್ಲಾಪಿಲ್ಲಿಯಾಗಿವೆ. ಮನೆಯ ತುಂಬಾ ಖಾರದ ಪುಡಿ ಚೆಲ್ಲಾಡಿದ್ದಾರೆ. ಹಣಕ್ಕಾಗಿ ಬೀರುವನ್ನು ತಡಕಾಡಿದ್ದಾರೆ. ಮನೆಯಿಂದ ಹೊರ ಹೋಗುವಾಗ ದುಷ್ಕರ್ಮಿಗಳು ಮನೆಯ ಮುಂಬಾಗಿಲಿಗೆ ಬೀಗ ಹಾಕಿ ಪರಾರಿಯಾಗಿದ್ದಾರೆ.
ಎಂದಿನಂತೆ ಭಾನುವಾರ ಬೆಳಿಗ್ಗೆ ಹಾಲು ಹಾಕುವರು ಬಂದಾಗ ಮನೆಯ ಬಾಗಿಲು ಬೀಗ ಹಾಕಿತ್ತು. ಕಿಟಕಿಯಲ್ಲಿ ನೋಡಿದಾಗ ಉಮಾದೇವಿಯ ಮೃತದೇಹ ಕಂಡು ಬಂದು ಚನ್ನರಾಯಪಟ್ಟಣದಲ್ಲಿರುವ ಸಂಬಂಧಿಕರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸಗೌಡ, ಎಎಸ್ಪಿ ಬಿ.ಎನ್. ನಂದಿನಿ, ಡಿವೈಎಸ್ಪಿ ಬಿ.ಬಿ. ಲಕ್ಷ್ಮೇಗೌಡ ಮತ್ತು ಸಿಬ್ಬಂದಿ ಧಾವಿಸಿದರು. ಹಣಕ್ಕಾಗಿ ದಂಪತಿಯನ್ನು ಕೊಲೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ ಗೌಡ ತಿಳಿಸಿದರು.
ಶ್ವಾನದಳ, ಬೆರಳಚ್ಚು ತಜ್ಞರು ಬಂದು ಸ್ಥಳ ಪರಿಶೀಲಿಸಿದರು. ಕೊಲೆಯಾದ ಮನೆಯಿಂದ ಶ್ವಾನ ತೋಟದ ಮೂಲಕ ರಾಷ್ಟ್ರೀಯ ಹೆದ್ದಾರಿವರೆಗೆ ಸಂಚರಿಸಿತು. ಮನೆಯ ಹೊರಭಾಗದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿಲ್ಲ. ದಂಪತಿ ಸಾಕಿದ್ದ ನಾಯಿ ಕಳೆದ 15 ದಿನಗಳ ಹಿಂದೆ ನಾಪತ್ತೆಯಾಗಿತ್ತು.
ಕಳೆದ 25 ವರ್ಷಗಳಿಂದ ಆಲಗೋಡನಹಳ್ಳಿ ತೋಟದಲ್ಲಿರುವ ಒಂಟಿ ಮನೆಯಲ್ಲಿ ದಂಪತಿ ವಾಸಿಸುತ್ತಿದ್ದರು. ಇವರಿಗೆ ಮಕ್ಕಳಿರಲಿಲ್ಲ. ಐವರು ಸಹೋದರರು, ಐವರು ಸಹೋದರಿಯರು ಇದ್ದಾರೆ. ಕಳೆದ ವರ್ಷ ಒಬ್ಬ ಸೋದರ ಮೃತಪಟ್ಟಿದ್ದರು.
ಮುರಳೀಧರ್ ಅವರು ಆಲಗೋಡನಹಳ್ಳಿಯಲ್ಲಿ 90 ಎಕರೆ ಜಮೀನನ್ನು ಮಾರಾಟ ಮಾಡಿದ್ದರು. ಸದ್ಯ 40 ಎಕರೆ ತೋಟ ಇದೆ. ಆ ತೋಟದ ಮನೆಯಲ್ಲಿ ವಾಸ ಇದ್ದರು. ಅಕ್ಕಪಕ್ಕದವರ ಜೊತೆ ಅನೋನ್ಯವಾಗಿದ್ದರು.
ಸುದ್ದಿ ತಿಳಿದ ಕೂಡಲೇ ಸಹೋದರರು ಮತ್ತು ಸಹೋದರಿಯರು ಸ್ಥಳಕ್ಕೆ ಧಾವಿಸಿ ಅಣ್ಣ, ಅತ್ತಿಗೆ ಸಾವಿಗೆ ಕಂಬನಿ ಮಿಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.