ADVERTISEMENT

ಬಳ್ಳೂರಿನಲ್ಲಿ ಬದುಕಿನ ಸಂಧ್ಯಾಕಾಲ

ವೃಕ್ಷಮಾತೆಯ ಅಗಲಿಕೆಗೆ ಕಂಬನಿ ಮಿಡಿದ ಬೇಲೂರು ಜನ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 4:33 IST
Last Updated 15 ನವೆಂಬರ್ 2025, 4:33 IST
ಹಾಸನದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಗೌರವ ಸಲ್ಲಿಸಿದರು. ಶಾಸಕ ಸ್ವರೂಪ್‌ ಪ್ರಕಾಶ್, ಶಂಭುನಾಥ ಸ್ವಾಮೀಜಿ, ದತ್ತುಪುತ್ರ ಉಮೇಶ್‌ ಇದ್ದರು 
ಹಾಸನದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಗೌರವ ಸಲ್ಲಿಸಿದರು. ಶಾಸಕ ಸ್ವರೂಪ್‌ ಪ್ರಕಾಶ್, ಶಂಭುನಾಥ ಸ್ವಾಮೀಜಿ, ದತ್ತುಪುತ್ರ ಉಮೇಶ್‌ ಇದ್ದರು    

‌ಬೇಲೂರು: ವೃಕ್ಷಮಾತೆ ಎಂದೇ ಖ್ಯಾತರಾಗಿದ್ದ ಸಾಲುಮರದ ತಿಮ್ಮಕ್ಕ ರಾಜ್ಯ ಸರ್ಕಾರದ ಪರಿಸರ ರಾಯಭಾರಿಯೂ ಆಗಿದ್ದರು. ಆದರೆ, ಇಲ್ಲಿನ ಬಳ್ಳೂರಿನ ಮನೆಗೆ ಬರುವ ಪ್ರತಿಯೊಬ್ಬರನ್ನೂ ಅತ್ಯಂತ ಪ್ರೀತಿ, ಆತ್ಮೀಯತೆಯಿಂದ ಮಾತನಾಡಿಸುವ ಮೂಲಕ ಎಲ್ಲರ ಮನ ಗೆಲ್ಲುತ್ತಿದ್ದರು.

ಸಾಲುಮರದ ತಿಮ್ಮಕ್ಕ ಅವರು ಬಳ್ಳೂರಿನ ಉಮೇಶ್ ಅವರನ್ನು ದತ್ತು ತೆಗೆದುಕೊಂಡ ನಂತರ, ದತ್ತು ಪುತ್ರನ  ಸ್ವಗ್ರಾಮ ಬಳ್ಳೂರು ಗ್ರಾಮದಲ್ಲಿ ಹೆಚ್ಚಿನ ಕಾಲ ಕಳೆಯುತ್ತಿದ್ದರು. ಬಳ್ಳೂರು ಮಲೆನಾಡು ಪ್ರದೇಶವಾಗಿದ್ದು, ಚಳಿಗಾಲದಲ್ಲಿ ತಿಮ್ಮಕ್ಕನವರ ಆರೋಗ್ಯದ ದೃಷ್ಟಿಯಿಂದ ಬೆಂಗಳೂರಿನ ಮಂಜುನಾಥನಗರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ತಿಮ್ಮಕ್ಕನವರು ಇಪ್ಪತ್ತು ವರ್ಷಗಳಿಗೂ ಹೆಚ್ಚಿನ ಸಮಯವನ್ನು ಬೇಲೂರಿನಲ್ಲಿ ಕಳೆದಿದ್ದು, ಅವರ ಅಗಲಿಕೆಯ ಸುದ್ದಿ ಕೇಳಿದ ಬೇಲೂರಿನ ಜನ ನೀರವ ಮೌನಕ್ಕೆ ಜಾರಿದ್ದಾರೆ. ಸಾಲುಮರ ತಿಮ್ಮಕ್ಕ ಅವರನ್ನು ನೆನೆದು ಕಣ್ಣೀರಾದರು.

ADVERTISEMENT

ತಿಮ್ಮಕ್ಕನವರ ಹೆಸರಿನಲ್ಲಿ ಬೇಲೂರಿನ ಯಗಚಿ ಜಲಾಶಯದ ಬಳಿ ಸಾವಿರಾರು ಗಿಡಗಳನ್ನು ನೆಟ್ಟು ಬೆಳೆಸಲಾಗಿದೆ. ಈ ಗಿಡಗಳನ್ನು ನೆಡುವಾಗ ತಿಮ್ಮಕ್ಕನವರು ಖುಷಿ, ಲವಲವಿಕೆಯಿಂದ ಭಾಗವಹಿಸಿದ್ದರು.

ಅನಾರೋಗ್ಯದ ಕಾರಣ ಒಂದು ವರ್ಷದ ವರ್ಷದಿಂದ ಬಳ್ಳೂರಿನಲ್ಲೇ ವಾಸವಿದ್ದರು. ಯಾರೇ ಬಂದು ಕಾಲಿಗೆ ನಮಸ್ಕರಿಸಿದರೂ, ‘ನಿನಗೆ ಮಕ್ಕಳ ಭಾಗ್ಯ, ಆರೋಗ್ಯ ಭಾಗ್ಯ, ಐಶ್ವರ್ಯ ಭಾಗ್ಯ ದೊರೆಯಲಿ’ ಎಂದು ಆಶೀರ್ವಾದ ಮಾಡುತ್ತಿದ್ದರು.

ಈಚೆಗೆ ನಡೆದ ಹಾಸನದ ಹಾಸನಾಂಬ ಜಾತ್ರೆಗೂ ಹೋಗಿದ್ದ ಅವರು, ಹಾಸನಾಂಬೆಯ ದರ್ಶನ ಪಡೆದಿದ್ದರು. ಕಳೆದ ಒಂದು ವಾರದಿಂದ ಆಸ್ಪತ್ರೆಗೆ ದಾಖಲಾಗಿದ್ದರು.

ಅಂತಿಮ ದರ್ಶನಕ್ಕೆ ವ್ಯವಸ್ಥೆ: ಸಾಲುಮರದ ತಿಮ್ಮಕ್ಕನವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಇಲ್ಲಿನ ಜ್ಯೂನಿಯರ್‌ ಕಾಲೇಜು ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಪಟ್ಟಣ ಹಾಗೂ ಸುತ್ತಲಿನ ವಿವಿಧ ಗ್ರಾಮಗಳಿಂದ ಬಂದಿದ್ದ ಸಾವಿರಾರು ಜನರು ವೃಕ್ಷಮಾತೆಯ ಅಂತಿಮ ದರ್ಶನ ಪಡೆದರು.

ತಹಶೀಲ್ದಾರ್ ಶ್ರೀಧರ್ ಕಂಕನವಾಡಿ ಖುದ್ದು ಸ್ಥಳದಲ್ಲಿ ಹಾಜರಿದ್ದು, ಎಲ್ಲ ವ್ಯವಸ್ಥೆಯ ಉಸ್ತುವಾರಿ ನೋಡಿಕೊಂಡರು. ನೂಕುನುಗ್ಗಲು ಆಗದಂತೆ ಪುರಸಭೆ ಹಾಗೂ ಪೊಲೀಸ್ ಇಲಾಖೆಯಿಂದ ಬ್ಯಾರಿಕೇಡ್‌ ಅಳವಡಿಸಲಾಗಿತ್ತು.

ಬೇಲೂರು ತಾಲ್ಲೂಕಿನ ಹೆಬ್ಬಾಳು ಗ್ರಾಮದ ಪ್ರೌಢಶಾಲೆಯಲ್ಲಿ ಜೂನ್ ತಿಂಗಳಲ್ಲಿ ನಡೆದ ಪರಿಸರ ದಿನಾಚರಣೆಯಲ್ಲಿ ಭಾಗವಹಿಸಿದ್ದ ಕ್ಷಣ
ಬಳ್ಳೂರಿನ ಮನೆಯಲ್ಲಿ ತಿಮ್ಮಕ್ಕ ಅವರೊಂದಿಗೆ ದತ್ತು ಪುತ್ರ ಉಮೇಶ್ ಉಮೇಶ್ ಅವರ ಸ್ವಂತ ಅಮ್ಮ ಪ್ರಭಾವತಿ 
ಸಾಲುಮರದ ತಿಮ್ಮಕ್ಕ ವಾಸಿಸುತ್ತಿದ್ದ ಬೇಲೂರಿನ ಬಳ್ಳೂರಿನಲ್ಲಿರುವ ಮನೆ 

ಜಿಲ್ಲೆಯ ಹಲವೆಡೆ ನಮನ

ಹಾಸನ: ಬೆಂಗಳೂರಿನ ಆಸ್ಪತ್ರೆಯಿಂದ ಹುಲಿಕಲ್‌ಗೆ ಬಂದ ಪಾರ್ಥಿವ ಶರೀರವನ್ನು ನಂತರ ಹಾಸನ ಜಿಲ್ಲೆಗೆ ತರಲಾಯಿತು. ಮೊದಲಿಗೆ ಚನ್ನರಾಯಪಟ್ಟಣದಲ್ಲಿ ಸಾರ್ವಜನಿಕರು ಅಂತಿಮ ದರ್ಶನ ಪಡೆದರು. ನಂತರ ಹಾಸನದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ತಿಮ್ಮಕ್ಕ ಅವರಿಗೆ ಅಂತಿಮ ಗೌರವ ಸಲ್ಲಿಸಲಾಯಿತು. ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಸಂಸದ ಶ್ರೇಯಸ್‌ ಪಟೇಲ್‌ ಶಾಸಕರಾದ ಎ.ಮಂಜು ಸ್ವರೂಪ್‌ ಪ್ರಕಾಶ್‌ ಮೇಯರ್‌ ಗಿರೀಶ್‌ ಚನ್ನವೀರಪ್ಪ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ ಎಸ್ಪಿ ಮೊಹಮ್ಮದ್‌ ಸುಜೀತಾ ಸೇರಿದಂತೆ ಹಲವಾರು ಗಣ್ಯರು ಅಂತಿಮ ನಮನ ಸಲ್ಲಿಸಿದರು. ‌ಅಲ್ಲಿಂದ ಬೇಲೂರಿಗೆ ತೆಗೆದುಕೊಂಡು ಹೋಗಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.