ADVERTISEMENT

ವೈದ್ಯರ ನಿರ್ಲಕ್ಷ್ಯ: ಶಿಶುಗಳ ಪ್ರಾಣಕ್ಕೆ ಕುತ್ತು

ಕಾರ್ಯಾಗಾರದಲ್ಲಿ ಹಿಮ್ಸ್‌ ನಿರ್ದೇಶಕ ರವಿಕುಮಾರ್‌

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 14:11 IST
Last Updated 5 ಜುಲೈ 2018, 14:11 IST
ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಶುಶ್ರೂಷಕರು.
ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಶುಶ್ರೂಷಕರು.   

ಹಾಸನ: ನವಜಾತ ಶಿಶುಗಳ ಮರಣ ಪ್ರಮಾಣ ತಗ್ಗಿಸುವಲ್ಲಿ ವೈದ್ಯಾಧಿಕಾರಿಗಳ ಪಾತ್ರ ಹಿರಿದಾಗಿದ್ದು, ಈ ನಿಟ್ಟಿನಲ್ಲಿ ಎಚ್ಚರ ವಹಿಸಬೇಕು ಎಂದು ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ. ಬಿ.ಸಿ.ರವಿಕುಮಾರ್ ಸಲಹೆ ನೀಡಿದರು.

ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಶಿಯನ್ ವತಿಯಿಂದ ಗುರುವಾರ ಹಿಮ್ಸ್ ಆಸ್ಪತ್ರೆಯಲ್ಲಿ ನವಜಾತ ಶಿಶುಗಳಿಗೆ ಸೋಂಕು ತಡೆಗಟ್ಟುವ ಕುರಿತು ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಕಿರಿಯ ವೈದ್ಯರ ನಿರ್ಲಕ್ಷ್ಯದ ಪರಿಣಾಮ ಮಕ್ಕಳು ಪ್ರಾಣ ಕಳೆದುಕೊಳ್ಳುವ ಸಂಭವ ಹೆಚ್ಚಿರುತ್ತದೆ. ಕೈಗವಸು, ಸಮವಸ್ತ್ರ, ಸೂಕ್ತ ಉಪಕರಣಗಳಿಲ್ಲದೆ ನವಜಾತ ಶಿಶು ಘಟಕ ಪ್ರವೇಶಿಸಿದರೆ ಸೋಂಕು ತಗುಲಿ ಮಗುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಈ ರೀತಿಯ ಕಾರ್ಯಾಗಾರಗಳಲ್ಲಿ ಭಾಗವಹಿಸಿ ವೃತ್ತಿಯಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೆಲ ತಿಂಗಳುಗಳ ಹಿಂದೆ ಮಾಧ್ಯಮಗಳಲ್ಲಿ ಶಿಶು ಮರಣ ಪ್ರಮಾಣದಲ್ಲಿ ಹಠಾತ್ ಹೆಚ್ಚಳದ ವರದಿಗಳು ಪ್ರಕಟಗೊಂಡವು. ಇದರಿಂದ ರಾಜ್ಯಾದ್ಯಂತ ಚರ್ಚೆ ಆರಂಭಗೊಂಡಿತು ಎಂದರು. ಬೆಂಗಳೂರಿನ ನವಜಾತ ಶಿಶು ತಜ್ಞೆ ಡಾ. ಸ್ವರ್ಣರೇಖಾ ಭಟ್ ನೇತೃತ್ವದ ಶಾಸ್ತ್ರಜ್ಞರ ತಂಡ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಸೋಂಕು ತಪ್ಪಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿತು.

ಕಾರ್ಯಾಗಾರದಲ್ಲಿ ಹಾಸನ ಸುತ್ತಮುತ್ತಲ ಜಿಲ್ಲೆಗಳ ಶುಶ್ರೂಷಕರು ಭಾಗವಹಿಸಿದ್ದರು. ಡಾ. ಅಭಿಷೇಕ್, ಬೆಂಗಳೂರಿನ ಡಾ.ಭಾರತಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಕೆ.ಶಂಕರ್, ಡಾ. ಪ್ರಸನ್ನಕುಮಾರ್, ಡಾ. ಲಕ್ಷ್ಮಿಕಾಂತ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.