ADVERTISEMENT

ಚನ್ನರಾಯಪಟ್ಟಣ: ಕೌಟುಂಬಿಕ ಕಲಹ, ಗುಂಡು ಹಾರಿಸಿ ಯುವಕನ ಕೊಲೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2020, 13:55 IST
Last Updated 28 ಆಗಸ್ಟ್ 2020, 13:55 IST
ಪುನೀತ
ಪುನೀತ   

ಚನ್ನರಾಯಪಟ್ಟಣ: ಬಂದೂಕಿನಿಂದ ಗುಂಡುಹಾರಿಸಿ ಯುವಕನನ್ನು ಕೊಲೆ ಮಾಡಿರುವ ಘಟನೆ ಗುರುವಾರ ರಾತ್ರಿ ಬೇಡಿಗನಹಳ್ಳಿ ಕೆರೆ ಏರಿ ಮೇಲೆ ನಡೆದಿದೆ. ಯುವಕ ಸ್ಥಳದಲ್ಲಿ ಮೃತಪಟ್ಟಿದ್ದಾರೆ.

ಪುನೀತ (25) ಮೃತ ಯುವಕ. ಕೊಲೆ ಆರೋಪಿಗಳಾದ ಆತನ ತಂದೆ ಹೇಮಂತ, ಸೋದರ ಪ್ರಶಾಂತ ಮತ್ತು ಇನ್ನೊಬ್ಬ ವ್ಯಕ್ತಿ ತಲೆ ಮರೆಸಿಕೊಂಡಿದ್ದಾರೆ.

ಘಟನೆ ವಿವರ: 7 ವರ್ಷಗಳಿಂದ ಸಂಸಾರದಲ್ಲಿ ಹೊಂದಾಣಿಕೆ ಇಲ್ಲದ ಕಾರಣ ಹೇಮಂತ ಮತ್ತು ಪತ್ನಿ ಯಶೋದಮ್ಮ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. ಜಿ.ಹೊಸೂರು ಗ್ರಾಮದಲ್ಲಿ ಹೇಮಂತ ಜೊತೆ ಪ್ರಶಾಂತ ವಾಸವಿದ್ದರೆ, ತವರು ಮನೆ ಬೇಡಿಗನಹಳ್ಳಿಯಲ್ಲಿ ತಾಯಿ ಯಶೋದಮ್ಮನ ಜೊತೆ ಪುನೀತ್‌ ವಾಸವಾಗಿದ್ದರು.

ADVERTISEMENT

ಯಶೋದಮ್ಮನಿಗೆ ಹೇಮಂತ ಜೀವನಾಂಶ ನೀಡಿರಲಿಲ್ಲ. ಆಕೆ ಕೂಲಿ ಮಾಡಿ ಜೀವನ ನಡೆಸುತ್ತಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಊರವರು 2-3 ಬಾರಿ ರಾಜಿ ಪಂಚಾಯಿತಿ ಮಾಡಿದ್ದರೂ ಸಮಸ್ಯೆ ಬಗೆಹರಿದಿರಲಿಲ್ಲ. ಈಚೆಗೆ ಪುನೀತ, ಜಿ.ಹೊಸೂರು ಗ್ರಾಮಕ್ಕೆ ತೆರಳಿ ತಂದೆಯ ತೋಟದ ತೆಂಗಿನಕಾಯಿ ಕೀಳಿದ್ದ. ಈ ವಿಚಾರದಲ್ಲಿ ಸಿಟ್ಟಾಗಿದ್ದ ಹೇಮಂತ ‘ಮಗ ಪುನೀತನಿಗೆ ಗತಿ ಕಾಣಿಸುತ್ತೇನೆ’ ಎಂದು ಹೇಳುತ್ತಿದ್ದ.

ಮೋಟಾರ್ ಬೈಕಿನಲ್ಲಿ ಗುರುವಾರ ರಾತ್ರಿ ಪುನೀತ ಹೊಸೂರು ಗ್ರಾಮದಿಂದ ಬೇಡಿಗನಹಳ್ಳಿಗೆ ತೆರಳುತ್ತಿದ್ದಾಗ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ.

‘ಹೇಮಂತ ಮತ್ತು ಇನ್ನೊಬ್ಬ ಮಗ ಪ್ರಶಾಂತ ಹಳೇ ದ್ವೇಷದಿಂದ ಪುನೀತನನ್ನು ಕೊಲೆ ಮಾಡಲು ಸುಪಾರಿ ನೀಡಿದ್ದಾರೆ’ ಎಂದು ಯಶೋದಮ್ಮ ದೂರು ನೀಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಹೊಸೂರು ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸಗೌಡ, ಡಿವೈಎಸ್‌ಪಿ ಬಿ.ಬಿ.ಲಕ್ಷ್ಮೇಗೌಡ, ಇನ್‌ಸ್ಪೆಕ್ಟರ್ ವಿನಯ್, ಪಿಎಸ್ಐ ಎಸ್.ಪಿ.ವಿನೋದ್ ರಾಜ್ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.