
ರಾಣೆಬೆನ್ನೂರು: ‘ಮೋಕ್ಷ ಪ್ರಾಪ್ತಿಗೆ ಗುರುವಿನ ಮಾರ್ಗದರ್ಶನ ಅವಶ್ಯಕ. ಸ್ವಾರ್ಥ, ರಾಗ, ದ್ವೇಷಗಳನ್ನು ಕಡಿಮೆ ಮಾಡಿ ಸರಳ ಜೀವನ ನಡೆಸಿ. ಎಲ್ಲರೂ ನನ್ನವರೆನ್ನುವ ಭಾವ ಮನದುಂಬಿರಲಿ’ ಎಂದು ಕಾಶೀ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಮಣಕೂರು ಗ್ರಾಮದಲ್ಲಿ ಸೋಮವಾರ ಸಂಜೆ ನಡೆದ ಹಾಲಸ್ವಾಮಿ ಮಠದ ಜಾತ್ರಾ ಮಹೋತ್ಸವ, ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಷಷ್ಠಿ ಪೂರ್ತಿ ಮಸ್ತಕಾಭಿಷೇಕ ಹಾಗೂ ಧರ್ಮ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
‘ಸದಾ ದೈವ ಚಿಂತನೆಯಲ್ಲಿ ತೊಡಗಿರುವ ಮಲ್ಲಿಕಾರ್ಜುನ ಸ್ವಾಮೀಜಿ ಅವರು ಸಮಾಜೋದ್ಧಾರಕ ಕಾಯಕ ಕಾರ್ಯಗಳಲ್ಲಿ ನಿರತರಾಗಿರುವರು’ ಎಂದರು.
ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಜಗತ್ತು ಕಂಡಿರುವ ಶ್ರೇಷ್ಠ ಪರಂಪರೆ ವೀರಶೈವ ಪೀಠ. ಗುರು ಪರುಷ ಮಣಿಗಿಂತಲೂ ಶ್ರೇಷ್ಠ. ಪರುಷ ಮಣಿ ಸನಿಹಕ್ಕೆ ಬಂದವರನ್ನು ಚಿನ್ನವಾಗಿಸುತ್ತದೆ. ಗುರುಗಳು ತನ್ನನ್ನು ಕೂಡ ಮೀರಿಸುವ ಶಿಷ್ಯರನ್ನು ನಿರ್ಮಿಸುತ್ತಾರೆ’ ಎಂದರು.
ಮಾಜಿ ಶಾಸಕರಾದ ಅರುಣ ಕುಮಾರ ಪೂಜಾರ ಕಾರ್ಯಕ್ರಮ ಉದ್ಘಾಟಿಸಿದರು. ‘ಶ್ರೀಶೈಲ ಪೀಠದ ಶಾಖಾಮಠಗಳಲ್ಲಿ ಒಂದಾದ ಮಣಕೂರು ಮಲ್ಲಿಕಾರ್ಜುನ ಶ್ರೀಗಳ ಷಷ್ಠಿಪೂರ್ತಿ ಕಾರ್ಯಕ್ರಮವು ಜೀವನದ ಅದ್ಭುತ ಕ್ಷಣಗಳಲ್ಲಿ ಒಂದಾಗಿದೆ. ಸುತ್ತಮುತ್ತಲ ಗ್ರಾಮಗಳಿಗೆ ಧರ್ಮ ಮಾರ್ಗದರ್ಶಕರಾದ ಶ್ರೀಗಳ ಕಾರ್ಯ ಸದಾ ಹೀಗೆಯೇ ಮುಂದುವರಿಯಲಿ’ ಎಂದರು.
ರಟ್ಟೀಹಳ್ಳಿಯ ಕಬ್ಬಿಣ ಕಂತಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಉಪದೇಶಾಮೃತ ನೀಡಿದರು. ಅಂಬಿಕಾನಗರದ ಕರಿಸಿದ್ಧೇಶ್ವರ ಸ್ವಾಮೀಜಿ, ವಿಶ್ವಾರಾಧ್ಯ ಸ್ವಾಮೀಜಿ, ಹಿರೇಮಠ ಬಿಳಕಿ ಮಠದ ರಾಜೇಂದ್ರ ಸ್ವಾಮೀಜಿ, ಶಿವಕುಮಾರ ಹಾಲಸ್ವಾಮೀಜಿ ರಾಂಪುರ, ಗುಡ್ಡದ ಆನ್ವೇರಿ ಶಿವಯೋಗಿ ಸ್ವಾಮೀಜಿ, ಲಿಂಗದಹಳ್ಳಿ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಪಿಡಿಒ ಬಸನಗೌಡ ಪಾಟೀಲ, ಪ್ರಕಾಶ ಗಚ್ಚಿನಮಠ, ಪಿ.ವಿ. ಮಠದ, ಜಂಗಮ ಸಮಾಜ ಹಾಗೂ ನೌಕರರ ವೇದಿಕೆಯ ಅಧ್ಯಕ್ಷ ವಿ.ಎಸ್. ಹಿರೇಮಠ, ಎಸ್.ಎಸ್.ರಾಮಲಿಂಗಣ್ಣನವರ, ಜಗದೀಶ ಮಳಿಮಠ, ಗಂಗಾಧರ ಮಠದ ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.