ADVERTISEMENT

ಹಾವೇರಿ| ಮಸೀದಿಗಳಲ್ಲಿ ಮೈಕ್ ಬಳಸುವುದು ನ್ಯಾಯಾಂಗ ನಿಂದನೆ: ಬಸನಗೌಡ ಪಾಟೀಲ ಯತ್ನಾಳ

ಹಾವೇರಿ ಹಿಂದೂ ಮಹಾಗಣಪತಿಗೆ 45ರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 4:13 IST
Last Updated 20 ಸೆಪ್ಟೆಂಬರ್ 2025, 4:13 IST
ಹಾವೇರಿಯ ‘ಹಾವೇರಿ ಹಿಂದೂ ಮಹಾಗಣಪತಿ’ ಮೂರ್ತಿ ಪ್ರತಿಷ್ಠಾಪನೆಯ 45ನೇ ವರ್ಷದ ಸಂಭ್ರಮದ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ‘ಬಹಿರಂಗ ಸಭೆ’ಯಲ್ಲಿ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು
ಹಾವೇರಿಯ ‘ಹಾವೇರಿ ಹಿಂದೂ ಮಹಾಗಣಪತಿ’ ಮೂರ್ತಿ ಪ್ರತಿಷ್ಠಾಪನೆಯ 45ನೇ ವರ್ಷದ ಸಂಭ್ರಮದ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ‘ಬಹಿರಂಗ ಸಭೆ’ಯಲ್ಲಿ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು   

ಹಾವೇರಿ: ‘ಗಣೇಶೋತ್ಸವದಲ್ಲಿ ಡಿ.ಜೆ. (ಡಿಸ್ಕ್ ಜಾಕಿ) ಬಳಸುವುದನ್ನು ರಾಜ್ಯ ಸರ್ಕಾರ ನಿರ್ಬಂಧಿಸಿದೆ. ಆದರೆ, ರಾಜ್ಯದ ಮಸೀದಿಗಳಲ್ಲಿ ದಿನಕ್ಕೆ ಐದು ಬಾರಿ ಜೋರಾಗಿ ಮೈಕ್‌ ಹಚ್ಚುತ್ತಾರೆ. ಇದಕ್ಕೆ ಅನುಮತಿ ನೀಡಿದವರು ಯಾರು ?. ಇದು ನ್ಯಾಯಾಂಗ ನಿಂದನೆಯಾಗಿದ್ದು, ಇದರ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತೇನೆ’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಇಲ್ಲಿಯ ‘ಹಾವೇರಿ ಹಿಂದೂ ಮಹಾಗಣಪತಿ’ ಮೂರ್ತಿ ಪ್ರತಿಷ್ಠಾಪನೆಯ 45ನೇ ವರ್ಷದ ಸಂಭ್ರಮದ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ‘ಬಹಿರಂಗ ಸಭೆ’ಯಲ್ಲಿ ಪಾಲ್ಗೊಂಡಿದ್ದ ಅವರು, ಡಿ.ಜೆ.ಗೆ ಅನುಮತಿ ನೀಡದ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

‘ಪಾಕಿಸ್ತಾನ್‌ದ ಬಾವುಟ ಹಾರಿಸುತ್ತಾರೆ. ತಮ್ಮಿಷ್ಟದಂತೆ ಮೈಕ್ ಹಚ್ಚುತ್ತಾರೆ. ಎಲ್ಲದಕ್ಕೂ ಅನುಮತಿ ಕೊಟ್ಟವರು ಯಾರು ? ಈ ಪ್ರಶ್ನೆಗೆ ಪೊಲೀಸರು ನ್ಯಾಯಾಲಯದಲ್ಲೇ ಉತ್ತರಿಸಬೇಕಾಗುತ್ತದೆ. ಹಿಂದೂಗಳ ಆಚರಣೆ, ಧಾರ್ಮಿಕ ನಂಬಿಕೆಗೆ ಧಕ್ಕೆಯಾದರೆ ನಾನು ಸಹಿಸುವುದಿಲ್ಲ’ ಎಂದು ಗುಡುಗಿದರು.

‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ವಿರೋಧ ಪಕ್ಷದವರು ಸಹ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಆಡಳಿತ ಪಕ್ಷದ ಹುಳುಕು ಹೊರಗೆ ತೆಗೆದರೆ, ತಮ್ಮ ತಂದೆಯ ಹುಳುಕು ಹೊರಗೆ ಬರುತ್ತದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರೂ ಮೌನವಾಗಿದ್ದಾರೆ. ಹಿಂದೂಗಳ ರಕ್ಷಣೆ ಮರೆತು ಕುಟುಂಬ ರಾಜಕಾರಣ ಮಾಡಿದವರಿಂದಲೇ ಇಂದು ಬಿಜೆಪಿ ವಿರೋಧ ಪಕ್ಷದಲ್ಲಿದೆ. ಇಂಥವರಿಗೆ ಮುಂದಿನ ದಿನಗಳಲ್ಲಿ ಹಿಂದೂಗಳು ತಕ್ಕ ಪಾಠ ಕಲಿಸಲು ಸಜ್ಜಾಗುತ್ತಿದ್ದಾರೆ’ ಎಂದರು.

‘ಗಣೇಶೋತ್ಸವದ ನಿಮಿತ್ತ ಚಾಮರಾಜನಗರದಿಂದ ಬೀದರ್‌ವರೆಗೂ ಪ್ರವಾಸ ಮಾಡುತ್ತಿದ್ದೇನೆ. ಜಾತಿ ಮರೆತು ಹಿಂದೂ ಧರ್ಮದ ಪರವಾಗಿ ನಿಲ್ಲುವುದಾಗಿ ಜನರು ಹೇಳುತ್ತಿದ್ದಾರೆ. ಇವರೆಲ್ಲರ ಆಶೀರ್ವಾದದಿಂದ 130 ಸೀಟುಗಳು ನನಗೆ ಬರುತ್ತವೆ. 2028ಕ್ಕೆ ನಾನೇ ಮುಖ್ಯಮಂತ್ರಿ ಆಗುತ್ತೇನೆ. ಅವಾಗ, ಜೆಸಿಬಿ ಪೂಜೆ ಮಾಡಿಯೇ ಅಧಿಕಾರ ಸ್ವೀಕರಿಸುತ್ತೇನೆ. ಈಗಿನ ಪೊಲೀಸರು, ಕಾಂಗ್ರೆಸ್ ಸರ್ಕಾರದ ಮಾತು ಕೇಳುತ್ತಿದ್ದಾರೆ. ನನ್ನ ಸರ್ಕಾರ ಬಂದರೆ, ಅವರು ನನ್ನ ಮಾತು ಕೇಳುತ್ತಾರೆ. ಅವರ ಕೈಗೆ ಎಕೆ 47 ಗನ್ ಕೊಡುತ್ತೇನೆ. ಗಣೇಶ ಮೆರವಣಿಗೆ ಮೇಲೆ ಕಲ್ಲು ಎಸೆದರೆ, ಢಂ ಢಂ... ಖಚಿತ’ ಎಂದು ಗುಡುಗಿದರು.

‘ಭ್ರಷ್ಟಾಚಾರ ಮುಕ್ತವಾದ ಹಿಂದೂಪರ ಸರ್ಕಾರ ನನ್ನದಾಗುತ್ತದೆ. ಅಭಿವೃದ್ಧಿ ಹಾಗೂ ನೀರಾವರಿ ಯೋಜನೆಗೆ ಆದ್ಯತೆ ನೀಡುತ್ತೇನೆ. ಎಲ್ಲ ಬಡವರಿಗೆ ₹ 10 ಲಕ್ಷ‌ ಮೊತ್ತದ ಮನೆ ನಿರ್ಮಿಸಿಕೊಡುತ್ತೇವೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದ ಮೂಲಕ ಕೇಸರಿ (ಹಿಂದೂ) ಹಾಗೂ ನೀಲಿಗೆ (ಪರಿಶಿಷ್ಟರು) ನ್ಯಾಯ ಕೊಡುತ್ತೇನೆ’ ಎಂದರು.

‘ಆಳುವವರಿಗೆ ಧೈರ್ಯ ಬೇಕು. ನಮ್ಮ ಬಿಜೆಪಿ ಸರ್ಕಾರವಿದ್ದಾಗ, ನಿಮ್ಮದೇ ಜಿಲ್ಲೆಯ ಬಸವರಾಜ ಬೊಮ್ಮಾಯಿ ಗೃಹ ಮಂತ್ರಿಯಾಗಿದ್ದರು. ಡಿ.ಜೆ.ಹಳ್ಳಿ ಠಾಣೆಗೆ ಬೆಂಕಿ ಹಚ್ಚಿದಾಗ, ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಷ್ಟೇ ಹೇಳುತ್ತಿದ್ದರು. ಹಣ ಪಡೆದು ವರ್ಗಾವಣೆ ಮಾಡುತ್ತಿದ್ದ ಅವರ ಮಾತನೂ ಯಾವ ಪೊಲೀಸ್ ಸಹ ಕೇಳುತ್ತಿರಲಿಲ್ಲ. ಇಂಥವರಿಂದ ಏನು ಆಗುವುದಿಲ್ಲ. ರಾಜ್ಯದಲ್ಲಿ ಯೋಗಿ ಆದಿತ್ಯನಾಥ ಅವರಂಥ ನಾಯಕ ಬರಬೇಕು. ನನ್ನ ಕ್ಷೇತ್ರ ವಿಜಯಪುರದಲ್ಲಿ ಡಿ.ಜೆ.ಗೆ ನಿರ್ಬಂಧವಿಲ್ಲ. ಖಡಕ್ ಪೊಲೀಸ್ ಅಧಿಕಾರಿಗಳಿದ್ದಾರೆ. ಒಬ್ಬನೂ ಬಾಲ ಬಿಚ್ಚುವುದಿಲ್ಲ’ ಎಂದು ಹೇಳಿದರು.

‘ಪರಿಶಿಷ್ಟ ಮಹಿಳೆ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದೆ’ ಎಂಬುದಾಗಿ ವಿಡಿಯೊ ತಿರುಚಿ ನನ್ನ ವಿರುದ್ಧವೇ ಕೆಲವರು ಆರೋಪ ಮಾಡುತ್ತಿದ್ದಾರೆ. ಇದರಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಕಡೆಯ ಕೆಲ ನಾಯಕರ ಕೈವಾಡವಿದೆ. ಈ ಆರೋಪ ಸುಳ್ಳು. ಇದೇ ಕಾರಣಕ್ಕೆ ಪರಿಶಿಷ್ಟ ಮುಖಂಡರು, ನನ್ನನ್ನು ಅಂಬೇಡ್ಕರ್‌ ಪುತ್ಥಳಿ ಬಳಿ ಕರೆದೊಯ್ದು ಮಾಲೆ ಹಾಕಿಸಿದ್ದಾರೆ. ಇವರ ಪ್ರೀತಿಗೆ ನಾನು ಸದಾ ಚಿರಋಣಿ. ನಾನು ಮುಖ್ಯಮಂತ್ರಿಯಾದರೆ, ಪರಿಶಿಷ್ಟದ ಏಳಿಗೆಗೆ ಆದ್ಯತೆ ನೀಡುತ್ತೇನೆ’ ಎಂದು ತಿಳಿಸಿದರು.

ಕಿಕ್ಕಿರಿದು ಸೇರಿದ ಯುವಜನತೆ:

ಗುರುವಾರ ಸಂಜೆ 6 ಗಂಟೆಗೆ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಬಸನಗೌಡ ಪಾಟೀಲ ಯತ್ನಾಳ ಅವರು ರಾತ್ರಿ 9.30 ಗಂಟೆಗೆ ಸ್ಥಳಕ್ಕೆ ಬಂದರು. ಕಿಕ್ಕಿರಿದು ಸೇರಿದ್ದ ಯುವಜನತೆ, ಮೂರೂವರೆ ಗಂಟೆ ಕಾದು ಯತ್ನಾಳ ಅವರ ಭಾಷಣ ಕೇಳಿದರು.

ಮದ್ಯ ಹಣ ಕುರಿ– ಕೋಳಿ ಊಟ ನೋಡಿ ಮತ ಹಾಕಿದ್ದರಿಂದ ರಾಜ್ಯ ಹಾಳಾಗಿದೆ. ಇನ್ನಾದರೂ ಹಿಂದೂಗಳು ಎಚ್ಚೆತ್ತುಕೊಂಡು ಹಿಂದೂತ್ವದ ಹುರುಪಿನೊಂದಿಗೆ ಮತ ಹಾಕಬೇಕು 
ಬಸನಗೌಡ ಪಾಟೀಲ ಯತ್ನಾಳ ವಿಜಯಪುರ ಶಾಸಕ

‘ಗಣಪತಿ ಮೂರ್ತಿಗೆ ಕಪ್ಪುಬಟ್ಟೆ’

‘ದಾವಣಗೆರೆಯಲ್ಲಿ ಗಣಪತಿ ಮೂರ್ತಿಗೆ ಕಪ್ಪು ಬಟ್ಟೆ ಕಟ್ಟಿ ಮಸೀದಿ ಎದುರು ಕೊಂಡೊಯ್ದಿದ್ದಾರೆ. ನನ್ನ ಭಾಷಣದ ವೇಳೆಯಲ್ಲಿ ಮೈಕ್ ಕಸಿದುಕೊಂಡಿದ್ದಾರೆ.  ಅಲ್ಲಿಯ ಎಸ್ಪಿ ವರ್ತನೆಗೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡುತ್ತೇನೆ. ಮುಂದಿನ ವರ್ಷ ನಾವೇ ಸ್ಥಳಕ್ಕೆ ಹೋಗುತ್ತೇನೆ. ಜೊತೆಗೆ ಎಸ್ಪಿ ವಿರುದ್ಧ ಹಕ್ಕುಚ್ಯುತಿ ಮಂಡಿಸುತ್ತೇನೆ’ ಎಂದು ಬಸನಗೌಡ ಪಾಟೀಲ ಯತ್ನಾಳ ಗುಡುಗಿದರು.

‘ಸಮಗ್ರ ಹಿಂದೂಗಳು ಒಂದಾದರೆ ಮಾತ್ರ ಭಾರತ ಉಳಿಯುತ್ತದೆ. ಇಂಗ್ಲೆಂಡ್‌ ಫ್ರಾನ್ಸ್ ಜರ್ಮನ್‌ ದೇಶಗಳು ಸಹ ಕ್ರಮೇಣ ಮುಸ್ಲಿಂ ದೇಶಗಳಾಗುತ್ತಿವೆ. ಈ ಸ್ಥಿತಿ ಭಾರತಕ್ಕೂ ಬರುವುದಾಗಿ ಕೆಲ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಲುಮತದ ಗುರುವಾಗುವ ಬದಲು ಮುಸ್ಲಿಂ ಧರ್ಮಗುರುಗಳಾಗಿದ್ದಾರೆ. ಹಿಂದೂಗಳು ಎಚ್ಚೆತ್ತುಕೊಳ್ಳುವ ಸಮಯ ಬಂದಿದೆ. ಇನ್ನಾದರೂ ಜಾತಿ ಮರೆತು ಒಗ್ಗಟ್ಟಾಗಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.