ಹಾವೇರಿ: ‘ಕೋವಿಡ್ ನಿಯಂತ್ರಣ ಹೆಚ್ಚು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು. ಕೋವಿಡ್ ಸೋಂಕಿನಿಂದ ಮರಣ ಹೊಂದುವವರ ಸಂಖ್ಯೆ ಶೇ 1.8ರಷ್ಟಿದೆ. ಈ ಪ್ರಮಾಣ ಮತ್ತಷ್ಟು ತಗ್ಗಿಸಲು ತೀವ್ರ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಕೋವಿಡ್ ನಿಯಂತ್ರಣ ಕುರಿತು ಆರೋಗ್ಯಾಧಿಕಾರಿಗಳಿಂದ ಮಾಹಿತಿ ಪಡೆದು, ಆರ್ಟಿಪಿಸಿಆರ್ ಪರೀಕ್ಷೆಗಳನ್ನು ಹೆಚ್ಚು ಮಾಡಲು ಅವರು ಸೂಚನೆ ನೀಡಿದರು.
ಪ್ರಸಕ್ತ ಸಾಲಿನ ಮನೆಗಳ ಹಾನಿ ಹಾಗೂ ಬೆಳೆ ಹಾನಿ ಹಾಗೂ ಪರಿಹಾರ ಕ್ರಮಗಳ ಪ್ರಗತಿಯ ಮಾಹಿತಿ ಪಡೆದು, ಸಮೀಕ್ಷೆ ಮಾಹಿತಿಯನ್ನು ತ್ವರಿತವಾಗಿ ತಂತ್ರಾಂಶದಲ್ಲಿ ಅಳವಡಿಸಿ ಸಂತ್ರಸ್ತರಿಗೆ ಪರಿಹಾರ ವಿತರಣೆಗೆ ತ್ವರಿತ ಕ್ರಮ ವಹಿಸಲು ಸೂಚನೆ ನೀಡಿದರು.
2019-20ನೇ ಸಾಲಿನಲ್ಲಿ ಬೆಳೆ ಪರಿಹಾರ ವಿತರಣೆಯಲ್ಲಿ ನಡೆದಿರುವ ಲೋಪ ಕುರಿತಂತೆ ಕೈಗೊಂಡಿರುವ ಪೊಲೀಸ್ ತನಿಖೆಯ ಪ್ರಗತಿಯ ಮಾಹಿತಿ ಪಡೆದ ಗೃಹ ಸಚಿವರು ತ್ವರಿತವಾಗಿ ತನಿಖಾ ಕಾರ್ಯ ಪೂರ್ಣ ಗೊಳಿಸಿ. ಅರ್ಹರಿಗೆ ಪರಿಹಾರ ವಿತರಣೆಗೆ ಅನುಕೂಲವಾಗಲಿದೆ. ತನಿಖೆಯ ವಿಳಂಬದಿಂದ ಅಂದಾಜು 10 ಸಾವಿರ ರೈತರ ಪರಿಹಾರ ಪಡೆಯುವಲ್ಲಿ ವಿಳಂಬವಾಗಿದೆ. ತನಿಖೆ ಆದಷ್ಟು ಬೇಗ ಪೂರ್ಣಗೊಳಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.