ತಡಸ(ದುಂಡಶಿ): ಜೂನ್ ತಿಂಗಳಲ್ಲಿ ಆಗಬೇಕಾಗಿದ್ದ ಮಳೆಯು ಒಂದು ತಿಂಗಳು ವಿಳಂಬವಾಗಿದ್ದರಿಂದ ರೈತರು ಎರಡೆರಡು ಬಾರಿ ಬಿತ್ತನೆ ಮಾಡಿ, ಸರಿಯಾಗಿ ಬೆಳೆ ಬಾರದೆ ಕಂಗಾಲಾಗಿದ್ದಾರೆ.
ಮಳೆಗಾಲದಲ್ಲಿ 100 ಹೆಕ್ಟೇರ್ಗೂ ಅಧಿಕ ಪ್ರದೇಶದಲ್ಲಿ ನೀರಾವರಿ ಸೌಲಭ್ಯವನ್ನು ಒದಗಿಸುವ ಹಳ್ಳವು ಕಳೆದ ವರ್ಷ ಜೂನ್ ತಿಂಗಳಲ್ಲೇ ಭರ್ತಿಯಾಗಿ ಕೋಡಿ ಬಿದ್ದಿತ್ತು. ಆಗಸ್ಟ್ ತಿಂಗಳಲ್ಲಿ ನೀರಿಲ್ಲದೆ ಬಿಕೋ ಎನ್ನುತ್ತಿದೆ. ಮೇವು ಹಾಗೂ ನೀರಿಗಾಗಿ ಜಾನುವಾರುಗಳು ಪರದಾಡುತ್ತಿವೆ.
ಬೆಣ್ಣೆ ಹಳ್ಳ ಈ ವರ್ಷ ಮಳೆಯಿಲ್ಲದೇ ಸಂಪೂರ್ಣ ಒಣಗಿದ್ದು, ನೀರು ಖಾಲಿಯಾದ ಪರಿಣಾಮ ರೈತರ ಬಾವಿಗಳು ಹಾಗೂ ಕೊಳವೆ ಬಾವಿಗಳಲ್ಲೂ ಅಂತರ್ಜಲ ಬತ್ತಿ ಹೋಗಿದೆ. ಈ ಹಳ್ಳವನ್ನು ನಂಬಿಕೊಂಡು ಹೊಸೂರು, ಯತ್ತಿನಹಳ್ಳಿ, ದುಂಡಶಿ, ಶೀಲವಂತ ಸೋಮಾಪೂರ, ಮಡ್ಲಿ, ಕುನ್ನೂರ, ಶ್ಯಾಡಂಬಿ, ಅಡವಿ ಸುಮಾಪೂರ, ತಡಸ ಗ್ರಾಮಗಳ ರೈತರು ಬವಣೆ ಅನುಭವಿಸುತಿದ್ದಾರೆ. ಈ ಭಾಗದ ಸಾವಿರಾರು ರೈತರಲ್ಲಿ ಇದರಿಂದ ವ್ಯಾಪಕ ಆತಂಕ ಆವರಿಸಿದೆ.
ಶಿಗ್ಗಾವಿ ತಾಲ್ಲೂಕಿನಲ್ಲಿ ಗೋವಿನ ಜೋಳ, ಭತ್ತ, ಶೇಂಗಾ, ಕಬ್ಬು ಸೋಯಾಬೀನ್ ಮುಂತಾದ ಬೀಜ ಬಿತ್ತನೆ ಮಾಡಿದ್ದು, ನೀರಿಲ್ಲದ ಕಾರಣ ಬೆಳೆಗಳು ಹಾಳಾಗಿವೆ. ಕೆಲ ದಿನಗಳಿಂದ ಸುರಿದ ಸತತ ಮಳೆಯಿಂದ ಬೆಳೆಗೆ ರೋಗಗಳು ಬಂದಿವೆ. ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ರೈತ ರುದ್ರಪ್ಪ ಕಾಳಿ ಅಳಲು ತೋಡಿಕೊಂಡರು.
‘ಗೋವಿನಜೋಳ ಬೆಳೆಗೆ ಹಂದಿ, ಮುಳ್ಳಂದಿ, ಜಿಂಕೆ, ನರಿಗಳ ಕಾಟ ಹೆಚ್ಚಿದ್ದು, ರೈತರ ಪಾಡು ಹೇಳ ತೀರಾದಾಗಿದೆ’ ಎಂದು ರೈತ ಖೀಮಣ್ಣಾ ಚವ್ಹಾಣ ಹೇಳುತ್ತಾರೆ.
‘ರೈತರು ಬೆಳೆ ಸಾಲ ಮನ್ನಾ ಮಾಡಿ, ಶಿಗ್ಗಾವಿ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಿ, ಬೆಣ್ಣೆ ಹಳ್ಳ ಹೊಳೆತ್ತುವ ಹಾಗೂ ಹಳ್ಳದ ಬೃಹತ್ ಮಟ್ಟದ ಕಾಮಗಾರಿ ಮಾಡಿಸುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡಬೇಕಾಗಿದೆ’ ಎಂದು ರೈತಸೇನಾ ಕರ್ನಾಟಕ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ವರುಣಗೌಡ ಪಾಟೀಲ ಹೇಳಿದರು.
–ಪುಟ್ಟಪ್ಪ ಲಮಾಣಿ
ಬೆಣ್ಣೆ ಹಳ್ಳದ ಹೂಳೆತ್ತುವ ಕಾರ್ಯದ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ರೈತರಿಗೆ ದನಕರುಗಳಿಗೆ ಅನುಕೂಲ ಆಗುವಂತೆ ಮಾಡಲಾಗುವುದು–ಚಿದಂಬರ್ ಹಾವನೂರು, ಎಇಇ ಸಣ್ಣ ನೀರಾವರಿ ಇಲಾಖೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.