ರಟ್ಟೀಹಳ್ಳಿ: ರಟ್ಟೀಹಳ್ಳಿ ಹಾಗೂ ಹಿರೇಕೆರೂರ ತಾಲ್ಲೂಕಿನ ಸರ್ವಜ್ಞ ಏತ ನೀರಾವರಿ ಯೋಜನೆಯಡಿ 44 ಗ್ರಾಮಗಳ 88 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ನನೆಗುದಿಗೆ ಬಿದ್ದಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಭಾರತೀಯ ಕೃಷಿ ಕಾರ್ಮಿಕ ರೈತ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ ಕೊಟ್ಟೂರ ಆರೋಪಿಸಿದರು.
ಪಟ್ಟಣದ ತುಂಗಾ ಮೇಲ್ದಂಡೆ ಯೋಜನೆ ಕಚೇರಿ ಎದುರು ಶುಕ್ರವಾರ ಸಂಘಟನೆಯ ರೈತರೊಂದಿಗೆ ಕೈಗೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರ್ಕಾರದಿಂದ 2019ರಲ್ಲಿ ಈ ಯೋಜನೆಗೆ ಮಂಜೂರಾತಿ ನೀಡಿದ್ದರೂ ಕಾಮಗಾರಿ ಪೂರ್ಣಗೊಳಿಸಲು ಏಕೆ ವಿಳಂಬ ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿದರು.
ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಶೇಖರ ದೂದೀಹಳ್ಳಿ ಮಾತನಾಡಿ, ಕಡುಬೇಸಿಗೆಯಿಂದ ಗ್ರಾಮಗಳಲ್ಲಿ ಪಶು, ಪಕ್ಷಿ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಕೆರೆಗಳನ್ನು ತುಂಬಿಸುವುದರಿಂದ ರೈತರಿಗೆ ಪ್ರಯೋಜನವಾಗಲಿದೆ. ಸಂಘಟನೆಯಿಂದ ಈ ಹಿಂದೆ ಕಳೆದ ಮಾರ್ಚನಲ್ಲಿ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದರು.
ರಟ್ಟೀಹಳ್ಳಿ ತುಂಗಾ ಮೇಲ್ದಂಡೆ ಯೋಜನೆ ಉಪವಿಭಾಗ ಸಹಾಯಕ ಕಾರ್ಯಪಾಲಕ ಅಭಿಯಂತರ ವಿ.ಹನುಮಂತಪ್ಪ ಮಾತನಾಡಿ, ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿದೆ. ಯೋಜನೆ ಅನುಷ್ಠಾನಕ್ಕೆ ಕೆಲವೊಂದು ಭಾಗದಲ್ಲಿ ಪೈಪ್ಗಳನ್ನು ಅಳವಡಿಸುವ ಕಾಮಗಾರಿ ನಡೆಯುವ ಜಮೀನುಗಳಲ್ಲಿ ರೈತರು ಅವಕಾಶ ಕಲ್ಪಿಸುತ್ತಿಲ್ಲ. ಅವರ ಮನವೊಲಿಸುವ ಪ್ರಯತ್ನಿಸಲಾಗುತ್ತಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಕೆರೆಗಳಿಗೆ ನೀರು ತುಂಬಿಸುವ ಭರವಸೆ ನೀಡಿದರು.
ನಂತರ ರೈತರು ಪ್ರತಿಭಟನೆ ಕೈಬಿಟ್ಟರು. ರೈತ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಶಿವಪ್ಪ ಜವನವರ, ಬಸಪ್ಪ ಕೆಳಗಿನಮನಿ, ಶಶಿಕಲಾ ಆರಿಕಟ್ಟಿ, ರತ್ನವ್ವ ಹೊಟ್ಟಿಗೌಡ್ರ, ತಮ್ಮನಗೌಢ ಪಾಟೀಲ, ಮಲ್ಲಿಕಾರ್ಜುನ ಮಾವಿನತೋಪ, ಸಿದ್ದನಗೌಡ ಹುಡೇದ, ಕರೇಗೌಡ ಗವಿಯಪ್ಪನವರ, ಪರಮೇಶಪ್ಪ ಗಿರಿಮಳ್ಳಿ, ಪ್ರಮೋದ ಹುಲ್ಲತ್ತಿ, ಮಂಜುನಾಥ ಮೂಲಿಮನಿ, ಮಲ್ಲನಗೌಡ ಪಾಟೀಲ, ಚಂದ್ರಪ್ಪ ಜಾಡರ, ಗಣೇಶ ಬಂಗೇರ, ಸಿದ್ದಪ್ಪ ಕೋರಿಶೆಟ್ಟರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.