ADVERTISEMENT

'ವಾಹನಕ್ಕೆ ಕಳಪೆ ಇಂಧನ ಬಳಸಬೇಡಿ'

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2022, 16:11 IST
Last Updated 16 ಮಾರ್ಚ್ 2022, 16:11 IST
ಹಾವೇರಿ ನಗರದ ಸಾರಿಗೆ ಬಸ್‌ ನಿಲ್ದಾಣದಲ್ಲಿ ಬುಧವಾರ ಸಾರಿಗೆ ಇಲಾಖೆ ಹಾಗೂ ಇ- ಆಡಳಿತದ ವತಿಯಿಂದ ‘ವಾಯುಮಾಲಿನ್ಯ ಜಾಗೃತಿ ಅಭಿಯಾನ’ ನಡೆಯಿತು 
ಹಾವೇರಿ ನಗರದ ಸಾರಿಗೆ ಬಸ್‌ ನಿಲ್ದಾಣದಲ್ಲಿ ಬುಧವಾರ ಸಾರಿಗೆ ಇಲಾಖೆ ಹಾಗೂ ಇ- ಆಡಳಿತದ ವತಿಯಿಂದ ‘ವಾಯುಮಾಲಿನ್ಯ ಜಾಗೃತಿ ಅಭಿಯಾನ’ ನಡೆಯಿತು    

ಹಾವೇರಿ: ಸಾರಿಗೆ ಇಲಾಖೆ ಹಾಗೂ ಇ- ಆಡಳಿತದ ವತಿಯಿಂದ ‘ಮಾಲಿನ್ಯ ತಡೆಯೋಣ ಪರಿಸರ ಉಳಿಸೋಣ’ ಎಂಬ ಘೋಷವಾಕ್ಯದಡಿ ಆಯೋಜಿಸಿದ್ದ ‘ವಾಯುಮಾಲಿನ್ಯ ಜಾಗೃತಿ ಅಭಿಯಾನ’ಕ್ಕೆ ನಗರದ ಜಿಲ್ಲಾ ಬಸ್ ನಿಲ್ದಾಣದಲ್ಲಿ ಬುಧವಾರ ಕರ್ನಾಟಕ ವಾಯವ್ಯ ರಸ್ತೆ ಸಾರಿಗೆಯ ಹಾವೇರಿ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ ಲಮಾಣಿ ಚಾಲನೆ ನೀಡಿದರು.

ಪ್ರಾದೇಶಿಕ ಸಾರಿಗೆ ಇಲಾಖೆ ಮೋಟಾರ್ ವಾಹನ ನಿರೀಕ್ಷಕ ಪಿ.ಎಸ್ ಹಿರೇಮಠ ಮಾತನಾಡಿ, ವಾಯು ಮಾಲಿನ್ಯ, ಕಲಬೆರಕೆ ಇಂಧನ ಬಳಕೆ ಮಾಡದಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಬೀದಿನಾಟಕ, ಜನಪದ ಸಂಗೀತ, ಎಲ್.ಇ.ಡಿ. ವಾಹನದ ಮೂಲಕ ಜಾಗೃತಿ ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಪರಿಸರ ಜಾಗೃತಿ ಕರಪತ್ರಗಳ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಶಹರ ಪೊಲೀಸ್ ಠಾಣೆ ಸಿಪಿಐ ಸುರೇಶ್ ಸಗರಿ ಮಾತನಾಡಿ, ಕಳಪೆ ಇಂಧನ ಬಳಕೆಯಿಂದ ವಾಹನಗಳಿಂದ ಹೊರಬರುವ ಹೊಗೆಯು ಮಾರಕವಾಗಿದೆ. ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಈ ಕುರಿತು ವಾಹನ ಚಾಲಕರು ಮತ್ತು ಮಾಲೀಕರು ಎಚ್ಚೆತ್ತುಕೊಳ್ಳಬೇಕು ಎಂದರು.

ADVERTISEMENT

ನಗರ ಸಂಚಾರ ಪೊಲೀಸ್ ಠಾಣೆ ಪಿಎಸ್‍ಐ ಬಸವರಾಜ ಬೆಟಗೇರಿ ಮಾತನಾಡಿ, ಆರು ತಿಂಗಳಿಗೊಮ್ಮೆ ವಾಹನಗಳ ವಾಯು ಮಾಲಿನ್ಯ ಪರೀಕ್ಷೆ ಮಾಡಿಸಬೇಕು. ಇಲ್ಲವಾದಲ್ಲಿ ವಾಹನಗಳ ಇನ್ಸೂರೆನ್ಸ್ ರದ್ದಾಗುತ್ತದೆ ಹಾಗೂ ವಾಹನಗಳಿಗೆ ಸೂಕ್ತ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದರು.

ಕಲಾ ತಂಡ ಕಾರ್ಯಕ್ರಮದಲ್ಲಿ ವಾಯುಮಾಲಿನ್ಯದ ಅರಿವಿನ ವಿವಿಧ ಜಾಗೃತಿ ಗೀತೆಗಳನ್ನು ಹಾಡಿದರು. ಬೀದಿ ನಾಟಕ ಪ್ರದರ್ಶನ ಹಾಗೂ ಕರಪತ್ರಗಳನ್ನು ಹಂಚಿ ಅಭಿಯಾನದ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಕಾಳಿಸಿಂಗೆ, ಜಿಲ್ಲಾ ವಾರ್ತಾಧಿಕಾರಿ ಬಿ.ಆರ್. ರಂಗನಾಥ್, ಲಾರಿ ಮಾಲೀಕರ ಜಿಲ್ಲಾ ಸಂಘದ ಅಧ್ಯಕ್ಷ ಹೂಗಾರ ಗಣೇಶ, ಶ್ರೀಪಾದ ಜಿ.ಬಾರ್ಕಿ, ವಿಶ್ವನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.