ADVERTISEMENT

ಮಣ್ಣಿನ ಮಡಿಕೆಗೆ ಮರುಜೀವ ಅವಶ್ಯ: ಪ್ರೊ.ಟಿ.ಎಂ.ಭಾಸ್ಕರ್

​ಪ್ರಜಾವಾಣಿ ವಾರ್ತೆ
Published 5 ಜುಲೈ 2023, 5:14 IST
Last Updated 5 ಜುಲೈ 2023, 5:14 IST
ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಕುಂಬಾರಿಕೆ ಕಲಾ ತರಬೇತಿ ಶಿಬಿರದ ಸಮಾರಂಭದಲ್ಲಿ ಕುಲಪತಿ ಪ್ರೊ.ಟಿ.ಎಂ.ಭಾಸ್ಕರ್ ಮಣ್ಣಿನ ಹಣತೆ ಮಾಡುವ ಮೂಲಕ ಚಾಲನೆ ನೀಡಿದರು
ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಕುಂಬಾರಿಕೆ ಕಲಾ ತರಬೇತಿ ಶಿಬಿರದ ಸಮಾರಂಭದಲ್ಲಿ ಕುಲಪತಿ ಪ್ರೊ.ಟಿ.ಎಂ.ಭಾಸ್ಕರ್ ಮಣ್ಣಿನ ಹಣತೆ ಮಾಡುವ ಮೂಲಕ ಚಾಲನೆ ನೀಡಿದರು   

ಶಿಗ್ಗಾವಿ: ಕುಂಬಾರರು ತಯಾರಿಸುವ ಮಣ್ಣಿನ ಮಡಿಕೆ, ಹಣತಿ ಸೇರಿದಂತೆ ವಿವಿಧ ಮಣ್ಣಿನ ಸಾಮಗ್ರಿಗಳು ಪುರಾತನ ಕಾಲದಾಗಿದ್ದು, ಅವುಗಳನ್ನು ಮರುಬಳಕೆ ಮಾಡುವ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಂ.ಭಾಸ್ಕರ್ ಹೇಳಿದರು.

ತಾಲ್ಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆದಂಡೆ ಸಂಭಾಂಗಣದಲ್ಲಿ ಜಾನಪದ ಕಲೆ ವಿಭಾಗದಿಂದ ಮಂಗಳವಾರ ನಡೆದ ಕುಂಬಾರಿಕೆ ಕಲಾ ತರಬೇತಿ ಶಿಬಿರದ ಸಮಾರಂಭದಲ್ಲಿ ಉದ್ಘಾಟಿಸಿ ಅವರು ಮಾತನಾಡಿ, ಮಣ್ಣಿನ ಆಭರಣಗಳನ್ನು ಧರಿಸಿ ಸೌಂದರ್ಯ ಹೆಚ್ಚಿಸುವ ಜತೆಗೆ ಆರೋಗ್ಯ ಕಾಪಾಡುವುದು ಪ್ರಮುಖವಾಗಿದೆ. ಮಣ್ಣಿನ ಸಾಮಗ್ರಿಗಳ ಬಳಕೆಗೆ ಮರುಜೀವ ತುಂಬುವುದು. ಸಮಾಜದ ಸವಾಂಗೀಣ ಬೆಳವಣಿಗೆಗೆ ಪ್ರೇರಣೆಯಾಗಬೇಕು ಎಂದರು.

ಜಾನಪದ ವಿಶ್ವವಿದ್ಯಾಲಯಗಳ ಪ್ರಾದೇಶಿಕ ಕೇಂದ್ರವಾದ ಬೀದರ್‌, ಮೈಸೂರುಗಳಲ್ಲಿ ವಿವಿಧ ಕೋರ್ಸ್‌ಗಳನ್ನು ಆರಂಭಿಸುವ ಜತೆಗೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಅಲ್ಲದೆ ಅವುಗಳಲ್ಲಿ ಪಿ.ಜಿ.ಕೋರ್ಸ್‌ಗಳನ್ನು ಸಹ ಆರಂಭಿಸಲಾಗುತ್ತಿದೆ. ಜಾನಪದ ಕಲಾ ವಿಭಾಗ ವಿಶ್ವವಿದ್ಯಾಲಯದ ಸಂಪನ್ಮೂಲವಾಗಿದ್ದು, ಸರ್ವಜ್ಞನ ಕೈಯಲ್ಲಿನ ಮಣ್ಣಿನ ಪಾತ್ರ ಅಕ್ಷಯ ಪಾತ್ರೆಯಂತೆ ಜ್ಞಾನ, ಮಾಗದರ್ಶನ ನೀಡುವುದಾಗಿದೆ. ಕುಂಬಾರಿಕೆ ಮಣ್ಣಿಕ ಕಲೆ ಉಳಿಸಿ ಬೆಳೆಸುವ ಕಾರ್ಯವನ್ನು ವಿಶ್ವವಿದ್ಯಾಲಯ ಹಮ್ಮಿಕೊಂಡಿದೆ ಎಂದರು.

ADVERTISEMENT

ಪ್ರೊ.ಸಿ.ಟಿ.ಗುರುಪ್ರಸಾದ್ ಮಾತನಾಡಿ, ಜಾನಪದ ವಿಶ್ವವಿದ್ಯಾಲಯ ವಿಶೇಷ ರೂಪರೇಷಗಳನ್ನು ಹೊಂದಿದ್ದು, ಜಗತ್ತಿನ ಏಕೈಕ ವಿಶ್ವವಿದ್ಯಾಲಯವಾಗಿದೆ. ನವಶಿಲಾಯುಗದಿಂದ ಆರಂಭವಾದ ಕುಂಬಾರಿಕೆ ಮಹತ್ವ ಹೊಂದಿದೆ. ಪ್ರತಿ ಕಲೆಗಳಲ್ಲಿ ನೈಪುಣ್ಯತೆ ಬೇಕು. ಮಡಿಕೆ ಮಾಡುವ ಕೈಚಳಕ ಕಲಿಯಬೇಕು. ಮಡಿಕೆ.ಕುಡಿಕೆಗಲನ್ನು ತಯಾರಿಸುವ ಕಲೆ ಕರಗತ ಮಾಡಿಕೊಳ್ಳಬೇಕು. ಅದರ ಕೌಶಲಗಳ ಅರಿವು ಪ್ರತಿಯೊಬ್ಬರಲ್ಲಿ ಬೆಳೆಯಬೇಕು ಎಂದರು.

ಕಲಘಟಗಿ ಕಲಾ ಶಿಕ್ಷಕ ಡಾ.ಮಲ್ಲೇಶ್ ಮಾತನಾಡಿದರು. ಬಸವರಾಜ ಕುಂಬಾರ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು. ಮೌಲ್ಯಮಾಪನ ಕುಲಸಚಿವ ಪ್ರೊ.ಎನ್.ಎಂ.ಸಾಲಿ, ಸಹಾಯಕ ಕುಲಸಚಿವ ಶಹಜಾನ್ ಮುದಕವಿ, ಸಹಾಯಕ ಪ್ರಾಧ್ಯಾಪಕಿ ಡಾ.ವಿಜಯಲಕ್ಷ್ಮಿ ಗೇಟಿಯವರ, ಪ್ರಾಧ್ಯಾಪಕ ಚಂದ್ರಪ್ಪ ಸೂಬುಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ಡಾ.ಆನಂದ ಜೋಗಿ, ಹಿರಿಯ ಸಂಶೋಧಕ ಪ್ರೇಮಕುಮಾರ ಸೇರಿದಂತೆ ವಿಶ್ವವಿದ್ಯಾಲಯದ ಬೋಧಕ,ಬೋಧಕೇತರ ಸಿಬ್ಬಂದಿ ಇದ್ದರು.

ನಂತರ ವಿದ್ಯಾರ್ಥಿಗಳಿಂದ ಸಾಮೂಹಿಕ ಜಾನಪದ ನೃತ್ಯ ಕಲೆ, ಜಾನಪದ ಗೀತಗಾಯನ ಜನಮನ ರಂಜಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.