ಶಿಗ್ಗಾವಿ: ಕಳೆದ 2 ರಿಂದ 3ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿಯಿಂದ ನಲುಗಿ ಹೋಗಿರುವ ಕೃಷಿ ಚಟುವಟಿಕೆಗಳಲ್ಲಿ ಉತ್ತಮ ಶೇಂಗಾ ಬೆಳೆ ಇಳುವರಿ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ ತಾಲ್ಲೂಕಿನ ತಿಮ್ಮಾಪುರದ ರೈತ ರಮಾನಂದ ಕಮ್ಮಾರ ಇತರ ರೈತರಿಗೆ ಮಾದರಿಯಾಗಿದ್ದಾರೆ.
ತಿಮ್ಮಾಪುರ ಗ್ರಾಮದ ಪಧವೀಧರ ರೈತ ರಮಾನಂದ ತನ್ನ ಸ್ವಂತ 13 ಎಕರೆ ಜಮೀನು ಹೊಂದಿದ್ದು, ಅದರಲ್ಲಿ ನಾಲ್ಕು ಎಕರೆಯಲ್ಲಿ ನೀರಾವರಿ ಶೇಂಗಾ ಬೆಳೆ ಬೆಳೆದಿದ್ದಾರೆ. ಉಳಿದ ಒಂದು ಎಕರೆಯಲ್ಲಿ ಲಿಂಬೆ ಹಣ್ಣಿನ ಗಿಡ ಬೆಳೆದಿದ್ದಾರೆ. ಇನ್ನುಳಿದ ಜಮೀನಿನಲ್ಲಿ ಗೋವಿನಜೋಳ ಬೆಳೆದಿದ್ದಾರೆ. ಆದರೆ ಕಳೆದ 3-4ವರ್ಷಗಳಿಂದ ನಷ್ಟ ಅನುಭವಿಸುತ್ತಾ ಬಂದಿದ್ದಾರೆ.
ಹೇಗಾದರೂ ಮಾಡಿ ಉತ್ತಮ ಫಸಲು ತೆಗೆಯಬೇಕು. ಕೃಷಿಯಲ್ಲಿ ಉತ್ತಮ ಸಾಧನೆ ಮಾಡಲೇಬೇಕು ಎಂದು ಮಹತ್ವಾಕಾಂಕ್ಷೆ ಇಟ್ಟುಕೊಂಡು ಬಿತ್ತನೆಗೆ ಮುನ್ನ ಕೃಷಿ ಅಧಿಕಾರಿಗಳ ಮಾಹಿತಿ ಪಡೆದು ಶೇಂಗಾ ಬೆಳೆದು ಉತ್ತಮ ಸಾಧನೆ ಮಾಡಿದ್ದಾರೆ.
ಕೊಳವೆಬಾವಿಯಲ್ಲಿ 6 ಇಂಚು ನೀರಿದ್ದು, ನೀರಾವರಿ ಜಮೀನು ಹೊಂದಿದ್ದಾರೆ. ಸಾವಯವ ಗೊಬ್ಬರ ಹಾಕಿ ಕದರಿ ಲೇಪಾಕ್ಷಿ ಎಂಬ ತಳಿಯ ಶೇಂಗಾ ಬೀಜ ಬಿತ್ತಿದ್ದರು. ಅದು ಪ್ರತಿ ಗಿಡಕ್ಕೆ ಕನಿಷ್ಟ 200ಕ್ಕೂ ಹೆಚ್ಚಿನ ಕಾಯಿಗಳನ್ನು ಬಿಟ್ಟಿದೆ. ಆರಂಭದಲ್ಲಿ ಬಿತ್ತನೆ ಬೀಜಕ್ಕಾಗಿ ₹26ಸಾವಿರ, ಸಾವಯವ ಗೊಬ್ಬರಕ್ಕಾಗಿ ₹10ಸಾವಿರ ಮತ್ತು ಫಸಲು ತೆಗೆಯುವ ಆಳು ಕಾಳುಗಾಗಿ ಸುಮಾರು ₹60ಸಾವಿರ ಸೇರಿದಂತೆ ಒಟ್ಟು ₹96ಸಾವಿರ ಖರ್ಚು ಮಾಡಿದ್ದಾರೆ.
ಆದರೆ ಒಂದೇ ಬೆಳೆಯಲ್ಲಿ 80ಕ್ವಿಂಟಲ್ಗಿಂತ ಹೆಚ್ಚಿನ ಇಳುವರಿ ಪಡೆದಿದ್ದಾರೆ. ರೈತರು ಬಿತ್ತನೆ ಬೀಜಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಒಂದು ಕ್ವಿಂಟಲ್ಗೆ ₹12ಸವಿರದಿಂದ ₹14ಸಾವಿರ ಪಡೆಯುತ್ತಿದ್ದಾರೆ. ಅದರಿಂದ 6ರಿಂದ ₹8ಲಕ್ಷ ಆದಾಯ ಪಡೆಯುವ ಮೂಲಕ ರೈತ ಸಮುದಾಯದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಾವಯವ ಗೊಬ್ಬರ ಮತ್ತು ಸರಿಯಾದ ಸಮಯಕ್ಕೆ ನೀರುಣಿಸುವ ಕಾರ್ಯ ಮಾಡುವ ಮೂಲಕ ಉತ್ತಮ ಬೆಳೆ ಬೆಳೆಯಲು ಸಾಧ್ಯವಾಗಿದೆ ಎಂದು ರೈತ ರಮಾನಂದ ಕಮ್ಮಾರ ಹೇಳುತ್ತಾರೆ.
*
ರಾಸಾಯನಿಕ ಗೊಬ್ಬರ ಬಳಕೆ ಕಡಿಮೆಯಾಗಬೇಕು. ಕೃಷಿ ಇಲಾಖೆ ಮಾರ್ಗದರ್ಶನದಂತೆ ಬಿತ್ತನೆ ಮಾಡಿದ ಯಾವುದೇ ಬೆಳೆ ಉತ್ತಮ ಇಳುವರಿ ಪಡೆಯಲು ಸಾಧ್ಯವಿದೆ ರಮಾನಂದ ಕಮ್ಮಾರ
-ರೈತ
*
ರೈತರು ಬಿತ್ತನೆ ಸಂದರ್ಭದಲ್ಲಿ ಮಿಶ್ರ ಬೆಳೆ ಬೆಳೆಯಲು ಮುಂದಾಗಬೇಕು. ಕೃಷಿ ಇಲಾಖೆಯಿಂದ ಮಾಹಿತಿ ಪಡೆಯಬೇಕು.
-ಸುರೇಶಬಾಬು ದಿಕ್ಷೀತ್, ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.