ಮಮದಾಪೂರ ಗ್ರಾಮದ ಖಿಮಣ್ಣ ಹೊಲದಲ್ಲಿ ಬೆಳೆದ ಮೆಣಸಿನಕಾಯಿ ಬೆಳೆಯು ಸತತ ಮಳೆಯಿಂದಾಗಿ ಹಾನಿಯಾಗಿದೆ
ತಡಸ (ದುಂಡಶಿ): ಸತತವಾಗಿ ಒಂದು ವಾರದಿಂದ ಬಿಡದೆ ಸುರಿಯುತ್ತಿರುವ ಮಳೆಗೆ ದುಂಡಶಿ ಹೋಬಳಿಯ ಮೆಣಸಿನಕಾಯಿ ಬೆಳೆದ ರೈತರು ತತ್ತರಿಸಿ ಹೋಗಿದ್ದಾರೆ.
ದುಂಡಶಿ ಹೋಬಳಿಯ ಹೊಸೂರ, ಚಂದಾಪುರ, ಕೋಣನಕೇರಿ, ಯತ್ತಿನಹಳ್ಳಿ, ಮಮದಾಪೂರ, ಮಡ್ಲಿಗ್ರಾಮಗಳ ಹಲವು ರೈತರು ಮೆಣಸಿನಕಾಯಿ ಬೆಳೆಯನ್ನು ಎರಡು ತಿಂಗಳ ಹಿಂದೆ ನಾಟಿ ಮಾಡಿದ್ದು ಹಸಿ ಮೇಣಸಿನಕಾಯಿ ಇನ್ನೆನ್ನು ಕಟಾವು ಮಾಡುವ ಹಂತದಲ್ಲಿ ಬಿಡದೆ ಸುರಿದ ಮಳೆಗೆ ಕಾಯಿ ಎಲ್ಲವೂ ಉದರಿ ರೈತರಿಗೆ ಹಾನಿ ಉಂಟಾಗಿದೆ.
ಮೆಣಸಿನಕಾಯಿ ದರವು ಈ ವರ್ಷ ಒಂದು ಕ್ವಿಂಟಲ್ಗೆ ₹6 ರಿಂದ ₹7 ಸಾವಿರ ಇದ್ದು ಉತ್ತಮ ಫಸಲನ್ನು ಪಡೆಯುವ ನಿರೀಕ್ಷೆಯಲ್ಲಿದ್ದ ರೈತರು ನಿರಾಸೆಗೀಡಾಗಿದ್ದಾರೆ. ಬೆಳೆ ಕಟಾವು ಹಂತದಲ್ಲಿದ್ದಾಗಲೇ ಎಡೆಬಿಡದೆ ಮಳೆ ಸುರಿಯುತ್ತಿದೆ.
ನಾಲ್ಕು ದಿನಗಳಿಂದ ಸುರಿದ ಮಳೆಗೆ ತಾಲ್ಲೂಕಿನ ಹಲವು ರೈತರ ಮೆಣಸಿನಕಾಯಿ ಬೆಳೆಯು ಹಾಳಾಗಿದೆ. ರೈತರಿಗೆ ಪರಿಹಾರ ನೀಡುವ ಕುರಿತು ಮೇಲಧಿಕಾರಿಗಳ ಜೊತೆ ಚರ್ಚಿಸಲಾಗುವುದು.ಕಿಶೋರ ನಾಯ್ಕ, ಶಿಗ್ಗಾವಿ ತೋಟಗಾರಿಕೆ ಉಪ ನಿರ್ದೇಶಕ
‘ಎರಡು ತಿಂಗಳ ಹಿಂದೆ ನಾಲ್ಕು ಎಕರೆ ಮೆಣಸಿನಕಾಯಿ ಬೆಳೆದಿದ್ದು, ಸುಮಾರು ₹1 ಲಕ್ಷ ಖರ್ಚು ಮಾಡಿ, ಎಣ್ಣೆ, ಗೊಬ್ಬರ ಹಾಕಿದ್ದೇನೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’ ಎಂದು ಹೊಸೂರು ಗ್ರಾಮದ ರೈತ ಶಿವಣ್ಣ ಅಳಲು ತೋಡಿಕೊಂಡರು.
ಸಮೃದ್ಧವಾಗಿ ಬೆಳೆದಿದ್ದ ಮೆಣಸಿನ ಕಾಯಿ ಬೆಳೆಯು ಸತತ ಮಳೆಗೆ ಕಾಯಿಯಲ್ಲಾ ಉದರಿ, ಗಿಡದ ಎಲ್ಲೆಗಳಿಲ್ಲದೆ ಬೊಳಾಗಿ ನಿಂತಿವೆ. ಸಾಲ ಮಾಡಿ ಹಾಕಿರುವ ಹಣವು ಕೈಗೆ ಬರುತ್ತಿಲ್ಲ. ಒಂದು ಎಕರೆಗೆ ₹30ರಿಂದ ₹40 ಸಾವಿರ ಖರ್ಚು ಮಾಡಿದ್ದು ಸರ್ಕಾರ ಅಧಿಕಾರಿಗಳು ಮೆಣಸಿನಕಾಯಿ ಬೆಳೆದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದು ರೈತರಾದ ಡಾಕಪ್ಪ, ಯಲ್ಲಪ್ಪ, ದೇವಣ್ಣ, ಖೀಮಣ್ಣ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.