ADVERTISEMENT

ಕುಮಾರೇಶ್ವರ ವಿರಕ್ತಮಠ ಆಸ್ತಿ ಬಗ್ಗೆ ಪೊಲೀಸ್ ತನಿಖೆ: ಬಿ.ಎಸ್‌. ದಳವಾಯಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 5:31 IST
Last Updated 2 ಫೆಬ್ರುವರಿ 2026, 5:31 IST
ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ
ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ   

ಹಾನಗಲ್: ‘ಇಲ್ಲಿಯ ಕುಮಾರೇಶ್ವರ ವಿರಕ್ತಮಠದ ಆಸ್ತಿಗಳನ್ನು ಮಾರಾಟ ಮಾಡಿ, ಅದರಿಂದ ಬಂದ ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ದಾಖಲಿಸಿದ್ದ ಖಾಸಗಿ ಮೊಕದ್ದಮೆ ವಿಚಾರಣೆ ನಡೆಸಿದ್ದ ನ್ಯಾಯಾಲಯ, ತನಿಖೆ ನಡೆಸಿ ವರದಿ ನೀಡುವಂತೆ ಹಾನಗಲ್ ಪೊಲೀಸರಿಗೆ ನಿರ್ದೇಶನ ನೀಡಿದೆ’ ಎಂದು ಹಾನಗಲ್‌ ವಿರಕ್ತಮಠ ಉಳಿಸಿ ಹೋರಾಟ ಸಮಿತಿಯ ವಕೀಲ ಬಿ.ಎಸ್‌. ದಳವಾಯಿ ಮಾಹಿತಿ ನೀಡಿದರು.

ಪಟ್ಟಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಾನಗಲ್ ತಾಲ್ಲೂಕಿನಲ್ಲಿರುವ 10 ಆಸ್ತಿಗಳು ಮತ್ತು ಹುಬ್ಬಳ್ಳಿ ನಗರ ವ್ಯಾಪ್ತಿಯಲ್ಲಿರುವ 51 ಆಸ್ತಿಗಳನ್ನು ನಿಯಮ ಬಾಹಿರವಾಗಿ ಮಾರಾಟ ಮಾಡಲಾಗಿದೆ. ಇದರಿಂದ ಬಂದ ₹ 1.60 ಕೋಟಿಗೂ ಅಧಿಕ ಹಣ ದುರುಪಯೋಗವಾಗಿರುವ ಆರೋಪವಿದೆ’ ಎಂದರು.

‘ಪೀಠಾಧಿಪತಿಯವರು ತಾವು ಸೋಲ್ ಟ್ರಸ್ಟಿ ಎಂದು ಮಠದ ಆಸ್ತಿ ಮಾರಾಟ ಮಾಡಿದ್ದಾರೆ. ಕಾನೂನು ಪ್ರಕಾರ ಇದು ಅಪರಾಧ. ಶ್ರೀಮಠದ ಶ್ರೀಗಳು ಸೋಲ್ ಟ್ರಸ್ಟಿ ಎಂದಾದರೂ, ಆಸ್ತಿ ಮಾರುವ ಹಕ್ಕು ಅವರಿಗಿಲ್ಲ. ಅವರು ಮಠದ ಆಸ್ತಿ ವಹಿವಾಟು ನಿರ್ವಹಣೆ ಮಾಡುವವರು ಮಾತ್ರ. ಹೀಗಾಗಿ, ಮಠದ ಆಸ್ತಿಗಳ ಪರಭಾರೆಗೆ ಕಾನೂನು ಅನ್ವಯ ಅಧಿಕಾರವಿಲ್ಲ’ ಎಂದು ಹೇಳಿದರು.

ADVERTISEMENT

‘ಆರೋಪದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಆರಂಭದಲ್ಲಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದೆವು. ಆದರೆ, ಅವರು ತನಿಖೆ ಮಾಡಲು ಹಿಂದೇಟು ಹಾಕಿದರು. ಹೀಗಾಗಿ, ನಾವು ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ಹೂಡಿದ್ದೆವು. ಹಾನಗಲ್ ನ್ಯಾಯಾಲಯದಿಂದ ಈಗ ಪೊಲೀಸರಿಗೆ ತನಿಖೆಯ ನಿರ್ದೇಶನ ಬಂದಿದೆ. ಏಪ್ರಿಲ್ 2ರ ಒಳಗಾಗಿ ತನಿಖೆ ನಡೆಸಿ ಅಂತಿಮ ವರದಿ ಸಲ್ಲಿಸುವಂತೆಯೂ ನ್ಯಾಯಾಲಯ ತಿಳಿಸಿದೆ. ಹಾನಗಲ್ ಮಠದ ಆಸ್ತಿ ಉಳಿಸುವ ವಿಷಯಕ್ಕೆ ನ್ಯಾಯ ಸಿಗುವ ಭರವಸೆ ನಮಗಿದೆ’ ಎಂದರು.

ಮುಖಂಡರಾದ ಪ್ರಶಾಂತ ಮುಚ್ಚಂಡಿ, ಜಯಲಿಂಗಪ್ಪ ಹಳಕೊಪ್ಪ, ರವಿಂದ್ರ ಚಿಕ್ಕೇರಿ, ಶಾಂತವೀರ ನೆಲೋಗಲ್ಲ ಪತ್ರಿಕಾಗೋಷ್ಠಿಯಲ್ಲಿದ್ದರು.

‘ದ್ವೇಷಪೂರಿತ ಆರೋಪ’ 

‘ಈ ಆರೋಪಗಳು ದ್ವೇಷಪೂರಿತವಾಗಿವೆ. ಕೆಲವರು ಮಠದ ಆಸ್ತಿ ವಿಚಾರವಾಗಿ ಪೂರ್ವಾಗ್ರಹ ಪೀಡಿತರಾಗಿ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಯಾರದೋ ದ್ವೇಷಕ್ಕಾಗಿ ಇಂತಹ ಆಪಾದನೆ ಮಾಡುವುದು ಸರಿಯಲ್ಲ’ ಎಂದು ಹಾನಗಲ್ ಕುಮಾರೇಶ್ವರ ವಿರಕ್ತಮಠದ ಪೀಠಾಧಿಪತಿಯೂ ಆಗಿರುವ ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

ಪತ್ರಿಕಾಗೋಷ್ಠಿಯ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ಆಸ್ತಿಗಳ ಮಾರಾಟ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ತನಿಖೆಗೆ ಸಿದ್ಧ. ಇದಕ್ಕೆ ತಕ್ಕ ಪೂರಕ ದಾಖಲೆಗಳು ನಮ್ಮ ಬಳಿ ಇವೆ. ತನಿಖೆಯಿಂದ ಸತ್ಯಾಂಶ ತಿಳಿಯಲಿದೆ. ಮಠದ ಆಸ್ತಿ ವಹಿವಾಟಿನಲ್ಲಿ ಯಾವುದೇ ರೀತಿಯಲ್ಲಿ ಕ್ರಮಬದ್ಧತೆ ತಪ್ಪಿಲ್ಲ. ಯಾವುದೇ ರೀತಿಯಲ್ಲಿ ಕಾನೂನು ಬಾಹಿರ ನಡುವಳಿಕೆ ನಡೆದಿಲ್ಲ’ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.