ಹಾವೇರಿ: ರಾಣೆಬೆನ್ನೂರು ಶಹರ ಠಾಣೆ ವ್ಯಾ್ಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಭೇದಿಸಿರುವ ಪೊಲೀಸರು, ಆರೋಪಿಯಿಂದ ಜಪ್ತಿ ಮಾಡಿದ ಚಿನ್ನದ ಸರವನ್ನು ದೂರುದಾರರ ಮನೆಗೆ ಹೋಗಿ ಹಸ್ತಾಂತರ ಮಾಡಿದ್ದಾರೆ.
ಕೋಟೆ ಓಣಿಯ ನಿವಾಸಿ ಸುಧಾಬಾಯಿ ಕುಲಕರ್ಣಿ (84) ಅವರ ಚಿನ್ನದ ಸರವನ್ನು ಏಪ್ರಿಲ್ 6ರಂದು ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಸುಧಾಬಾಯಿ ಅವರು ಠಾಣೆಗೆ ದೂರು ನೀಡಿದ್ದರು.
ತನಿಖೆ ಕೈಗೊಂಡಿದ್ದ ಪೊಲೀಸರು, ಆರೋಪಿಗಳಾದ ಸಂತೋಷ ತುಳಸಪ್ಪ ಸಿಂಧೆ ಹಾಗೂ ದ್ಯಾಮಣ್ಣ ಪಾಂಡಪ್ಪ ನವಸಣ್ಣನವರ ಅವರನ್ನು ಇತ್ತೀಚೆಗೆ ಬಂಧಿಸಿದ್ದರು. ಅವರಿಂದ ₹ 1.50 ಲಕ್ಷ ಮೌಲ್ಯದ 20 ಗ್ರಾಂ ಚಿನ್ನದ ಸರ ಜಪ್ತಿ ಮಾಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಚಿನ್ನದ ಸರವನ್ನು ದೂರುದಾರರಿಗೆ ಮರಳಿಸಲು ಆದೇಶಿಸಿತ್ತು. ಅದರಂತೆ ಹೆಚ್ಚುವರಿ ಎಸ್ಪಿ ಎಲ್.ವೈ. ಶಿರಕೋಳ, ಸಿಪಿಐ ಶಂಕರ್ ಎಸ್.ಕೆ. ಅವರು ದೂರುದಾರರಾದ ಸುಧಾಬಾಯಿ ಅವರ ಮನೆಗೆ ಆ. 19ರಂದು ಭೇಟಿ ನೀಡಿ ಸರವನ್ನು ಮರಳಿಸಿದ್ದಾರೆ.
‘ಆರೋಪಿಗಳು ಕಿತ್ತುಕೊಂಡು ಹೋಗಿದ್ದ ಸರವನ್ನು ಪೊಲೀಸರು ಮನೆಗೆ ಬಂದು ಕೊಟ್ಟಿದ್ದಕ್ಕೆ ಖುಷಿಯಾಯಿತು’ ಎಂದು ಸುಧಾಬಾಯಿ ಅವರು ಪೊಲೀಸರು ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.