
ಹಾವೇರಿ: ‘ನಗರದಲ್ಲಿ ವ್ಯವಸ್ಥಿತ ವಸತಿ ಬಡಾವಣೆಗಳನ್ನು ನಿರ್ಮಿಸಲು ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರ ಚಿಂತನೆ ನಡೆಸುತ್ತಿದೆ. ಇದರ ಭಾಗವಾಗಿ ರೈತರ ಪಾಲುದಾರಿಕೆಯಲ್ಲಿ 37 ಎಕರೆ ಪ್ರದೇಶದಲ್ಲಿ ವಸತಿ ನಿವೇಶನಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ’ ಎಂದು ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜೀಗೌಡ್ರ ತಿಳಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೈತರೊಂದಿಗೆ 50:50 ಅನುಪಾತದಲ್ಲಿ ವಸತಿ ಯೋಜನೆ ರೂಪಿಸಲು ಪ್ರಯತ್ನಿಸಲಾಗುತ್ತಿದೆ. ರೈತರು, ಒಪ್ಪಿಗೆ ನೀಡಿದರೆ ಯೋಜನೆ ಶುರುವಾಗಲಿದೆ’ ಎಂದರು.
‘ತೋಟದ ಯಲ್ಲಾಪುರ ಬಳಿ 8 ಎಕರೆ, ಕನಕಾಪುರ ಬಳಿ 12 ಎಕರೆ ಹಾಗೂ ದೇವಗಿರಿ ಯಲ್ಲಾಪುರ ಬಳಿ 17 ಎಕರೆ ಪ್ರದೇಶವನ್ನು ಈಗಾಗಲೇ ಗುರುತಿಸಲಾಗಿದೆ. ಅವುಗಳ ಮಾಲೀಕರಾಗಿರುವ ರೈತರ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಆರ್ಥಿಕ ಪರಿಸ್ಥಿತಿಯ ಹೊಂದಾಣಿಕೆ ನೋಡಿಕೊಂಡು ಮುಂದುವರಿಯಲಾಗುವುದು’ ಎಂದು ಹೇಳಿದರು.
40 ಸಿ.ಎ. ನಿವೇಶನ ಲಭ್ಯ: ‘ನಗರದಲ್ಲಿ 40 ಸಿ.ಎ. ನಿವೇಶನಗಳಿವೆ. ಇದರಲ್ಲಿ ಈಗಾಗಲೇ 14 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಅವುಗಳಲ್ಲಿ ವಿವಿಧ ಸಂಘ–ಸಂಸ್ಥೆಗಳಿಗೆ 10, ಸಮಾಜ ಕಲ್ಯಾಣ ಇಲಾಖೆಗೆ 1 ಮತ್ತು ಪೊಲೀಸ್ ಇಲಾಖೆಗೆ 3 ನಿವೇಶನ ನೀಡಲಾಗಿದೆ. ಉಳಿದ ನಿವೇಶನಗಳನ್ನು ಹಂಚಿಕೆ ಮಾಡಲು ಕ್ರಮ ವಹಿಸಲಾಗುವುದು’ ಎಂದು ಗಾಜೀಗೌಡ್ರ ತಿಳಿಸಿದರು.
ಅನಧಿಕೃತ ಬಡಾವಣೆಗೆ ಕಡಿವಾಣ: ‘ನಗರದ ವ್ಯವಸ್ಥಿತ ಬೆಳವಣಿಗೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿಗೆ ಹಲವು ದೂರದೃಷ್ಟಿಯ ಮಹತ್ವದ ಯೋಜನೆಗಳನ್ನು ತಯಾರಿಸಲಾಗಿದೆ. ಅನಧಿಕೃತ ಬಡಾವಣೆಗಳಿಗೆ ಕಡಿವಾಣ ಹಾಕಲಾಗಿದೆ. ಮಹಾಯೋಜನೆಯ ವಿಸ್ತರಣೆ ಮತ್ತು ಉದ್ಯಾನಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ’ ಎಂದು ಗಾಜೀಗೌಡ್ರ ಹೇಳಿದರು.
‘ಅನಧಿಕೃತ ಬಡಾವಣೆ ನಿರ್ಮಿಸಿದ್ದಕ್ಕಾಗಿ 22 ಮಾಲೀಕರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಅದರಲ್ಲಿ 8 ಮಂದಿ, ಪ್ರಾಧಿಕಾರದ ನಿಯಮದಂತೆ ಹೊಸ ವಿನ್ಯಾಸಕ್ಕೆ ಅನುಮೋದನೆ ಪಡೆದಿದ್ದಾರೆ. ನಿಯಮ ಮೀರುವ ಮಾಲೀಕರ ವಿರುದ್ಧ ಭೂದಾಖಲೆಗಳಲ್ಲಿ ‘ಸರ್ಕಾರ’ ಎಂದು ನಮೂದಿಸಲು ಉಪವಿಭಾಗಾಧಿಕಾರಿಗಳಿಗೆ ಈಗಾಗಲೇ ಪತ್ರ ಬರೆಯಲಾಗಿದೆ’ ಎಂದರು.
‘ಪ್ರಾಧಿಕಾರದ ಕಚೇರಿ ಕೆಲಸಗಳನ್ನು ಪಾರದರ್ಶಕಗೊಳಿಸಲು ‘ಇ–ಆಫೀಸ್’ ತಂತ್ರಾಂಶ ಅಳವಡಿಸಿಕೊಳ್ಳಲಾಗಿದೆ. ಶೀಘ್ರದಲ್ಲೇ ಕಚೇರಿಯನ್ನು ಪೇಪರ್ ರಹಿತ ಕಚೇರಿಯನ್ನಾಗಿ ಮಾಡಲಾಗುವುದು. ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಸ್ಥಳೀಯ ಶಾಸಕರು, ಸಂಸದರು ಮತ್ತು ಜಿಲ್ಲಾಡಳಿತದ ಸಹಕಾರವಿದ್ದು, ಬರುವ ದಿನಗಳಲ್ಲಿ ಹಾವೇರಿ ಜಿಲ್ಲೆಯನ್ನು ಮಾದರಿ ನಗರವನ್ನಾಗಿ ರೂಪಿಸಲಾಗುವುದು’ ಎಂದರು.
ಉದ್ಯಾನ ಅಭಿವೃದ್ಧಿಗೆ ಅನುದಾನ: ‘ನಗರದ ವಿವಿಧ ಭಾಗಗಳಲ್ಲಿ ಉದ್ಯಾನಗಳ ಅಭಿವೃದ್ಧಿಗೆ ಅನುದಾನ ಮೀಸಲಿಡಲಾಗಿದೆ. ಅಕ್ಕಮಹಾದೇವಿ ಹೊಂಡದ ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿ ಹಾಗೂ ಆಹಾರ ತಾಣ ನಿರ್ಮಿಸಲು ₹ 1.50 ಕೋಟಿ ವೆಚ್ಚದ ಕಾಮಗಾರಿ ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಲಾಗುವುದು’ ಎಂದು ಎಸ್.ಎಫ್.ಎನ್. ಗಾಜೀಗೌಡ್ರ ತಿಳಿಸಿದರು.
‘ಸಂತ ಶಿಶುನಾಳ ಶರೀಫ ಉದ್ಯಾನಕ್ಕೆ ₹ 31.65 ಲಕ್ಷ, ಕೆ.ಎಫ್. ಪಾಟೀಲ ಉದ್ಯಾನಕ್ಕೆ ₹ 27.61 ಲಕ್ಷ ಹಾಗೂ ವೀರವನಿತೆ ಒನಕೆ ಓಬವ್ವ ಉದ್ಯಾನಕ್ಕೆ ₹ 40.53 ಲಕ್ಷ ಮೀಸಲಿಡಲಾಗಿದೆ’ ಎಂದರು.
ಪ್ರಾಧಿಕಾರದ ಆಯುಕ್ತ ವೀರಮಲ್ಲಪ್ಪ ಪೂಜಾರ, ಸದಸ್ಯರಾದ ಜಮೀರ್ ಜಿಗರಿ, ಮಾಲಿಂಗಯ್ಯ ಪಾಟೀಲ, ವೀಣಾ ಕುರಬಸಪ್ಪ ಹಲಗಣ್ಣವರ, ಬಸವರಾಜ ಮಾಳಗಿ ಪತ್ರಿಕಾಗೋಷ್ಠಿಯಲ್ಲಿದ್ದರು.
ಹಾವೇರಿ ಹಾಗೂ ಸುತ್ತಮುತ್ತಲಿನ ರೈತರು ಸ್ವಯಂ ಆಸಕ್ತಿಯಿಂದ ವಸತಿ ಯೋಜನೆಗೆ ಜಮೀನು ನೀಡಿದರೆ ಯೋಜನೆಯಲ್ಲಿ ಅವರಿಗೂ ಪಾಲುದಾರಿಕೆ ನೀಡಲಾಗುವುದುಎಸ್.ಎಫ್.ಎನ್. ಗಾಜೀಗೌಡ್ರ
ಹೊರವರ್ತುಲ ರಸ್ತೆ ನಿರ್ಮಾಣ
‘ನಗರ ಯೋಜನಾ ಪ್ರದೇಶವನ್ನು ವಿಸ್ತರಿಸಲಾಗಿದೆ. 16 ಹಳ್ಳಿ ಒಳಗೊಂಡಿದ್ದ ಮಹಾಯೋಜನೆಗೆ ಈಗ ಹೊಸದಾಗಿ 14 ಹಳ್ಳಿಗಳು ಸೇರ್ಪಡೆಗೊಂಡಿವೆ. 24261.35 ಹೆಕ್ಟೇರ್ ಪ್ರದೇಶಕ್ಕೆ ವಿಸ್ತರಿಸಿದೆ’ ಎಂದು ಗಾಜೀಗೌಡ್ರ ತಿಳಿಸಿದರು. ‘ಭವಿಷ್ಯದ ಹಿತದೃಷ್ಠಿಯಿಂದ ನಗರಕ್ಕೆ 11.5 ಕಿ.ಮೀ ಉದ್ದದ ವರ್ತುಲ ರಸ್ತೆ ಅಗತ್ಯವಿದೆ. ಇದರ ನಿರ್ಮಾಣಕ್ಕೆ ಡಿ.ಪಿ.ಆರ್ ಸಿದ್ಧಪಡಿಸಲು ಹುಬ್ಬಳ್ಳಿಯ ವಿಷನ್ ಸಲ್ಯೂಷನ್ ಸಂಸ್ಥೆಗೆ ಟೆಂಡರ್ ನೀಡಲಾಗಿದೆ. ಡಿ.ಪಿ.ಆರ್ ಸಿದ್ಧವಾಗುತ್ತಿದ್ದಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಹೇಳಿದರು.