ಹಿರೇಕೆರೂರು (ಹಾವೇರಿ): ಪಟ್ಟಣದ ನ್ಯಾಯಾಲಯದಲ್ಲಿ ಶಿರಸ್ತೇದಾರರಾಗಿದ್ದ ಮಲ್ಲಿಕಾರ್ಜುನ ಭರಗಿ (42) ಹಿರೇಕೆರೂರಿನ ಸರ್ಕಾರಿ ನೌಕರರ ಭವನದ ಕೊಠಡಿಯಲ್ಲಿ ಭಾನುವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದು, ಸೋಮವಾರ ಪ್ರಕರಣ ಬೆಳಕಿಗೆ ಬಂದಿದೆ.
ಮೂಲತಃ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕಟಗೇರ ಗ್ರಾಮದವರಾದ ಮಲ್ಲಿಕಾರ್ಜುನ ಅವರು ಹಿರೇಕೆರೂರಿನ ತಂಬಾಕದ ನಗರದಲ್ಲಿ ವಾಸಿಸುತ್ತಿದ್ದರು. ಹಿರೇಕೆರೂರು ಪಟ್ಟಣದ ನ್ಯಾಯಾಲಯದಲ್ಲಿ 13 ವರ್ಷಗಳಿಂದ ಶಿರಸ್ತೇದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರಿಗೆ ತಂದೆ, ತಾಯಿ, ಪತ್ನಿ, ಪುತ್ರಿ ಹಾಗೂ ಒಬ್ಬ ಪುತ್ರ ಇದ್ದಾರೆ.
‘ಹಸೀನಾ ಮೂಲಿಮನಿ ಎಂಬ ಮಹಿಳೆ ಮಲ್ಲಿಕಾರ್ಜುನ ಅವರಿಗೆ ನಿತ್ಯ ಫೋನ್ ಮಾಡಿ, ಮೆಸೇಜ್ ಮಾಡಿ, ಫೋಟೊಗಳನ್ನು ಕಳುಹಿಸಿ ಮಾನಸಿಕ ಚಿತ್ರಹಿಂಸೆ ನೀಡುತ್ತಿದ್ದಳು. ವಕೀಲರಾದ ಜಿ.ವಿ.ಕುಲಕರ್ಣಿ, ಕೆ.ಬಿ.ಕುರಿಯವರು, ವಾಸೀಮ್ ಎಂಬ ಆರೋಪಿಗಳು ನ್ಯಾಯಾಲಯದಲ್ಲಿ ಮಾನಸಿಕ ಕಿರುಕುಳ ನೀಡುತ್ತಿದ್ದರು. ಇದರಿಂದ ಮನನೊಂದು ಭಾನುವಾರ ನೇಣಿಗೆ ಶರಣಾಗಿದ್ದಾರೆ’ ಎಂದು ಮೃತರ ಪತ್ನಿ ಭಾರತಿ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಸಾಯುವ ಮುನ್ನ, ‘ನನ್ನ ಸಾವಿಗೆ ಈ ನಾಲ್ವರು ಆರೋಪಿಗಳು ಕಾರಣರಾಗಿದ್ದು, ಅವರಿಗೆ ಜಯವಾಗಲಿ’ ಎಂದು ತನ್ನ ವಾಟ್ಸ್ಆ್ಯಪ್ ಸ್ಟೇಟಸ್ ಹಾಕಿಕೊಂಡು, ಕೊಠಡಿಯಲ್ಲಿ ನೇಣು ಹಾಕಿಕೊಂಡಿದ್ದಾರೆ. ಸುಮಾರು 26 ಪುಟಗಳ ‘ಡೆತ್ ನೋಟ್’ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.