ADVERTISEMENT

ನಿರಾಶ್ರಿತರಿಗೆ ಹಾಲು ವಿತರಣೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2020, 13:35 IST
Last Updated 4 ಏಪ್ರಿಲ್ 2020, 13:35 IST
ಹಾವೇರಿಯಲ್ಲಿ ನಿರ್ಗತಿಕರಿಗೆ ಉಚಿತ ಹಾಲು ವಿತರಣೆ ಕಾರ್ಯಕ್ರಮಕ್ಕೆ ಶಾಸಕ ನೆಹರು ಓಲೇಕಾರ ಶನಿವಾರ ಚಾಲನೆ ನೀಡಿದರು 
ಹಾವೇರಿಯಲ್ಲಿ ನಿರ್ಗತಿಕರಿಗೆ ಉಚಿತ ಹಾಲು ವಿತರಣೆ ಕಾರ್ಯಕ್ರಮಕ್ಕೆ ಶಾಸಕ ನೆಹರು ಓಲೇಕಾರ ಶನಿವಾರ ಚಾಲನೆ ನೀಡಿದರು    

ಹಾವೇರಿ: ಜಿಲ್ಲೆಯ ನಗರ ಪ್ರದೇಶದ ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ, ನಿರಾಶ್ರಿತರಿಗೆ ಸರ್ಕಾರದ ವತಿಯಿಂದ ಉಚಿತ ಹಾಲು ವಿತರಣೆಗೆ ಚಾಲನೆ ನೀಡಲಾಯಿತು.

ಹಿರೇಕೆರೂರು ಪುಟ್ಟಣದಲ್ಲಿ ಕೃಷಿ ಸಚಿವರಾದ ಬಿ.ಸಿ.ಪಾಟೀಲ, ಹಾವೇರಿ ನಗರದಲ್ಲಿ ಶಾಸಕರಾದ ನೆಹರು ಓಲೇಕಾರ ಹಾಗೂ ಬ್ಯಾಡಗಿ ಪಟ್ಟಣದಲ್ಲಿ ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ ಅವರು ಹಾಲು ವಿತರಣೆಗೆ ಚಾಲನೆ ನೀಡಿದರು.

ಹಿರೇಕೆರೂರು ಪಟ್ಟಣದಲ್ಲಿ ಹಾಲು ವಿತರಣೆಗೆ ಚಾಲನೆ ನೀಡಿದ ಕೃಷಿ ಸಚಿವರಾದ ಬಿ.ಸಿ.ಪಾಟೀಲ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸರ್ಕಾರ ಬಡ ಜನರಿಗೆ ಲಾಕ್‍ಡೌನ್‍ನಿಂದಾಗಿ ಯಾವುದೇ ತೊಂದರೆಯಾಗಬಾರದೆಂಬ ಉದ್ದೇಶದಿಂದ, ಜನತೆಯ ಆರೋಗ್ಯ ದೃಷ್ಟಿಯಿಂದ ಉಚಿತ ಹಾಲವನ್ನು ವಿತರಿಸುತ್ತಿದೆ. ಧಾರವಾಡ ಜಿಲ್ಲಾ ಹಾಲು ಒಕ್ಕೂಟದಲ್ಲಿ ಹೆಚ್ಚುವರಿ 19 ಸಾವಿರ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಈ ಹಾಲನ್ನು ಆಯಾ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿರುವ ನಿರಾಶ್ರಿತರು, ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಪ್ರತಿ ದಿನ ಒಂದು ಲೀಟರ್ ಹಾಲು ಉಚಿತವಾಗಿ ಏ.14ರವರೆಗೆ ವಿತರಿಸಿ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಆ ಮೂಲಕ ಬಡವರಲ್ಲಿ ಪೌಷ್ಟಿಕತೆಯನ್ನು ಹೆಚ್ಚಳಮಾಡಿ ಆಹಾರ ಭದ್ರತೆ ಒದಗಿಸಲಾಗುತ್ತದೆ ಎಂದು ತಿಳಿಸಿದರು.

ADVERTISEMENT

ರಾಜ್ಯ ಉಗ್ರಾಣ ನಿಗಮದ ಆಧ್ಯಕ್ಷ ಯು.ಬಿ.ಬಣಕಾರ ಅವರು ಸೇರಿದಂತೆ ಪಟ್ಟಣ ಪಂಚಾಯಿತಿ ಸದಸ್ಯರು ಇದ್ದರು.

ಶಾಸಕ ನೆಹರು ಚಾಲನೆ:

ನಗರದ ಅಗ್ನಿಶಾಮಕ ಕಚೇರಿಯ ಹಿಂಭಾಗದಲ್ಲಿ ವಾಸ ಮಾಡುತ್ತಿರುವ ಅಲೆಮಾರಿ ಕುಟುಂಬಗಳಿಗೆ ಹಾಗೂ ತರಳಬಾಳು ಬಡಾವಣೆಗಳಲ್ಲಿ ವಾಸಮಾಡುವ ವಲಸೆ ಕಾರ್ಮಿಕರಿಗೆ ಶಾಸಕರಾದ ನೆಹರು ಓಲೇಕಾರ ಉಚಿತ ಹಾಲು ವಿತರಿಸಿದರು.
ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷರಾದ ಬಸವರಾಜ ಅರಬಗೊಂಡ, ನಗರಸಭೆ ಸದಸ್ಯರಾದ ಗಿರೀಶ ತುಪ್ಪದ, ಬಾಬು ಮೋಮಿನಗಾರ, ಜಗದೀಶ ಮಲಗೋಡ, ತಹಶೀಲ್ದಾರ ಶಂಕರ, ಪೌರಾಯುಕ್ತ ಬಸವರಾಜ ಜಿದ್ದಿ, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ್ವರ ಹುಬ್ಬಳ್ಳಿ ಇದ್ದರು.

ಬ್ಯಾಡಗಿ ನಗರದ ಕೊಳಗೇರಿ ವಾಸಿಗಳಿಗೆ, ವಲಸೆ ಕಾರ್ಮಿಕರಿಗೆ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ ಅವರು, ಸ್ಥಳೀಯ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳೊಂದಿಗೆ ಉಚಿತ ಹಾಲು ವಿತರಿಸಿದರು. ರಾಣೆಬೆನ್ನೂರು, ಬಂಕಾಪುರ, ಶಿಗ್ಗಾವಿ, ಸವಣೂರು ಹಾಗೂ ಹಾನಗಲ್ ಪಟ್ಟಣಗಳಲ್ಲಿ ಉಚಿತ ಹಾಲು ವಿತರಣೆ ನಗರ ಸ್ಥಳೀಯ ಸಂಸ್ಥೆಗಳ ವತಿಯಿಂದ ವಿತರಿಸಲಾಯಿತು.

ಹಾವೇರಿ ಜಿಲ್ಲೆಯಲ್ಲಿ ನಿರಾಶ್ರಿತರು ಹಾಗೂ ಕೊಳೆಗೇರಿ ಕುಟುಂಬಗಳ ಜನ ಸೇರಿದಂತೆ 21,190 ಜನರನ್ನು ಗುರುತಿಸಲಾಗಿದೆ. ಮೊದಲ ಹಂತದಲ್ಲಿ ನಗರಗಳಲ್ಲಿ ವಿತರಿಸಲಾಗುತ್ತಿದ್ದು, ಹಂತ ಹಂತವಾಗಿ ಜಿಲ್ಲೆಯ ಪಟ್ಟಣಗಳಿಗೂ ವಿತರಣೆ ಮಾಡುವಂತೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.