ಹಾವೇರಿ: ‘ಮನುಷ್ಯ ಆಶಾಭಾವನೆಯಿಂದ ಇರಬೇಕು. ನಮ್ಮನ್ನು ಬಿಜೆಪಿಯಲ್ಲಿ ಇಷ್ಟು ದಿನ ಗೌರವದಿಂದ ನಡೆಸಿಕೊಳ್ಳಲಾಗಿದೆ. ಮುಂದೆಯೂ ಗೌರವದಿಂದ ನಡೆಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ನೂತನ ಸಚಿವ ಸಂಪುಟದಲ್ಲಿ ವಲಸಿಗರನ್ನು ಕೈಬಿಡುತ್ತಾರೆ ಎಂಬುದು ಊಹಾಪೋಹ. ಈ ರೀತಿ ಯಾರೂ ಹೇಳಿಲ್ಲ’ ಎಂದು ಹಿರೇಕೆರೂರು ಕ್ಷೇತ್ರದ ಶಾಸಕ ಬಿ.ಸಿ.ಪಾಟೀಲ ಹೇಳಿದರು.
ಹಿರೇಕೆರೂರಿನ ತಮ್ಮ ನಿವಾಸದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಕಾಂಗ್ರೆಸ್–ಜೆಡಿಎಸ್ನಿಂದ ಬಂದ ವಲಸಿಗರಿಂದಲೇ ಬಿಜೆಪಿ ಸರ್ಕಾರ ರಚನೆಯಾಗಿದೆ ಎಂದು ಬಿ.ಎಸ್.ಯಡಿಯೂರಪ್ಪ ಈಗಾಗಲೇ ಹೇಳಿದ್ದಾರೆ. ಹೀಗಾಗಿ ನಮಗೆ ಭರವಸೆ ಇದೆ. ನಮಗೆ ಬಿಜೆಪಿಯಲ್ಲಿ ಯಾವತ್ತೂ ಭಯ ಕಾಡಿಲ್ಲ. ಯಾವುದೇ ಆತಂಕ ಕಾಡಿಲ್ಲ’ ಎಂದು ಹೇಳಿದರು.
ನೂತನ ಮುಖ್ಯಮಂತ್ರಿ ಆಯ್ಕೆಯಾಗಿ ಒಂದು ವಾರ ಕಳೆಯಿತು. ಕೋವಿಡ್ ಮತ್ತು ನೆರೆ ಹಿನ್ನೆಲೆಯಲ್ಲಿ ಕೂಡಲೇ ಮಂತ್ರಿಮಂಡಲ ರಚನೆ ಆಗಬೇಕು. ನಾನು ಯಾವ ಖಾತೆ ಬಗ್ಗೆಯೂ ನಿರೀಕ್ಷೆ ಇಟ್ಟುಕೊಂಡಿಲ್ಲ. ಕೊಟ್ಟ ಖಾತೆ ನಿಭಾಯಿಸುವ ಸಾಮರ್ಥ್ಯ ಇದೆ. ಯಾವ ಖಾತೆ ಕೊಟ್ಟರೂ ನಿಭಾಯಿಸುವೆ ಎಂದು ನುಡಿದರು.
ಮೈಲಾರ ಶ್ರೀಗಳ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಸ್ವಾಮಿಗಳು ಕೊರೊನಾ ಬಗ್ಗೆ ಭವಿಷ್ಯ ಹೇಳಲಿ ನೋಡೋಣ. ಗಡ್ಡದಾರಿಯೊಬ್ಬರು ಸಿ.ಎಂ ಆಗುತ್ತಾರೆ ಅಂತ ಮೈಲಾರದ ಸ್ವಾಮೀಜಿ ಹೇಳಿರಬಹುದು. ಆದರೆ, ಭವಿಷ್ಯ ನಿರ್ಧಾರ ಮಾಡೋದು ರಾಜ್ಯದ ಪ್ರಜೆಗಳು. ದೇವೇಗೌಡರನ್ನು ಬೊಮ್ಮಾಯಿ ಭೇಟಿ ಮಾಡಿದ್ದಾರೆ. ಹಿರಿಯರನ್ನು ಭೇಟಿ ಮಾಡೋದು ಸಂಸ್ಕೃತಿ. ಇದಕ್ಕೆ ರಾಜಕೀಯ ಅರ್ಥ ಕಲ್ಪಿಸುವ ಅಗತ್ಯ ಇಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.