ಹಾವೇರಿ: ವಿವಾಹಿತೆಯನ್ನು ಪ್ರೀತಿ ಮಾಡಿ, ಮದುವೆಯಾಗುವುದಾಗಿ ನಂಬಿಸಿದ ಪ್ರಿಯಕರನೇ ಆಕೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ಹಾವೇರಿ ತಾಲ್ಲೂಕಿನ ಕರ್ಜಗಿ ಅರಣ್ಯದ ಸಮೀಪದ ಪಾಳು ಮನೆಯೊಂದರಲ್ಲಿ ನಡೆದಿದ್ದು, ಗುರುವಾರ ಪ್ರಕರಣ ಬೆಳಕಿಗೆ ಬಂದಿದೆ.
ತಾಲ್ಲೂಕಿನ ಕೌದಿಕಲ್ಲಾಪುರ ಗ್ರಾಮದ ಶಿಲ್ಪಾ ಪ್ರಭು ಮೃತಪಟ್ಟ ಮಹಿಳೆ. ಯತ್ತಿನಹಳ್ಳಿ ಗ್ರಾಮದ ಕರಬಸಪ್ಪ ಕೋಡಿಹಳ್ಳಿ ಎಂಬ ಆರೋಪಿಯನ್ನು ಗ್ರಾಮೀಣ ಠಾಣೆ ಪೊಲಿಸರು ಗುರುವಾರ ಬಂಧಿಸಿದ್ದಾರೆ.
‘ಜನವರಿ ತಿಂಗಳಲ್ಲಿ ಶಿಲ್ಪಾ ಅವರನ್ನು ಪರಿಚಯ ಮಾಡಿಕೊಂಡು, ಪ್ರೀತಿಸುತ್ತೇನೆ ಎಂದು ಕರಬಸಪ್ಪ ನಂಬಿಸಿದ್ದ. ಬುಧವಾರ ಸಂಜೆ ಕರಬಸಪ್ಪ ಅವರನ್ನು ಹುಡುಕಿಕೊಂಡು ಅವರ ಮನೆಗೆ ಶಿಲ್ಪಾ ಹೋಗಿದ್ದರು. ನನ್ನನ್ನು ಮದುವೆಯಾಗು ಮತ್ತು ಹಣ ಕೊಡು ಎಂದು ಪದೇ ಪದೇ ಪೀಡಿಸುತ್ತಿದ್ದರು. ಹೇಳದೆ ಕೇಳದೆ ಮನೆಗೆ ಬಂದ ಕಾರಣ ಕುಪಿತಗೊಂಡ ಆರೋಪಿ, ಶಿಲ್ಪಾ ಅವರನ್ನು ಬೈಕ್ನಲ್ಲಿ ಕರ್ಜಗಿ ಅರಣ್ಯದ ಕಡೆ ಕರೆದೊಯ್ದು ಹತ್ಯೆ ಮಾಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ 24 ಗಂಟೆಯೊಳಗೆ ಪ್ರಕರಣವನ್ನು ಹಾವೇರಿ ಗ್ರಾಮೀಣ ಠಾಣೆ ಪೊಲೀಸರು ಬೇಧಿಸಿ, ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.