ಹಾವೇರಿ: ಕಾಯ ಕೈಲಾಸವಾಗದೆ, ಕಾಯಕ ಕೈಲಾಸವಾಗುವುದಿಲ್ಲ. ಸಹಜ ಶಿವಯೋಗದಿಂದ ಸುಜ್ಞಾನ, ಸತ್ಕ್ರಿಯೆ, ಸದ್ಭಾವಗಳು ನೆಲೆನಿಂತು ಕಾಯವೂ ಕೈಲಾಸವಾಗುತ್ತದೆ ಎಂದು ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ನಗರದ ಹೊಸಮಠದ ಬಸವಕೇಂದ್ರದಲ್ಲಿ ಭಾನುವಾರ ಏರ್ಪಡಿಸಿದ್ದ "ಸಹಜ ಶಿವಯೋಗ" ಪ್ರಾತ್ಯಕ್ಷಿಕೆ ನಡೆಸಿಕೊಟ್ಟು ಅವರು ಮಾತನಾಡಿದರು.
ಆಂತರ್ಯದಲ್ಲಿ ಸಮತೋಲನ ಸಾಧಿಸುವುದು ಅಗತ್ಯ. ನಿಮ್ಮ ಬದುಕಿನಲ್ಲಿ ಶಾಂತಿ, ಸಹನೆಯ ಸ್ಥಾಪನೆಯಾಗಬೇಕು. ಶರೀರ ಕ್ರಮಬದ್ಧವಾಗಿ ಕೆಲಸ ಮಾಡಬೇಕೆಂದರೆ ಸಮತೋಲನ ಅಗತ್ಯ ಎಂದರು.
ಹೊರಗಿನ ತಲೆಯನ್ನು ಬಾಚಿಕೊಳ್ಳುವ ಜತೆಗೆ, ಒಳಗಿನ ತಲೆಯನ್ನು ಒಪ್ಪವಾಗಿಸುವ ಕೆಲಸವಾಗಬೇಕು. ಕೋಪ ತಾಪ ವಿಕಾರಗಳು ಕಡಿಮೆಯಾಗಿ, ಸಹಜತೆಯ ಬದುಕು ಶಿವಯೋಗದಿಂದ ಲಭ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಬದುಕಿನಲ್ಲಿ ಬರುವ ಸುಖ ದುಃಖ, ಸಮ್ಮಾನ ಅಪಮಾನಗಳನ್ನು ಸಮಾನವಾಗಿ ಸ್ವೀಕರಿಸಬೇಕೇ ಹೊರತು, ವಿಚಲಿತನಾಗಬಾರದು. ಚಂಚಲತೆಯನ್ನು ಕಡಿಮೆ ಮಾಡಿ ಸಾಮಾನ್ಯ ಮನುಷ್ಯನನ್ನು ಶರಣನನ್ನಾಗಿ, ಚಲಿಸುವ ದೇವಾಲಯವನ್ನಾಗಿ ಮಾಡುವುದು ಶಿವಯೋಗ. ಒಟ್ಟಿನಲ್ಲಿ ಶಿವಯೋಗದಿಂದ ಮಾನವ ಮಹಾದೇವನಾಗುತ್ತಾನೆ ಎಂದರು.
ಶ್ರೀಮಠದ ನೂರಾರು ಭಕ್ತರು ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.