ADVERTISEMENT

ಹಿರೇಕೆರೂರು: ಸ್ವಂತ ಕಟ್ಟಡಕ್ಕೆ ಕಾದಿರುವ ಸರ್ಕಾರಿ ಕಚೇರಿಗಳು

ದುಬಾರಿ ಬಾಡಿಗೆ ಭರಿಸುತ್ತಿರುವ ಇಲಾಖೆಗಳು: ಮೂಲಸೌಕರ್ಯಗಳಿಲ್ಲದೆ ಪರದಾಡುತ್ತಿರುವ ಸಾರ್ವಜನಿಕರು

ಶಂಕರ ಕೊಪ್ಪದ
Published 25 ಸೆಪ್ಟೆಂಬರ್ 2023, 4:52 IST
Last Updated 25 ಸೆಪ್ಟೆಂಬರ್ 2023, 4:52 IST
ಹಿರೇಕೆರೂರು ಪಟ್ಟಣದ ಮಲೇಶಪ್ಪ ಕಾಂಪ್ಲೆಕ್ಸ್‌ನ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿ ಸಿಬ್ಬಂದಿ 
ಹಿರೇಕೆರೂರು ಪಟ್ಟಣದ ಮಲೇಶಪ್ಪ ಕಾಂಪ್ಲೆಕ್ಸ್‌ನ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿ ಸಿಬ್ಬಂದಿ    

ಹಿರೇಕೆರೂರು: ತಾಲ್ಲೂಕಿನ ಕೆಲವು ಸರ್ಕಾರಿ ಇಲಾಖೆಗಳಿಗೆ ಸ್ವಂತ ಕಟ್ಟಡವಿಲ್ಲದೆ, ಬಾಡಿಗೆ ಕಟ್ಟಡದಲ್ಲೇ ಕಾರ್ಯ ನಿರ್ವಹಿಸುತ್ತಿವೆ. ದುಬಾರಿ ಬಾಡಿಗೆ ನೀಡುತ್ತಿರುವ ಪರಿಣಾಮವಾಗಿ ಜನರ ತೆರಿಗೆ ಹಣ ಪೋಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ. 

ದಿಕ್ಕಿಗೊಂದು ಸರ್ಕಾರಿ ಕಚೇರಿಗಳು ಇರುವ ಕಾರಣ, ಹಳ್ಳಿಗಳಿಂದ ಬರುವ ಗ್ರಾಮೀಣ ಜನರು ದೂರ ದೂರದಲ್ಲಿರುವ ಸರ್ಕಾರಿ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಬಾಡಿಗೆ ಕಟ್ಟಡಗಳಲ್ಲಿ ಆಸನ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ, ಸರದಿಯಲ್ಲಿ ನಿಲ್ಲುವ ಜನರಿಗೆ ನೆರಳಿನ ಆಸರೆ ಮುಂತಾದ ಸೌಕರ್ಯಗಳು ಇಲ್ಲದ ಕಾರಣ ಪರದಾಡುವಂತಾಗಿದೆ.

ಕೊಠಡಿಗಳ ಕೊರತೆ:

ಹಿರೇಕೆರೂರು ಪಟ್ಟಣದಲ್ಲಿ ತಾಲ್ಲೂಕು ಆಡಳಿತ ಸೌಧವಿದ್ದರೂ ಕೊಠಡಿಗಳ ಕೊರತೆಯಿಂದ ವಿವಿಧ ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುವಂತಾಗಿದೆ. ಒಂದೇ ಸೂರಿನಡಿ ಎಲ್ಲ ಸರ್ಕಾರಿ ಕಚೇರಿಗಳು ಇದ್ದರೆ, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಒಂದೇ ಕಡೆ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುತ್ತದೆ ಎನ್ನುತ್ತಾರೆ ವಿದ್ಯಾರ್ಥಿನಿಯರಾದ ಕುಸುಮಾ, ರೇಣುಕಾ. 

ADVERTISEMENT

ತಾಲ್ಲೂಕು ಆಡಳಿತ ಸೌಧದಲ್ಲಿ ಉಪಖಜಾನೆ, ಉಪನೋಂದಣಾಧಿಕಾರಿ, ಭೂಮಾಪನ, ಆಹಾರ ಮತ್ತು ಕಂದಾಯ ಸೇರಿದಂತೆ ವಿವಿಧ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ. ಪೊಲೀಸ್ ಠಾಣೆ, ಅರಣ್ಯ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಅಗ್ನಿಶಾಮಕದಳ ಈ ಇಲಾಖೆಗಳು ಸ್ವಂತ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ ಈ ಎಲ್ಲ ಕಚೇರಿಗಳು ಒಂದೇ ಕಡೆ ಇಲ್ಲ.  

ತಾಲ್ಲೂಕು ಪ್ರಾರಂಭವಾದಾಗಿನಿಂದಲೂ ಬಾಡಿಗೆ ಕಟ್ಟಡದಲ್ಲಿ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತ ಕಾರ್ಯನಿರ್ವಹಿಸುತ್ತಿರುವ ಪಟ್ಟಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಮಗ್ರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ (ಸಿಡಿಪಿಒ) ಸ್ವಂತ ಕಟ್ಟಡ ಸಿಗದಿರುವುದೇ ವಿಪರ್ಯಾಸದ ಸಂಗತಿ. 1981-82ನೇ ಸಾಲಿನಲ್ಲಿ ಆರಂಭಗೊಂಡ ಕಚೇರಿ ಇಲ್ಲಿಯವರೆಗೆ ಬಾಡಿಗೆ ಕಟ್ಟಡಗಳಲ್ಲೇ ಕಾರ್ಯನಿರ್ವಹಿಸುತ್ತಾ ಬಂದಿದೆ ಎನ್ನುತ್ತಾರೆ ಅಂಗನವಾಡಿ ಸಹಾಯಕಿಯರು. 

ಮೀನುಗಾರಿಕೆ ಇಲಾಖೆ ಸಹ ಕಳೆದ ಎಂಟು ವರ್ಷಗಳಿಂದ ಪಟ್ಟಣ ಬಸವೇಶ್ವರ ನಗರದ ನಾಲ್ಕನೇ ಅಡ್ಡ ರಸ್ತೆ ‘ಎ’ ಬ್ಲಾಕ್‌ನಲ್ಲಿ ಮೀನುಗಾರಿಕೆ ಕಚೇರಿ ಇದ್ದು, ತಿಂಗಳಿಗೆ ₹ 4,400 ಬಾಡಿಗೆ ಸಂದಾಯ ಮಾಡಲಾಗುತ್ತಿದೆ. ಇಲಾಖೆ ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿಗಳ ಕೊರತೆ ಹಾಗೂ ಸ್ವಂತ ಕಟ್ಟಡವಿಲ್ಲದೆ ನರಳುತ್ತಿದೆ. 

ಉದ್ಘಾಟನೆಗೆ ಕಾದಿರುವ ಕಟ್ಟಡ:

ಪಟ್ಟಣದಲ್ಲಿ ಒಂಬತ್ತು ತಿಂಗಳ ಹಿಂದೆ ಆರಂಭವಾದ ಕಾರ್ಮಿಕ ಇಲಾಖೆ ಪ್ರಸ್ತುತ ಪಟ್ಟಣದ ದುರ್ಗಾ ಟಾಕೀಸ್‌ ಹತ್ತಿರ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ತಿಂಗಳು ₹ 5000 ಬಾಡಿಗೆ ಪಾವತಿಸುತ್ತಿದೆ. ಪಟ್ಟಣದ ಹಿರೇಕೆರೂರು ಹಾಗೂ ಚಿಕ್ಕೇರೂರು ಪಕ್ಕದ ರಸ್ತೆಯಲ್ಲಿ ಕಾರ್ಮಿಕರ ಸಮುದಾಯ ಭವನ ಹಾಗೂ ಕಾರ್ಮಿಕ ಕಚೇರಿ ನಿರ್ಮಾಣಗೊಂಡಿದ್ದು, ಕಟ್ಟಡ ಉದ್ಘಾಟನೆಯಾದ ನಂತರ ಅಲ್ಲಿಗೆ ಸ್ಥಳಾಂತರಗೊಳ್ಳುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ತಿಂಗಳಿಗೆ ₹ 18 ಸಾವಿರ ಬಾಡಿಗೆ:

ಅಬಕಾರಿ ಇಲಾಖೆಗೆ ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ಎರಡು ಕೊಠಡಿಗಳನ್ನು ಕೊಡಲಾಗಿತ್ತು. ಆದರೆ ದಾಳಿ ಮಾಡಿದ ಸಮಯದಲ್ಲಿ ಸಿಕ್ಕಂತಹ ಪ್ರಾಪರ್ಟಿಗಳನ್ನು ಇಡಲು ಜಾಗದ ಕೊರತೆಯಿಂದ ಪಟ್ಟಣದ ಬಸವೇಶ್ವರ ನಗರದಲ್ಲಿ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಅಬಕಾರಿ ಇಲಾಖೆಯಿಂದ ಪ್ರತಿ ತಿಂಗಳು ₹18,000 ಬಾಡಿಗೆಯನ್ನು ಕೊಡಲಾಗುತ್ತಿದೆ.

ಹಿರೇಕೆರೂರು ಪಟ್ಟಣದ ವಿಜಯನಗರದಲ್ಲಿನ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಮಗ್ರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ (ಸಿಡಿಪಿಒ) ಕಚೇರಿಯ ಹೊರನೋಟ

ಹಿರೇಕೆರೂರು ವಿಧಾನಸಭಾ ಕ್ಷೇತ್ರದ ರಟ್ಟೀಹಳ್ಳಿ ನೂತನ ತಾಲ್ಲೂಕು ಆಗಿ 5 ವರ್ಷಗಳಾದರೂ ಇದುವರೆಗೆ ವಿವಿಧ ಇಲಾಖೆಗಳು ಪ್ರಾರಂಭವಾಗಿಲ್ಲ ಹಾಗೂ ಅಲ್ಲಿಗೆ ಪೂರ್ಣ ಪ್ರಮಾಣದಲ್ಲಿ ಅಧಿಕಾರಿಗಳು ನೇಮಕಗೊಂಡಿಲ್ಲ. ಅಲ್ಲಿನ ಕೆಲಸವನ್ನು ಸಹ ಹಿರೇಕೆರೂರು ತಾಲ್ಲೂಕಿಗೆ ವಹಿಸಲಾಗಿದ್ದು, ಇದರಿಂದ ಮತ್ತಷ್ಟು ಕಾರ್ಯದೊತ್ತಡ ಉಂಟಾಗಿ, ಸಕಾಲದಲ್ಲಿ ಸರ್ಕಾರಿ ಸೇವೆ ಸಿಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. 

ಹಿರೇಕೆರೂರು ಪಟ್ಟಣದ ಜನವಸತಿ ಪ್ರದೇಶದ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕ ನಿರೀಕ್ಷಕರ ಕಚೇರಿ
ತಿಂಗಳಿಗೆ ₹ 35 ಸಾವಿರ ಬಾಡಿಗೆ!
ಆರಂಭದಲ್ಲಿ ಬಸ್‌ ನಿಲ್ದಾಣದ ಎದುರಿಗೆ ಬಾಡಿಗೆ ಕಟ್ಟಡದಲ್ಲಿ ತಿಂಗಳಿಗೆ ₹3 ಸಾವಿರದಿಂದ ಬಾಡಿಗೆ ನೀಡುತ್ತಾ ಬಂದಿದ್ದ ಈ ಇಲಾಖೆ ಸದ್ಯ ಪಟ್ಟಣದ ವಿಜಯನಗರದಲ್ಲಿನ ಬಾಡಿಗೆ ಕಟ್ಟಡಕ್ಕೆ ತಿಂಗಳಿಗೆ ಬರೊಬ್ಬರಿ ₹35,280 ಬಾಡಿಗೆ ನೀಡುತ್ತಿದೆ. ರಟ್ಟೀಹಳ್ಳಿ ಹಾಗೂ ಹಿರೇಕೆರೂರು ತಾಲ್ಲೂಕಿನಲ್ಲಿ ಒಟ್ಟು 343 ಅಂಗನವಾಡಿ ಕೇಂದ್ರಗಳಿದ್ದು ನಿತ್ಯ ಒಂದಿಲ್ಲೊಂದು ಕೆಲಸಕ್ಕೆ ಸಭೆ ಸಮಾರಂಭಗಳಿಗೆ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರು ಇಲ್ಲಿಗೆ ಬಂದು ಹೋಗುತ್ತಾರೆ. ಸ್ಥಳದ ಕೊರತೆ ಮತ್ತು ಮೂಲಸೌಕರ್ಯಗಳ ಕೊರತೆಯಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದೇವೆ ಎಂದು ಅಂಗನವಾಡಿ ಸಹಾಯಕಿಯರು ದೂರಿದ್ದಾರೆ. 
ಹಿಂದುಳಿದ ವರ್ಗಗಳ ಇಲಾಖೆಗೆ ಸಿಗದ ನಿವೇಶನ
ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹ ಪಟ್ಟಣದ ಮಲ್ಲೇಶಪ್ಪ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಸುತ್ತಿದ್ದು ಈ ಇಲಾಖೆ ಪ್ರತಿ ತಿಂಗಳು ₹12 ಸಾವಿರ ಬಾಡಿಗೆಯನ್ನು ಸಂದಾಯ ಮಾಡುತ್ತಿದೆ. ಹಿರೇಕೆರೂರು ಪಟ್ಟಣಕ್ಕೆ ಹೊಂದಿಕೊಂಡಿರುವ ಮತ್ತು ಗ್ರಾಮಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿರುವ ಸಾರ್ವಜನಿಕರ ಉದ್ದೇಶಕ್ಕಾಗಿ ಮೀಸಲಿರಿಸಿರುವ ಉಚಿತ ನಿವೇಶನಕ್ಕಾಗಿ ಇಲಾಖೆಯಿಂದ ಹಲವು ಬಾರಿ ಪಟ್ಟಣ ಪಂಚಾಯಿತಿಗೆ ಹಾಗೂ ಪಟ್ಟಣ ಸಮೀಪದ ಗ್ರಾಮ ಪಂಚಾಯಿತಿಗಳಿಗೆ ನಿವೇಶನ ಕ್ಕಾಗಿ ಅರ್ಜಿಯನ್ನು ಬರೆಯಲಾಗಿದೆ. ಆದರೂ ಇಲ್ಲಿಯವರೆಗೆ ಸ್ವಂತ ಕಟ್ಟಡದ ಭಾಗ್ಯ ಸಿಕ್ಕಿಲ್ಲ. 
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ತಾಲ್ಲೂಕು ಆಡಳಿತ ಮಾಡುವವರಿಗೆ ಸ್ಪಷ್ಟ ಪರಿಕಲ್ಪನೆ ಇಲ್ಲ. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಸರ್ಕಾರಿ ಕಟ್ಟಡಗಳಿಗೆ ಕೂಡಲೇ ಸ್ವಂತ ಕಟ್ಟಡ ನಿರ್ಮಿಸಿ ಸಾರ್ವಜನಿಕರು ವಿವಿಧ ಕಡೆ ಅಲೆದಾಡುವುದನ್ನು ತಪ್ಪಿಸಬೇಕಿದೆ. 
– ರಾಮಣ್ಣ ಕೆಂಚಳ್ಳೇರ ಜಿಲ್ಲಾ ಘಟಕದ ಅಧ್ಯಕ್ಷ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ
ಎಲ್ಲಿ ಸರ್ಕಾರಿ ಜಾಗಗಳು ಲಭ್ಯವಿದೆ ಎಂಬುದನ್ನು ನೋಡಿಕೊಂಡು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಕಟ್ಟಡವನ್ನು ನಿರ್ಮಿಸಬೇಕಾಗಿತ್ತು. ಆದರೆ ಜನಪ್ರತಿನಿಧಿಗಳ ನಿರ್ಲಕ್ಷ್ಯ ಅಥವಾ ಅಧಿಕಾರಿಗಳ ಹೊಣೆಗೇಡಿತನದಿಂದ ಬಾಡಿಗೆ ಕಟ್ಟಡಗಳನ್ನು ಆಶ್ರಯಿಸಬೇಕಾದ ದುಃಸ್ಥಿತಿ ಎದುರಾಗಿದೆ. ಬಾಡಿಗೆ ಕಟ್ಟಡಗಳಲ್ಲಿ ಮೂಲಸೌಕರ್ಯ ಸಮಸ್ಯೆಯಿದ್ದು ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. 
– ಗಿರೀಶ ಬಾರ್ಕಿ ಜಿಲ್ಲಾ ಘಟಕದ ಅಧ್ಯಕ್ಷ ಕರವೇ (ನಾರಾಯಣಗೌಡ ಬಣ)
ಪಂಚಾಯಿತಿಗಳಿಗೆ ಪತ್ರ ಹಿರೇಕೆರೂರು ಪಟ್ಟಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ 10 ಗುಂಟೆ ನಿವೇಶನ ಹಾಗೂ ಡಿ. ದೇವರಾಜ ಅರಸು ಭವನ ನಿರ್ಮಾಣಕ್ಕೆ 10 ಗುಂಟೆ ಜಾಗ ಅಗತ್ಯವಿದೆ. ಎರಡು ನಿವೇಶನಗಳನ್ನು ಮಂಜೂರು ಮಾಡಬೇಕೆಂದು ಪಟ್ಟಣ ಪಂಚಾಯಿತಿಗೆ ಹಾಗೂ ಪಟ್ಟಣಕ್ಕೆ ಸಮೀಪದ ಗ್ರಾಮ ಪಂಚಾಯಿತಿಗಳಿಗೆ ಪತ್ರ ಬರೆಯಲಾಗಿದೆ.
- ಬಿ.ಎಂ. ಪಾಟೀಲ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.