ADVERTISEMENT

ಸವಣೂರು ಕಾರ್ಮಿಕ ನಿರೀಕ್ಷಕರಿಗೆ ನೋಟಿಸ್‌: ಪ್ರಜಾವಾಣಿ ವಿಶೇಷ ವರದಿಗೆ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 12 ಮೇ 2022, 12:20 IST
Last Updated 12 ಮೇ 2022, 12:20 IST
‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ‘ನಮ್ಮ ಜನ ನಮ್ಮ ಧ್ವನಿ’ ಸ್ಟೋರಿ
‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ‘ನಮ್ಮ ಜನ ನಮ್ಮ ಧ್ವನಿ’ ಸ್ಟೋರಿ   

ಹಾವೇರಿ: ಹಣ ನೀಡಿದ ಕಾರ್ಮಿಕರಿಗೆ ಮಾತ್ರ ಸೌಲಭ್ಯ ನೀಡುತ್ತಿರುವ ಆರೋಪದ ಮೇಲೆ ಸವಣೂರಿನ ಕಾರ್ಮಿಕ ನಿರೀಕ್ಷಕರಿಗೆ (ಪ್ರಭಾರ) ಕಾರಣ ಕೇಳಿ ಜಿಲ್ಲಾ ಕಾರ್ಮಿಕ ಅಧಿಕಾರಿ ನೋಟಿಸ್‌ ನೀಡಿದ್ದಾರೆ.

‘ಪ್ರಜಾವಾಣಿ’ಯಲ್ಲಿ ಮೇ 9ರಂದು ‘ನಮ್ಮ ಜನ ನಮ್ಮ ಧ್ವನಿ’ ಅಂಕಣದಲ್ಲಿ ‘ಲಂಚಕೊಟ್ಟರೆ ಮಾತ್ರ ಸೌಲಭ್ಯ’ ಶೀರ್ಷಿಕೆಯಡಿ ಸವಣೂರಿನ ಕಾರ್ಮಿಕ ನಿರೀಕ್ಷಕರ ಕಚೇರಿಯ ಆಡಳಿತ ವೈಖರಿ ಬಗ್ಗೆ ಬೆಳಕು ಚೆಲ್ಲಲಾಗಿತ್ತು. ಕಂಪ್ಯೂಟರ್‌ ಆಪರೇಟರ್‌ಗಳ ನಿಷ್ಕಾಳಜಿಯಿಂದ ಕಾರ್ಮಿಕರಿಗೆ ತಲುಪಬೇಕಾದ ಕೋವಿಡ್‌ ಸುರಕ್ಷಾ ಕಿಟ್‌ಗಳು ಗೋದಾಮಿನಲ್ಲಿಯೇ ರಾಶಿ ಬಿದ್ದು ಹಾಳಾಗುತ್ತಿರುವ ಬಗ್ಗೆ ವರದಿ ಮಾಡಲಾಗಿತ್ತು.

ವರದಿಗೆ ಸ್ಪಂದಿಸಿದ ಜಿಲ್ಲಾ ಕಾರ್ಮಿಕ ಅಧಿಕಾರಿ ಸೂರ್ಯಪ್ಪ ಡೊಂಬರಮತ್ತೂರು ಅವರು ಕಾರಣ ಕೇಳಿ ನೋಟಿಸ್‌ ನೀಡಿದ್ದಾರೆ. ಜತೆಗೆ ವರದಿ ಪ್ರಕಟವಾದ ನಂತರ ತಾಲ್ಲೂಕಿನ ಕಾರ್ಮಿಕ ನಿರೀಕ್ಷಕರ ಸಭೆ ನಡೆಸಿ, ಅರ್ಹ ಕಾರ್ಮಿಕರಿಗೆ ಸವಲತ್ತು ನೀಡಬೇಕು ಮತ್ತು ಭ್ರಷ್ಟಾಚಾರ ತಡೆಗಟ್ಟಬೇಕು. ಯಾವುದೇ ದೂರುಗಳು ಬರದಂತೆ ಕೆಲಸ ಮಾಡುವಂತೆ ತಾಕೀತು ಮಾಡಿದ್ದಾರೆ.

ADVERTISEMENT

ವರದಿ ಪ್ರಕಟವಾದ ದಿನದಂದೇಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹಿರಿಯ ನ್ಯಾಯಾಧೀಶ ಪುಟ್ಟರಾಜು ಅವರು ವೈದ್ಯಕೀಯ ಕಾಲೇಜು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಕಟ್ಟಡ ಕಾರ್ಮಿಕರ ಕುಂದುಕೊರತೆಗಳ ಕುರಿತು ವಿಚಾರಣೆ ನಡೆಸಿದ್ದರು. ಜತೆಗೆ ಎಲ್ಲ ಕಾರ್ಮಿಕರಿಗೂ ಗುರುತಿನ ಚೀಟಿ ವಿತರಿಸುವಂತೆ ಕಾರ್ಮಿಕ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.