
ಹಾವೇರಿ: ‘ಹಣ ಗಳಿಸಿದಾಗ, ಪ್ರಶಸ್ತಿ ಪಡೆದಾಗ, ಏನನ್ನೋ ದಕ್ಕಿಸಿಕೊಂಡಾಗ ನಮಗೆ ಅತೀವ ಸಂತೋಷವಾಗುತ್ತದೆ. ಆದರೆ, ಮತ್ತೊಬ್ಬರ ಕಷ್ಟಗಳನ್ನು ನಿವಾರಿಸಿದರೆ ಮಾತ್ರ ಬದುಕು ಸಾರ್ಥಕ. ಇದನ್ನೇ ಸ್ವಾಮಿ ವಿವೇಕಾನಂದರು ಹೇಳಿದ್ದಾರೆ’ ಎಂದು ಶೇಗುಣಸಿ ವಿರಕ್ತಮಠದ ಮಹಾಂತಪ್ರಭು ಸ್ವಾಮೀಜಿ ತಿಳಿಸಿದರು.
ನಗರದ ಹುಕ್ಕೇರಿಮಠದ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ‘ಅಧ್ಯಾತ್ಮ ಪ್ರವಚನ’ ಕಾರ್ಯಕ್ರಮದಲ್ಲಿ ಭಾನುವಾರ ಅವರು ಪ್ರವಚನ ನೀಡಿದರು.
‘ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರನ್ನು, ಜೀವನದ ಸಾರ್ಥಕ ಕ್ಷಣ ಯಾವುದು? ಎಂದು ಪ್ರಶ್ನಿಸಲಾಗಿತ್ತು. ರಾಷ್ಟಪತಿ ಹುದ್ದೆಗಿಂತ ಅಂಕವಿಕಲ ಮಕ್ಕಳಿಗೆ ಕಡಿಮೆ ತೂಕದ ಕ್ಯಾಲಿಪರ್ಸ ತೊಡಿಸಿ, ಅವರು ನಗುತ್ತ ಓಡುವುದನ್ನು ನೋಡಿದರೆ ಅದುವೇ ಬದುಕಿನ ಸಾರ್ಥಕ ಕ್ಷಣವೆಂದು ಅವರು ಹೇಳಿದ್ದರು’ ಎಂದರು.
‘ಮಾನವನ ಶರೀರವು ಪರಮಾತ್ಮನ ಪ್ರಸಾದ ಕಾಯವಿದ್ದಂತೆ. ಕೇವಲ ಸ್ವಾರ್ಥಕ್ಕೆ ಬದುಕುವುದು ಜೀವನದ ಉದ್ದೇಶವಲ್ಲ. ಪರಹಿತ ಜೀವನ ನಡೆಸಿ, ಮತ್ತೊಬ್ಬರ ಕಣ್ಣೀರು ಒರೆಸುವುದು, ಸಾಮಾಜಿಕ ಮತ್ತು ನೈತಿಕ ಮೌಲ್ಯಗಳನ್ನು ಪಾಲಿಸುವುದು ನಿಜ ಜೀವನದ ಉದ್ದೇಶವಾಗಿದೆ’ ಎಂದು ಹೇಳಿದರು.
‘ಅರವಿಂದ ಮಹರ್ಷಿಗಳು ತಪಸ್ಸು ಮಾಡದೇ ಇನ್ನೊಬ್ಬರ ಕಷ್ಟಕ್ಕೆ ಹೆಗಲು ನೀಡಿ ಪರಮಾತ್ಮನನ್ನು ಸಾಕ್ಷಾತ್ಕಾರಗೊಳಿಸಿದರು. ಹಾನಗಲ್ ಕುಮಾರ ಸ್ವಾಮೀಜಿ ಎಡಗೈಯಲ್ಲಿ ಲಿಂಗ ಹಿಡಿದು ಬಲಗೈಯಲ್ಲಿ ಜೋಳಿಗೆ ಹಿಡಿದು ಆತ್ಮಕಲ್ಯಾಣದ ಜೊತೆಗೆ ಲೋಕಕಲ್ಯಾಣ ಸಾಧಿಸಿದರು. ಸಹಾಯ, ಸಹಕಾರ, ಸಹಾನುಭೂತಿ, ಇವು ನಮ್ಮ ಬದುಕಿನ ಧ್ಯೇಯವಾಗಬೇಕು. ಹುಟ್ಟಿದ ಪ್ರತಿ ಜೀವಿಯ ಸಾವು ನಿಶ್ಚಿತ. ಇವೆರೆಡರ ನಡುವಿನ ಕೊಂಡಿಯೇ ಬದುಕು. ಆಸೆ, ಆಕಾಂಕ್ಷೆಗಳ ಜೊತೆಗೆ ರೋಷ–ದ್ವೇಷ ಎಲ್ಲವನ್ನೂ ಎದುರಿಸಿ ಅನುಭವದೊಳಗೆ ಅರಿವಿನ ಪಥದೊಳು ಸಾರ್ಥಕಗೊಳಿಸುವುದೇ ಬದುಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.