
ರಾಣೆಬೆನ್ನೂರು: ‘ಬೀದಿನಾಯಿಗಳನ್ನು ಹಿಡಿದು ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿದ್ದೇವೆ’ ಎಂದು ನಗರಸಭೆ ಅಧಿಕಾರಿಗಳು ಹೇಳಿಕೊಳ್ಳುತ್ತಿದ್ದ ಸಂದರ್ಭದಲ್ಲಿಯೇ ರಾಣೆಬೆನ್ನೂರಿನಲ್ಲಿ ಬೀದಿ ನಾಯಿಗಳು ಅಟ್ಟಹಾಸ ಮೆರೆಯುತ್ತಿವೆ.
ಶುಕ್ರವಾರ ನಡೆದ ಘಟನೆಯಲ್ಲಿಯೇ ಹುಚ್ಚು ನಾಯಿ ಹಾಗೂ ಇತರೆ ನಾಯಿಗಳು ಕಚ್ಚಿದ್ದರಿಂದ, ಮಕ್ಕಳು ಸೇರಿ 23 ಮಂದಿ ಗಾಯಗೊಂಡಿದ್ದಾರೆ. ನಾಯಿಗಳ ದಾಳಿಯಿಂದಾಗಿ, ನಗರದ ಜನರು ಬೆಚ್ಚಿ ಬಿದ್ದಿದ್ದಾರೆ. ರಸ್ತೆಯಲ್ಲಿ ಓಡಾಡಲು ಭಯಪಡುತ್ತಿದ್ದಾರೆ. ಬೀದಿ ನಾಯಿಗಳ ಹಾವಳಿ ತಡೆಗೆ ಕಠಿಣ ಕ್ರಮ ಕೈಗೊಳ್ಳದ ನಗರಸಭೆ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
‘ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿ, ಪುನಃ ರಸ್ತೆಗೆ ಬಿಟ್ಟಿದ್ದ ಬೀದಿನಾಯಿಗಳೇ ಈಗ ಜನರಿಗೆ ಕಚ್ಚುತ್ತಿವೆ’ ಎಂಬ ಮಾತು ಕೇಳಿಬರುತ್ತಿದೆ. ಇದರ ಜೊತೆಯಲ್ಲಿ ಕೆಲ ನಾಯಿಗಳಿಗೆ ರೇಬಿಸ್ ಸೋಂಕು ತಗುಲಿರುವುದಾಗಿ ಹೇಳಲಾಗುತ್ತಿದೆ. ಇಂಥ ಹುಚ್ಚು ಹಿಡಿದ ನಾಯಿಗಳು, ಜನರ ಮೇಲೆ ದಾಳಿ ಮಾಡುತ್ತಿದ್ದು ನಗರದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ನಾಯಿ ಕಡಿದಿದ್ದರಿಂದ ಮಕ್ಕಳು, ಮಹಿಳೆಯರು, ವೃದ್ದರು ಗಾಯಗೊಂಡಿದ್ದಾರೆ.
‘ಶುಕ್ರವಾರ 23 ಮಂದಿಗೆ ನಾಯಿಗಳು ಕಚ್ಚಿವೆ. ಇದರಲ್ಲಿ 15 ಮಂದಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಉಳಿದವರ ಚಿಕಿತ್ಸೆ ಪಡೆದುಕೊಂಡು ಮನೆಗೆ ಹೋಗಿದ್ದಾರೆ’ ಎಂದು ಮೂಲಗಳು ಹೇಳಿವೆ.
ಬೀದಿ ನಾಯಿ ಉಪಟಳವನ್ನು ತಡೆಯಬೇಕೆಂದು ಸಾರ್ವಜನಿಕರು ಅನೇಕ ಬಾರಿ ಮನವಿ ಮಾಡಿದರೂ ನಗರಸಭೆ ಅಧಿಕಾರಿಗಳು ಕ್ರಮ ಜರುಗಿಸದಿರುವುದೇ ಘಟನೆಗೆ ಕಾರಣವೆಂದು ಹೇಳಲಾಗುತ್ತಿದೆ. ನಾಯಿಗಳ ದಾಳಿಗೆ ನಗರಸಭೆಯ ನಿರ್ಲಕ್ಷ ಕಾರಣವೆಂಬ ಆರೋಪವಿದೆ.
ಒಂದೇ ಹುಚ್ಚುನಾಯಿ 20ಕ್ಕೂ ಹೆಚ್ಚು ಬೀದಿನಾಯಿಗಳಿಗೂ ಕಚ್ಚಿರುವ ಮಾಹಿತಿಯಿದೆ. ಇದೇ ನಾಯಿಗಳು, ನಗರದಲ್ಲಿ ಸಂಚರಿಸುತ್ತಿವೆ. ಸಿಕ್ಕ ಸಿಕ್ಕ ಕಡೆಗಳಲ್ಲಿಯೂ ನಾಯಿಗಳಿಗೆ ಹಾಗೂ ಮನುಷ್ಯರ ಮೇಲೆ ದಾಳಿ ಮಾಡುತ್ತಿರುವ ಘಟನೆಗಳು ವರದಿಯಾಗುತ್ತಿವೆ ಎಂಬುದಾಗಿಯೂ ಸ್ಥಳೀಯರು ತಿಳಿಸಿದರು.
ಜನರು ಹೈರಾಣು: ‘ಬೀದಿ ನಾಯಿಗಳ ಕಾಟಕ್ಕೆ ನಗರದ ಜನರು ಹೈರಾಣಾಗಿದ್ದಾರೆ. ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ. ಜನರ ದೈನಂದಿನ ಬದುಕಿಗೆ ಅಡ್ಡಿ ಉಂಟು ಮಾಡುತ್ತಿವೆ. ಬೀದಿ ನಾಯಿಗಳ ಹಾವಳಿಯಿಂದ ಜನರ ಸುರಕ್ಷತೆಗೆ ಹಾನಿ ಆಗುತ್ತಿದೆ. ಅದರಲ್ಲೂ ಬೆಳಿಗ್ಗೆ ಹಾಗೂ ಸಂಜೆ ಶಾಲಾ ಮಕ್ಕಳಿಗೆ ನಾಯಿಗಳು ಬೆನ್ನು ಬೀಳುವ ಘಟನೆಗಳು ಆತಂಕಕ್ಕೆ ಕಾರಣವಾಗಿತ್ತು. ರಾತ್ರಿ ವೇಳೆ ನಾಯಿಗಳ ಹಿಂಡಾಗಿ ಅಡ್ಡಾಡುವದರಿಂದ ಸಂಚಾರಕ್ಕೆ ಅಡ್ಡಿ, ತೀವ್ರ ಬೊಗಳುವಿಕೆಯಿಂದ ಜನರಿಗೆ ತೊಂದರೆಯಾಗುತ್ತಿದೆ’ ಎಂದು ಜನರು ದೂರಿದರು.
‘ಬೈಕ್ ಅಥವಾ ವಾಹನಗಳ ಹಿಂದೆ-ಮುಂದೆ ನಾಯಿಗಳು ಓಡುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ನಾಯಿ ಕಡಿತದಿಂದ ಹರಡುವ ರೇಬಿಸ್ ರೋಗವು ಮನುಷ್ಯರ ಜೀವಕ್ಕೆ ಅಪಾಯಕಾರಿಯಾಗಿದೆ. ಈ ಬಗ್ಗೆ ನಗರಸಭೆಗೆ ಆಡಳಿತ ಮಂಡಳಿ ಇದ್ದಾಗ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಅನೇಕ ಬಾರಿ ಮನವಿ ಮಾಡಿದರೂ ಈ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ’ ಎಂದು ಆರೋಪಿಸಿದರು.
32 ನಾಯಿ ಸೆರೆ: ಘಟನೆಯಿಂದ ಎಚ್ಚೆತ್ತ ನಗರಸಭೆಯವರು ನಗರದಲ್ಲಿ ಶನಿವಾರ 32 ಬೀದಿನಾಯಿಗಳನ್ನು ಹಿಡಿದು, ಸಂತಾನಹರಣ ಶಸ್ತ್ರಚಿಕಿತ್ಸೆ ಕೇಂದ್ರಕ್ಕೆ ಬಿಟ್ಟಿದ್ದಾರೆ.
‘ಕಟ್ಟುನಿಟ್ಟಿನ ಕ್ರಮ’
‘ಬೀದಿ ನಾಯಿಗಳ ಹಾವಳಿ ಮಟ್ಟ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ನಾಯಿಗಳಿಗೆ ಆಹಾರ ಹಾಕುವುದರಿಂದ ಅವುಗಳು ಗುಂಪು ಸೇರುತ್ತಿವೆ. ಇದರಿಂದ ಜನರಿಗೆ ತೊಂದರೆಯಾಗುತ್ತಿರುವ ದೂರುಗಳಿವೆ’ ಎಂದು ಪೌರಾಯುಕ್ತ ಎಫ್.ವೈ. ಇಂಗಳಗಿ ತಿಳಿಸಿದರು. ‘ಬೀದಿನಾಯಿಗಳನ್ನು ಹಿಡಿದು ವೈಜ್ಞಾನಿಕವಾಗಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿ ನಾಲ್ಕು ದಿನ ಆರೈಕೆ ಮಾಡಿ ನಾಯಿಗಳು ಎಲ್ಲಿ ಇದ್ದವೋ ಅಲ್ಲಿಯೇ ಬಿಟ್ಟು ಬರಲಾಗಿತ್ತು. ಈಗ ಅವೇ ನಾಯಿಗಳು ಜನರ ಮೇಲೆ ದಾಳಿ ಮಾಡುತ್ತಿರುವ ಮಾಹಿತಿಯಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.