ADVERTISEMENT

ವ್ಯವಹಾರಕ್ಕೆ ಇಂಗ್ಲಿಷ್‌ ಭಾಷೆ ಇರಲಿ; ಹೃದಯಕ್ಕೆ ಕನ್ನಡ ಭಾಷೆ ಇರಲಿ: ಸುಧಾ ಮೂರ್ತಿ

ವ್ಯಕ್ತಿತ್ವ ವಿಕಸನ ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2022, 15:47 IST
Last Updated 8 ಅಕ್ಟೋಬರ್ 2022, 15:47 IST
ರಾಣೆಬೆನ್ನೂರಿನ ಶಿದ್ದೇಶ್ವರ ದೇವಸ್ಥಾನದ ಸಭಾಭವನದಲ್ಲಿ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯಿಂದ ಏರ್ಪಡಿಸಿದ್ದ ವ್ಯಕ್ತಿತ್ವ ವಿಕಸನ ವಿದ್ಯಾರ್ಥಿಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಇನ್ಫೊಸಿಸ್‌ ಫೌಂಡೇಷನ್‌ ಅಧ್ಯಕ್ಷೆ ಸುಧಾ ಮೂರ್ತಿ ವಿದ್ಯಾರ್ಥಿಗಳೊಂದಿಗೆ ಸಂವಾದ  ನಡೆಸಿದರು
ರಾಣೆಬೆನ್ನೂರಿನ ಶಿದ್ದೇಶ್ವರ ದೇವಸ್ಥಾನದ ಸಭಾಭವನದಲ್ಲಿ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯಿಂದ ಏರ್ಪಡಿಸಿದ್ದ ವ್ಯಕ್ತಿತ್ವ ವಿಕಸನ ವಿದ್ಯಾರ್ಥಿಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಇನ್ಫೊಸಿಸ್‌ ಫೌಂಡೇಷನ್‌ ಅಧ್ಯಕ್ಷೆ ಸುಧಾ ಮೂರ್ತಿ ವಿದ್ಯಾರ್ಥಿಗಳೊಂದಿಗೆ ಸಂವಾದ  ನಡೆಸಿದರು   

ರಾಣೆಬೆನ್ನೂರು: ‘ಕಠಿಣ ಶ್ರಮ, ಆತ್ಮವಿಶ್ವಾಸ, ಮಾಡುವ ಕೆಲಸದಲ್ಲಿ ಶ್ರದ್ಧೆ ಹಾಗೂ ಉತ್ತಮವಾಗಿ ಮಾತನಾಡುವ ಕಲೆ, ಮನಸ್ಸಿನ ಮೇಲೆ ಹಿಡಿತ, ಸಮಯ ಪ್ರಜ್ಞೆಯನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಈ ಗುಣಗಳನ್ನು ಅಳವಡಿಸಿಕೊಂಡಾದ ಯಶಸ್ಸು ಹೊಂದಬಹುದು’ ಎಂದು ಇನ್ಪೊಸಿಸ್‌ ಫೌಂಡೇಷನ್‌ ಅಧ್ಯಕ್ಷೆ ಸುಧಾ ಮೂರ್ತಿ ಹೇಳಿದರು.

ಇಲ್ಲಿನ ಶಿದ್ಧೇಶ್ವರ ಸಮುದಾಯ ಭವನದಲ್ಲಿ ವಂದೇ ಮಾತರಂ ಸ್ವಯಂ ಸೇವಾ ಸಮಿತಿಯಿಂದ ಶನಿವಾರ ಏರ್ಪಡಿಸಿದ್ದ ವ್ಯಕ್ತಿತ್ವ ವಿಕಸನ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕನ್ನಡ ಭಾಷೆಯನ್ನು ಪ್ರೀತಿಸಬೇಕು. ನಾನು ಕನ್ನಡ ಶಾಲೆಯಲ್ಲಿ ಓದಿದಳು. ಈ ಬಗ್ಗೆ ಕೀಳರಿಮೆ ಬೇಡ. ಇಂಗ್ಲಿಷ್‌ ಕಲಿಯಬೇಕು ತಪ್ಪಲ್ಲ. ವ್ಯವಹಾರ ಭಾಷೆಯಾಗಿಟ್ಟುಕೊಳ್ಳಬೇಕು. ವ್ಯವಹಾರಕ್ಕೆ ಇಂಗ್ಲಿಷ್‌ ಭಾಷೆ ಇರಲಿ; ಹೃದಯಕ್ಕೆ ಕನ್ನಡ ಭಾಷೆ ಇರಲಿ’ ಎಂದರು.

ADVERTISEMENT

‘ಶಿಕ್ಷಕರು ಮಕ್ಕಳಿಗೆ ಪಾಠವನ್ನು ಹೇಳಿಕೊಡುವಾಗ ಕಥಾ ರೂಪದಲ್ಲಿ ಹೇಳಿದಾಗ ಮಕ್ಕಳ ಮನಸ್ಸನ್ನು ಹಿಡಿದಿಟ್ಟುಕೊಳ್ಳಬಹುದು’ ಎಂದು ಹೇಳಿದರು.

‘ತನ್ನನ್ನು ಅಧೋಗತಿಗೆ ತಳ್ಳುವ ಹವ್ಯಾಸ, ಸಹವಾಸ ಮತ್ತು ಆಲೋಚನೆಗಳಿಂದ ಹೊರಬಂದು ಸಕಾರಾತ್ಮಕವಾಗಿ ಆಲೋಚನೆ ಮಾಡುತ್ತಾ ಆರೋಗ್ಯಕರ ಬೆಳವಣಿಗೆಯನ್ನು ಕಾಣುವಂತಾಗಬೇಕು. ವಿದ್ಯಾರ್ಥಿಗಳು ಪ್ರತಿ ನಿಮಿಷ ಕೂಡ ಕಲಿಯುವಿಕೆಯಲ್ಲಿ ತೊಡಗಿಕೊಳ್ಳಬೇಕು. ಎಲ್ಲ ಬಗೆಯ ನಂಬಿಕೆಗಳು ಮನಸ್ಸನ್ನಾಧರಿಸಿರುತ್ತವೆ. ಮನಸ್ಸು ವ್ಯಕ್ತಿತ್ವದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತದೆ. ಇಚ್ಛಾಶಕ್ತಿ ಕ್ರಿಯಾ ಶಕ್ತಿಗಳು ಸಕಾರಾತ್ಮಕವಾಗಿದ್ದಲ್ಲಿ ಮನಸ್ಸು ಸದಾ ಉತ್ಸಾಹಭರಿತವಾಗಿರುತ್ತದೆ’ ಎಂದರು.

ಸಂವಾದ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ ಅವರು ಮಕ್ಕಳನ್ನು ಹೇಗೆ ಬೆಳೆಸಬೇಕು ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಸುಧಾಮೂರ್ತಿ, ‘ಮಕ್ಕಳಿಗೆ ಬೇಡಿದ್ದನ್ನು ತಕ್ಷಣ ಕೊಡಿಸಬಾರದು. ಒಂದು ವರ್ಷಕ್ಕೆ ಅವಶ್ಯಕತೆ ಇದ್ದಷ್ಟು ಮಾತ್ರ ಬಟ್ಟೆ, ಬರೆ ಕೊಡಿಸಬೇಕು. ಹಣ ಇದೆ ಎಂದು ಕೇಳಿದ್ದನ್ನು ಕೊಡಿಸಿದರೆ ಅವರ ಮೇಲೆ ನಿಮ್ಮ ಹಿಡಿತ ತಪ್ಪುತ್ತದೆ’ ಎಂದರು. ನಂತರ ಕಾಲೇಜು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಸದಸ್ಯ ಪ್ರಕಾಶ ಬುರಡೀಕಟ್ಟಿ ಮಾತನಾಡಿ, ಸುಧಾ ಮೂರ್ತಿ ಸಜ್ಜನಿಕೆಯ ಸಾಕಾರಮೂರ್ತಿ ಮತ್ತು ಮಾತೃ ಹೃದಯಿ’ ಎಂದರು.

ಡಾ.ಸುನಂದಾ ಕುಲಕರ್ಣಿ, ಪ್ರೊ. ಪ್ರಮೋದ ನಲವಾಗಲ, ಪ್ರಾಚಾರ್ಯ ಪ್ರಭುಲಿಂಗ ಕೋಡದ, ಹನುಮಂತಪ್ಪ ಹೆದ್ದೇರಿ, ರಾಘವೇಂದ್ರ ಚಿನ್ನಿಕಟ್ಟಿ, ಸುಧಾ ಹಿರೇಮರದ, ಕವಿತಾ ಹೆದ್ದೇರಿ, ಪ್ರೇಮಕುಮಾರ, ರಾಜು ಅಡ್ಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.