ADVERTISEMENT

ಥಲಸ್ಸೇಮಿಯಾ ಪೀಡಿತರಿಗೆ ಆರಕ್ಷಕರ ರಕ್ಷೆ: ಮಾದರಿಯಾದ ಆಡೂರು ಠಾಣೆ

6 ವರ್ಷದಿಂದ ಪೊಲೀಸ್‌ ಸಿಬ್ಬಂದಿ ರಕ್ತದಾನ

ಸಂತೋಷ ಜಿಗಳಿಕೊಪ್ಪ
Published 2 ಸೆಪ್ಟೆಂಬರ್ 2025, 23:30 IST
Last Updated 2 ಸೆಪ್ಟೆಂಬರ್ 2025, 23:30 IST
<div class="paragraphs"><p>ಹಾವೇರಿ ಜಿಲ್ಲೆಯ ಆಡೂರು ಠಾಣೆಯಲ್ಲಿ ಆಗಸ್ಟ್ 24ರಂದು ನಡೆದ 6ನೇ ವರ್ಷದ ಶಿಬಿರದಲ್ಲಿ ಪೊಲೀಸರು ರಕ್ತದಾನ ಮಾಡಿದರು</p></div>

ಹಾವೇರಿ ಜಿಲ್ಲೆಯ ಆಡೂರು ಠಾಣೆಯಲ್ಲಿ ಆಗಸ್ಟ್ 24ರಂದು ನಡೆದ 6ನೇ ವರ್ಷದ ಶಿಬಿರದಲ್ಲಿ ಪೊಲೀಸರು ರಕ್ತದಾನ ಮಾಡಿದರು

   

ಹಾವೇರಿ: ಜಿಲ್ಲೆಯ ಹಾನ‌ಗಲ್ ತಾಲ್ಲೂಕಿನ ಆಡೂರು ಠಾಣೆ ಪೊಲೀಸ್ ಸಿಬ್ಬಂದಿಯು ಥಲಸ್ಸೇಮಿಯಾ (ಆನುವಂಶಿಕ ರಕ್ತದ ಕಾಯಿಲೆ) ಪೀಡಿತ ಮಕ್ಕಳಿಗೆ ನೆರವು ಮತ್ತು ಅಪಘಾತದಲ್ಲಿ ಗಾಯಗೊಂಡವರ ಜೀವರಕ್ಷಣೆಗಾಗಿ ಆರು ವರ್ಷಗಳಿಂದ ರಕ್ತದಾನ ಮಾಡುತ್ತಿದ್ದಾರೆ.

2019ರಿಂದ 2025ರ ನಡುವೆ ಆರು ಶಿಬಿರಗಳನ್ನು ಆಯೋಜಿಸಿರುವ ಆಡೂರು ಠಾಣೆಯ ಪೊಲೀಸರು, 193 ಯೂನಿಟ್ (ಪ್ರತಿ ಯೂನಿಟ್ 450 ಎಂ.ಎಲ್.) ರಕ್ತದಾನ ಮಾಡಿದ್ದಾರೆ.

ADVERTISEMENT

ಜಿಲ್ಲೆಯಲ್ಲಿ ಥಲಸ್ಸೇಮಿಯಾ ಪೀಡಿತ 183 ಮಕ್ಕಳಿದ್ದು ಇವರಲ್ಲಿ ಪೊಲೀಸ್‌ ಸಿಬ್ಬಂದಿಯ 12 ಮಕ್ಕಳೂ ಇದ್ದಾರೆ. ಅವರ ಚಿಕಿತ್ಸೆಗಾಗಿ ಪೊಲೀಸರಿಂದ ಸಂಗ್ರಹಿಸಿದ ರಕ್ತ ಬಳಕೆ ಆಗುತ್ತದೆ.

ಜಿಲ್ಲೆಯಲ್ಲಿ ತಿಂಗಳಿಗೆ 420 ಯೂನಿಟ್ ರಕ್ತಕ್ಕೆ ಬೇಡಿಕೆ ಇದೆ. ಮಾಸಿಕ 70 ರೋಗಿಗಳಿಗೆ 150 ಯೂನಿಟ್ ರಕ್ತ ಬೇಕು. ಜಿಲ್ಲೆಯ 113 ರೋಗಿಗಳು ಶಿವಮೊಗ್ಗ, ದಾವಣಗೆರೆ, ಹುಬ್ಬಳ್ಳಿ, ದಕ್ಷಿಣ ಕನ್ನಡ ಜಿಲ್ಲೆಗಳಿಂದ ರಕ್ತ ಪಡೆಯುತ್ತಾರೆ.

‘ರಾಜ್ಯದ ಇತರೆ ಠಾಣೆಗಳಿಗೆ ಹೋಲಿಸಿದರೆ 6 ಬಾರಿ ರಕ್ತದಾನ ಶಿಬಿರ ಏರ್ಪಡಿಸಿ, 193 ಯೂನಿಟ್ ರಕ್ತ ಕೊಟ್ಟ ಮೊದಲ ಠಾಣೆ ಎಂಬ ಸಾಧನೆಗೆ ಆಡೂರು ಠಾಣೆ ಪಾತ್ರವಾಗಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ಪೊಲೀಸ್ ಠಾಣೆಯು ನಾಲ್ಕು ಬಾರಿ ರಕ್ತದಾನ ಶಿಬಿರ ಏರ್ಪಡಿಸಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ಥಲೆಸ್ಸೇಮಿಯಾ ಪೀಡಿತ ಮಕ್ಕಳಿಗೆ 30ರಿಂದ 45 ದಿನಕ್ಕೊಮ್ಮೆ ರಕ್ತ ಬದಲಿಸಬೇಕು. ಅದಕ್ಕಾಗಿ 2019ರಿಂದ ಶಿಬಿರ ನಡೆಸಲಾಗುತ್ತಿದೆ’ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಲ್.ವೈ. ಶಿರಕೋಳ ‘ಪ್ರಜಾವಾಣಿ’ಗೆ ತಿಳಿಸಿದರು.

ಅಲ್ಲದೇ ‘ಶಿಬಿರದ ವೇಳೆ ಥಲಸ್ಸೇಮಿಯಾ ಪೀಡಿತ ಮಕ್ಕಳು ಹಾಗೂ ಅವರ ಪೋಷಕರನ್ನೂ ಕರೆಸಿ, ಆತ್ಮಸ್ಥೈರ್ಯ ತುಂಬಲಾಗುತ್ತದೆ’ ಎಂದರು.

ಸ್ನೇಹಮೈತ್ರಿ ಬ್ಲಡ್ ಆರ್ಮಿ, ಜಿಲ್ಲಾ ರಕ್ತಕೇಂದ್ರ ಶಿಬಿರಕ್ಕೆ ಕೈ ಜೋಡಿಸಿದೆ ಎಂದು ತಿಳಿಸಿದರು.

‘ರಕ್ತಸಂಬಂಧದಲ್ಲಿ ಮದುವೆಯಿಂದಾಗಿ ಅಥವಾ ಆನುವಂಶಿಕವಾಗಿ ಥಲಸ್ಸೇಮಿಯಾ ಬರುತ್ತದೆ. ಕಾಯಿಲೆ ಪೀಡಿತ ಮಕ್ಕಳು, ಏಳು ವರ್ಷದಿಂದ 20 ವರ್ಷ ಬದುಕುತ್ತಾರೆ. ಬದುಕಿರುವ ಅವಧಿಯಲ್ಲಿ ಅಂತಹ ಮಕ್ಕಳಿಗೆ ರಕ್ತಬೇಕು. ಆ ಅಗತ್ಯವನ್ನು ತುಂಬಿಕೊಳ್ಳುವುದು ಶಿಬಿರ ಆಯೋಜನೆ ಉದ್ದೇಶವಾಗಿದೆ’ ಎಂದರು.

ಪೊಲೀಸ್‌ ಸಿಬ್ಬಂದಿಯ ರಕ್ತದಾನ ಶಿಬಿರ ಇತರರಿಗೆ ಮಾದರಿಯಾಗಿದೆ. ಸಂಗ್ರಹವಾದ ರಕ್ತವನ್ನು ಥಲಸ್ಸೇಮಿಯಾ ಮಕ್ಕಳ ಚಿಕಿತ್ಸೆಗೆ ಬಳಸುತ್ತೇವೆ.
- ಬಸವರಾಜ ತಳವಾರ, ವೈದ್ಯಾಧಿಕಾರಿ, ಹಾವೇರಿ ಜಿಲ್ಲಾ ರಕ್ತ ಕೇಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.