ADVERTISEMENT

ಭಾನುವಾರವೂ ಇರಲಿದೆ ಹಾಪ್‌ಕಾಮ್ಸ್‌

ಗಣೇಶ ಚತುರ್ಥಿ: ಹಣ್ಣು, ಬಾಳೆ ದರ ಏರಿಕೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2019, 19:50 IST
Last Updated 28 ಆಗಸ್ಟ್ 2019, 19:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಹಾಪ್‌ಕಾಮ್ಸ್‌ನ ಎಲ್ಲ ಮಳಿಗೆಗಳು ಭಾನುವಾರವೂ ತೆರೆದಿರಲಿದ್ದು, ಹಣ್ಣು, ತರಕಾರಿಗಳನ್ನು ಖರೀದಿಸಲು ಹಾಪ್‌ಕಾಮ್ಸ್‌ ವ್ಯವಸ್ಥೆ ಕಲ್ಪಿಸಿದೆ.

ಸಾಮಾನ್ಯವಾಗಿ ಪ್ರತಿ ಭಾನುವಾರವೂ ಹಾಪ್‌ಕಾಮ್ಸ್‌ ಮಳಿಗೆಗಳು ಮುಚ್ಚಿರುತ್ತವೆ. ‘ಸೋಮವಾರ ಹಬ್ಬ ಇರುವುದರಿಂದ ಗ್ರಾಹಕರು ಶನಿವಾರ ಅಥವಾ ಭಾನುವಾರ ಹಣ್ಣು, ತರಕಾರಿ ಖರೀದಿಸುತ್ತಾರೆ. ಹಬ್ಬದ ಹಿಂದಿನ ದಿನವಾದ ಭಾನುವಾರವೂ ಹಾಪ್‌ಕಾಮ್ಸ್‌ ಮಳಿಗೆಗಳು ಲಭ್ಯವಿದ್ದರೆ ಗ್ರಾಹಕರಿಗೆ ಅನುಕೂಲ’ ಎಂದುಹಾಪ್‍ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್.ಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.

ದರ ಏರಿಕೆ:ಬೇಸಿಗೆ ಬಿಟ್ಟು ರಂಜಾನ್, ಬಕ್ರೀದ್ ಸಂದರ್ಭದಲ್ಲಿ ಪಪ್ಪಾಯ ಬೆಲೆ ಹೆಚ್ಚಾಗಿರುತ್ತದೆ. ಆದರೆ, ಈ ಬಾರಿ ಪಪ್ಪಾಯ ದರ ಏರಿಕೆ ಕಂಡಿದೆ. ಪ್ರತಿ ಕೆ.ಜಿಗೆ ₹30ರಿಂದ ₹40 ದರದಲ್ಲಿ ಮಾರಾಟವಾಗುತ್ತಿದ್ದ ಪಪ್ಪಾಯ ₹50ರಿಂದ ₹60ಕ್ಕೆ ಏರಿಕೆಯಾಗಿದೆ.

ADVERTISEMENT

‘ವರಮಹಾಲಕ್ಷ್ಮೀ ಹಬ್ಬಕ್ಕೆ ಹೋಲಿಸಿದರೆ, ಈಗ ಹಣ್ಣಿನ ಬೆಲೆ ಕಡಿಮೆ. ಬಾಳೆಹಣ್ಣಿನ ಬೆಲೆ ಏರಿಕೆಯಾಗಿದ್ದು, ಹಾಪ್‌ಕಾಮ್ಸ್‌ನಲ್ಲಿ ಪಚ್ಚ ಬಾಳೆ ಪ್ರತಿ ಕೆ.ಜಿ.ಗೆ ₹30, ಏಲಕ್ಕಿ ಬಾಳೆ ₹91ರಂತೆ ಮಾರಾಟ ಆಗುತ್ತಿದೆ’ ಎಂದರು.

ಲಾಲ್‌ಬಾಗ್‌ನಲ್ಲಿ ‌2 ದಿನ ಮೇಳ..
‘ಲಾಲ್‌ಬಾಗ್‌ನಲ್ಲಿ ಆಗಸ್ಟ್‌ 31 ಹಾಗೂ ಸೆಪ್ಟೆಂಬರ್‌ 1‌ರಂದು ಮೇಳ ಆಯೋಜಿಸಲಾಗಿದೆ. ಇಲ್ಲಿ ಎಲ್ಲ ಬಗೆಯ ಹಣ್ಣು, ತರಕಾರಿಗಳು ಮಾರಾಟಕ್ಕೆ ಇಡಲಾಗುವುದು. ಬೆಳಿಗ್ಗೆ ಹಾಗೂ ಸಂಜೆ‌ಉದ್ಯಾನಕ್ಕೆ ಬರುವ ವಾಯುವಿಹಾರಿಗಳು ಹಬ್ಬಕ್ಕೆ ಬೇಕಾದ ಹಣ್ಣು, ತರಕಾರಿಗಳನ್ನು ಇಲ್ಲಿ ಖರೀದಿಸಬಹುದು’ ಎಂದುಬಿ.ಎನ್.ಪ್ರಸಾದ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.