ADVERTISEMENT

‘ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ’ ಇದು ಪಕ್ಷದ ಆಂತರಿಕ ವಿಚಾರ ಬಸವನಗೌಡ ಬಾದರ್ಲಿ

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲಾರೆ

​ಪ್ರಜಾವಾಣಿ ವಾರ್ತೆ
Published 9 ಮೇ 2019, 12:57 IST
Last Updated 9 ಮೇ 2019, 12:57 IST
   

ಚಿಂಚೋಳಿ:ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ಧರಾಮಯ್ಯನವರು ಮತ್ತೆ ಮುಖ್ಯಮಂತ್ರಿಯಾಗಬೇಕೆಂಬ ಅಭಿಪ್ರಾಯ ಕೆಲವು ಸಚಿವರು ಮತ್ತು ಶಾಸಕರು ವ್ಯಕ್ತಪಡಿಸಿದ್ದಕ್ಕೆ ಪ್ರತಿಕ್ರಿಯೆ ನೀಡಲು ಪ್ರದೇಶ ಯುವ ಕಾಂಗ್ರೆಸ್‌ ಅಧ್ಯಕ್ಷ ಬಸವನಗೌಡ ಬಾದರ್ಲಿ ನಿರಾಕರಿಸಿದ್ದಾರೆ.

ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಕಾಂಗ್ರೆಸ್‌ ಪಕ್ಷದ ಆಂತರಿಕ ವಿಚಾರ ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡದೇ ಪಕ್ಷದ ವೇದಿಕೆಯಲ್ಲಿ ಚರ್ಚಿಸಲಾಗುವುದು ಎಂದರು.

ರಾಜ್ಯ ಸಮ್ಮಿಶ್ರ ಸರ್ಕಾರ ಚನ್ನಾಗಿ ಕೆಲಸ ಮಾಡುತ್ತಿದೆ. 46ಸಾವಿರ ಕೋಟಿ ರೈತ ಸಾಲ ಮನ್ನಾ ಮಾಡಿದೆ. ಅಭಿವೃದ್ಧಿಗೂ ಆದ್ಯತೆ ನೀಡಿ ಜನರ ಅಗತ್ಯತೆ ಸ್ಪಂದಿಸುವ ಕೆಲಸ ಮಾಡುತ್ತಿದ ಎಂದರು.

ADVERTISEMENT

ಶಾಸಕ ಉಮೇಶ ಜಾಧವ್‌ ಹಣ ಆಮೀಷಕ್ಕೆ ಬಲಿಯಾಗಿದ್ದಾರೆ. ಅವರು ಪುತ್ರವ್ಯಾಮೋಹದಿಂದ ಮಗನಿಗೆ ಟಿಕೆಟ್‌ ಕೊಡಿಸಿದ್ದು ಎಷ್ಟು ಸರಿ? ಇವರು ಕಾಂಗ್ರೆಸ್‌ ನಾಯಕರನ್ನು ಟೀಕಿಸುವ ನೈತಿಕತೆ ಎಲ್ಲಿದೆ ಎಂದು ಪ್ರಶ್ನಿಸಿದರು.

ನನ್ನ ಮಗಳು ಫೇಲಾಗಲು ಕಾಂಗ್ರೆಸ್‌ ನಾಯಕರ ಆಪಾದನೆಗಳೇ ಕಾರಣ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಸಿದ ಅವರು, ಸಿ.ಎಸ್‌ ಶಿವಳ್ಳಿ ಅಕಾಲಿಕ ನಿಧನ ಹೊಂದಿದರು ಅವರು ಧೃತಿಗೆಡದೇ ಪರೀಕ್ಷೆ ಎದುರಿಸಿ ಉತ್ತೀರ್ಣರಾಗಿದ್ದಾಳೆ. ಶಾಸಕರ ಮಗಳು ಅನುತ್ತೀರ್ಣರಾಗಲು ಕಾಂಗ್ರೆಸ್‌ ಕಾರಣ ಎಂಬುದು ಸರಿಯಲ್ಲ ಎಂದರು.

78 ಶಾಸಕರ ಬಲದ ಕಾಂಗ್ರೆಸ್‌ 37 ಶಾಸಕರ ಬಲದ ಜೆಡಿಎಸ್‌ಗೆ ಮುಖ್ಯಮಂತ್ರಿ ಬಿಟ್ಟುಕೊಡಲಾಗಿದೆ. ಇಲ್ಲಿ ಜೆಡಿಎಸ್‌ಗೆ ಕಾಂಗ್ರೆಸ್ ನವರು ಮಾರಾಟವಾಗಿದ್ದಾರೆ ಎಂಬ ಮಾಜಿ ಸಚಿವ ವಿ. ಸೋಮಣ್ಣ ಆರೋಪದ ಕುರಿತು ಕೇಳಿದ್ದಕ್ಕೆ ಬೇಸರಗೊಂಡ ಅವರು, ಕೋಮುವಾದಿ ಶಕ್ತಿ ತಡೆಯಲು ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ತರಲಾಗಿದೆ ಎಂದು ಸಮರ್ಥಿಸಿದರು.

ಕೇಂದ್ರದಲ್ಲಿ ಅಧಿಕಾರ ನಡೆಸಿದ ಬಿಜೆಪಿ ಯುವಕರಿಗೆ ನೀಡಿದ ಕೊಡುಗೆ ಏನು? ವಾರ್ಷೀಕ 2 ಕೋಟಿ ಉದ್ಯೋಗ ಸೃಷ್ಟಿಯಾಯಿತೇ ಅವರು ಕೊಟ್ಟ ಮಾತು ಉಳಿಸಿಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಅಭ್ಯರ್ಥಿ ಸುಭಾಷ್‌ ರಾಠೋಡ್‌ ಒಬ್ಬ ಉತ್ಸಾಯಿ ಸಮಾಜ ಸೇವಕರಾಗಿದ್ದಾರೆ. ಅವರು ಗೆದ್ದರೆ ಚಿಂಚೋಳಿ ಮತಕ್ಷೇತ್ರ ಅಭಿವೃದ್ಧಿ ಹೊಂದುವುರದಲ್ಲಿ ಅನುಮಾನವಿಲ್ಲ ಹೀಗಾಗಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಅವರನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.

ರಾಜ್ಯ ಉಪಾಧ್ಯಕ್ಷ ಶಿವಕುಮಾರ ಕೆ, ಜಿಲ್ಲಾ ಅಧ್ಯಕ್ಷ ವೀರಣ್ಣ ಝಳಕಿ, ತಾಲ್ಲೂಕು ಪ್ರವೀಣ ಟಿಟಿ, ಜಿ.ಪಂ. ಸದಸ್ಯ ಗೌತಮ ಪಾಟೀಲ, ರಮೇಶ ಮರಗೋಳ ಶರಣು ಡೋಣಗಾಂವ್‌, ಸಂತೋಷರೆಡ್ಡಿ ಬಂಟ್ವಾರ್‌, ಸಂತೋಷ ಗುತ್ತೇದಾರ ಮೊದಲಾದವರು ಇದ್ದರು. ಇದಕ್ಕೂ ಮೊದಲು ಯುವ ಕಾಂಗ್ರೆಸ್‌ ಕಾರ್ಯಕರ್ತರ ಸಭೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.