ಕಲಬುರಗಿ SBI ಎಟಿಎಂ ದರೋಡೆ ಪ್ರಕರಣದ ಆರೋಪಿಗಳ ಕಾಲಿಗೆ ಗುಂಡೇಟು ಕೊಟ್ಟು ಬಂಧನ
ಕಲಬುರಗಿ: ನಗರದ ರಿಂಗ್ ರಸ್ತೆಯ SBI ಎಟಿಎಂ ಧ್ವಂಸಗೊಳಿಸಿ ದರೋಡೆ ಮಾಡಿದ ಪ್ರಕರಣದ ಇಬ್ಬರು ಆರೋಪಿಗಳ ಕಾಲಿಗೆ ಸಬರ್ಬನ್ ಠಾಣೆಯ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ಹರಿಯಾಣ ಮೂಲದ ದರೋಡೆ ಪ್ರಕರಣದ ಆರೋಪಿಗಳಾದ ತಸ್ಲೀಮ್ (28) ಮತ್ತು ಷರೀಫ್ ( 22) ಗಾಯಗೊಂಡವರು. ಜಿಮ್ಸ್ ಆವರಣದ ಟ್ರಾಮಾ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಲಬುರಗಿಯ ಬೇಲೂರ ಕ್ರಾಸ್ ಕೈಗಾರಿಕಾ ಪ್ರದೇಶದಲ್ಲಿ ಶನಿವಾರ ಬೆಳಿಗ್ಗೆ ಆರೋಪಿಗಳನ್ನು ಬಂಧಿಸಲು ಪೊಲೀಸರು ತೆರಳಿದ್ದರು. ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದರು. ಕಾನ್ಸ್ಟೆಬಲ್ಗಳಾದ ಮಂಜು, ಫಿರೋಜ್ ಮತ್ತು ರಾಜಕುಮಾರ್ ಅವರ ಮೇಲೆ ದಾಳಿ ಮಾಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶರಣಾಗುವಂತೆ ಸೂಚಿಸಿದರೂ ಆರೋಪಿಗಳು ದಾಳಿ ನಡೆಸುತ್ತಿದ್ದರು. ಅನಿವಾರ್ಯವಾಗಿ ಆತ್ಮರಕ್ಷಣೆಗಾಗಿ ಸಬರ್ಬನ್ ಠಾಣೆಯ ಸಿಪಿಐ ಸಂತೋಷ್ ತಟ್ಟೆಪಲ್ಲಿ ಹಾಗೂ ಪಿಎಸ್ಐ ಬಸವರಾಜ ಅವರು ತಸ್ಲೀಮ್ ಮತ್ತು ಷರೀಫ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಕಾನ್ಸ್ಟೆಬಲ್ಗಳು ಹಾಗೂ ಗುಂಡೇಟು ತಿಂದ ಆರೋಪಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿವೆ.
ಬಂಧಿತ ದರೋಡೆಕೋರರಾದ ತಸ್ಲೀಮ್ ವಿರುದ್ಧ 8 ಹಾಗೂ ಷರೀಫ್ ವಿರುದ್ಧ 3 ಪ್ರಕರಣಗಳು
ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳಲ್ಲಿ ಎಟಿಎಂ ದರೋಡೆ ಸಂಬಂಧ ಪ್ರಕರಣಗಳು ದಾಖಲಾಗಿವೆ.
ಕಲಬುರಗಿ ನಗರದ ರಿಂಗ್ ರಸ್ತೆಯ ರಾಮನಗರದಲ್ಲಿ ಏಪ್ರಿಲ್ 9ರಂದು ಇದೇ ಆರೋಪಿಗಳು ಎಸ್ಬಿಐ ಎಟಿಎಂ ಕೇಂದ್ರಕ್ಕೆ ನುಗ್ಗಿ, ಎಟಿಎಂ ಯಂತ್ರವನ್ನು ಧ್ವಂಸ ಮಾಡಿ ₹ 18 ಲಕ್ಷ ದರೋಡೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.