
ಕಲಬುರಗಿ: ಭೀಮಾ ಮಿಷನ್ ವತಿಯಿಂದ ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಗಳಲ್ಲಿ ಮುಖ್ಯ ಕಾಲುವೆ ಮೇಲೆ ಅಧ್ಯಯನ ಪಾದಯಾತ್ರೆಯನ್ನು ಜನವರಿ 1ರಿಂದ ಮಾರ್ಚ್ 30ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಭೀಮಾ ಮಿಷನ್ ಅಧ್ಯಕ್ಷ ಭೀಮಶೆಟ್ಟಿ ಮುಕ್ಕಾ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕ ನೀರಾವರಿ ನಿಗಮದ ಯೋಜನೆಗಳ ಕಲಬುರಗಿ ವಲಯ ಕಚೇರಿಗಳ ಅಡಿಯಲ್ಲಿ ಬರುವ ಅಫಜಲಪುರ ತಾಲ್ಲೂಕಿನ ಭೀಮಾ ಏತ ನೀರಾವರಿ, ಆಳಂದ ತಾಲ್ಲೂಕಿನ ಅಮರ್ಜಾ, ಬಸವಕಲ್ಯಾಣ ತಾಲ್ಲೂಕಿನ ಚುಳಕಿ ನಾಲಾ, ಬೀದರ್ ತಾಲ್ಲೂಕಿನ ಕಾರಂಜಾ, ಚಿಂಚೋಳಿ ತಾಲ್ಲೂಕಿನ ಚಂದ್ರಂಪಳ್ಳಿ ಮತ್ತು ಮುಲ್ಲಾಮಾರಿ ಕೆಳದಂಡೆ, ಯಾದಗಿರಿ ತಾಲ್ಲೂಕಿನ ಹತ್ತಿಕುಣಿ ಮತ್ತು ಸೌದಾಗರ, ಹುಮನಾಬಾದ್ ತಾಲ್ಲೂಕಿನ ಮುಲ್ಲಾಮಾರಿ ಮೇಲ್ದಂಡೆ, ಕಮಲಾಪುರ ತಾಲ್ಲೂಕಿನ ಗಂಡೋರಿ ನಾಲಾ, ಚಿತ್ತಾಪುರ ತಾಲ್ಲೂಕಿನ ಬೆಣ್ಣೆತೋರಾ ಕಾಲುವೆಗಳ ಅಧ್ಯಯನ ನಡೆಯಲಿದೆ’ ಎಂದರು.
ನಿವೃತ್ತ ಪ್ರಾಂಶುಪಾಲ ಬಸವರಾಜ ಕುಮ್ನೂರ ಮಾತನಾಡಿ, ‘ಅಫಜಲಪುರ ತಾಲ್ಲೂಕಿನ ಬಳೂಂಡಗಿಯಲ್ಲಿ ಜ.1ರಂದು ಪಾದಯಾತ್ರೆ ಆರಂಭವಾಗಲಿದೆ. ಚಿತ್ತಾಪುರ ತಾಲ್ಲೂಕಿನ ಹೇರೂರದಲ್ಲಿ ಮಾ.30ಕ್ಕೆ ಮುಕ್ತಾಯಗೊಳ್ಳಲಿದೆ. ಕಲಬುರಗಿ ಜಿಲ್ಲೆಯ 558 ಕಿ.ಮೀ, ಬೀದರ್ನ 323 ಕಿ.ಮೀ, ಯಾದಗಿರಿಯ 25 ಕಿ.ಮೀ ಸೇರಿ ಒಟ್ಟು 906 ಕಿ.ಮೀ ಪಾದಯಾತ್ರೆ ನಡೆಯಲಿದೆ. ಈ ವೇಳೆ ನೀರು ಬಳಕೆದಾರರ ಸಂಘ, ರೈತಪರ ಸಂಘಟನೆಗಳು, ಎನ್ಜಿಒಗಳು, ಅಧಿಕಾರಿಗಳು ಭಾಗಿಯಾಗಲಿದ್ದಾರೆ’ ಎಂದು ತಿಳಿಸಿದರು.
ಶಿವಾನಂದ ಮಠಪತಿ, ಮಹೇಶ ಪಾಟೀಲ, ಶಿವಲಿಂಗಪ್ಪ ಟೆಂಗಳಿ, ಅಭಿಷೇಕ ಪಾಟೀಲ, ರಾಜು ಜೈನ, ಶಿವರಾಜ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.