
ಕಲಬುರಗಿ: ನಗರ ಜಿಲ್ಲಾ ಕೋರ್ಟ್ ಕಟ್ಟಡಗಳ ಸಂಕೀರ್ಣದಲ್ಲಿ ಬಾಂಬ್ ಇರಿಸಿದ ಇಮೇಲ್ ಕರೆ ಬಂದ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಬಾಂಬ್ ತಪಾಸಣಾ ತಂಡಗಳು ತೀವ್ರ ತಪಾಸಣೆ ನಡೆಸಿದವು.
ಮಾಹಿತಿ ಬಂದ ತಕ್ಷಣ ಕೂಡಲೇ ಕೋರ್ಟ್ ಕಟ್ಟಡಗಳಲ್ಲಿರುವ ನ್ಯಾಯಾಧೀಶರು, ವಕೀಲರು, ನ್ಯಾಯಾಂಗ ಇಲಾಖೆ ನೌಕರರು ಹಾಗೂ ಕಕ್ಷಿದಾರರನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಹೊರಗೆ ಕಳುಹಿಸಿದರು.
ಆತಂಕದಲ್ಲಿದ್ದ ಜನರು ಕಟ್ಟಡಗಳಿಂದ ಹೊರಬಂದು ಕೋರ್ಟ್ ಆವರಣದಲ್ಲಿ ಜಮಾಯಿಸಿದರು.
ಕೆಲ ಹೊತ್ತು ಏನು ನಡೆಯುತ್ತಿದೆ ಎಂಬುದೂ ತಿಳಿಯದೇ ವಕೀಲರು, ಗ್ರಾಮೀಣ ಪ್ರದೇಶದ ಕಕ್ಷಿದಾರರು ಗೊಂದಲಕ್ಕೆ ಒಳಗಾದರು.
ಆರ್ಡಿಎಕ್ಸ್ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ:
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ವಿಳಾಸಕ್ಕೆ ಮಂಗಳವಾರ ಬೆಳಿಗ್ಗೆ 5.40ಕ್ಕೆ ಇ-ಮೇಲ್ ಮಾಡಿರುವ ದುಷ್ಕರ್ಮಿಗಳು 'ಬೆಳಿಗ್ಗೆ 11:50ಕ್ಕೆ ನಿಮ್ಮ ನ್ಯಾಯಾಲಯ/ ನ್ಯಾಯಾಧೀಶರ ಕೊಠಡಿಯಲ್ಲಿ ವಿಷಾನಿಲ ತುಂಬಿದ ಸೈನಾಡ್ ಆರ್ಡಿಎಕ್ಸ್ ಬಾಂಬ್ ಸ್ಫೋಟಗೊಳ್ಳಲಿದ್ದು, ಬೆಳಿಗ್ಗೆ 11 ಗಂಟೆಯೊಳಗೆ ನಿರಪರಾಧಿ ನ್ಯಾಯಾಧೀಶರು ಹಾಗೂ ನಾಗರಿಕರನ್ನು ಸ್ಥಳಾಂತರಿಸಿ' ಎಂದು ಎಚ್ಚರಿಕೆ ನೀಡಲಾಗಿದೆ.
ಮೂರು ಪುಟಗಳ ಇ-ಮೇಲ್ ಮುಸ್ಲಿಂ ಹೆಸರಿನ ಇಮೇಲ್ ವಿಳಾಸದಿಂದ ಬಂದಿರುವುದಾಗಿ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.