ADVERTISEMENT

ಬೆಳೆ ವಿಮೆ ಪರಿಹಾರ ಬಿಡುಗಡೆಗೆ ಆಗ್ರಹ:ಸಿ.ಎಂ.ಗೆ ಪತ್ರ ಬರೆದ ಶಾಸಕ ಬಿ.ಆರ್‌.ಪಾಟೀಲ

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 15:08 IST
Last Updated 1 ಜೂನ್ 2025, 15:08 IST
ಬಿ.ಆರ್‌.ಪಾಟೀಲ
ಬಿ.ಆರ್‌.ಪಾಟೀಲ   

ಕಲಬುರಗಿ: ‘ಕಲಬುರಗಿ ಜಿಲ್ಲೆಗೆ 2024–25ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಬಾಕಿ ಪರಿಹಾರದ ₹465 ಕೋಟಿ ಶೀಘ್ರವೇ ಬಿಡುಗಡೆ ಮಾಡಬೇಕು’ ಎಂದು ಆಳಂದ ಶಾಸಕ ಬಿ.ಆರ್‌.ಪಾಟೀಲ ಒತ್ತಾಯಿಸಿದ್ದಾರೆ.

‘ಸದ್ಯ ವಿಮೆ ಕಂಪನಿಯಿಂದ ₹110 ಕೋಟಿಗೂ ಅಧಿಕ ಹಣ ಬಿಡುಗಡೆಯಾಗಿದೆ. ರಾಜ್ಯ ಸರ್ಕಾರದಿಂದ ₹465 ಕೋಟಿ ಬೆಳೆ ವಿಮೆ ಹಣ ಬಿಡುಗಡೆಗೆ ಬಾಕಿ ಉಳಿದಿದೆ. ಈ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಶಾಸಕ ಬಿ.ಆರ್‌.ಪಾಟೀಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೇ 31ರಂದು ಪತ್ರ ಬರೆದಿದ್ದಾರೆ.

‘2024ರ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 8.9 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಒಟ್ಟು 5.36 ಲಕ್ಷ ರೈತರ ಪೈಕಿ 2.04 ಲಕ್ಷ ರೈತರು ಬೆಳೆವಿಮೆ ಯೋಜನೆಯಡಿ ನೋಂದಾಯಿಸಿಕೊಂಡಿದ್ದರು. ನವೆಂಬರ್‌ನಲ್ಲಿ ಶೇ71ರಷ್ಟು ಮಳೆ ಕೊರತೆಯಾಗಿ ತೊಗರಿ ಒಣಗಲು ಆರಂಭಿಸಿತು. ಬಳಿಕ ಮುತುವರ್ಜಿ ವಹಿಸಿ ಬೆಳೆ ಕಟಾವು ಮಾಡಿಸಿ, ನಿಜವಾದ ಬೆಳೆ ಇಳುವರಿಯನ್ನು ಗ್ರಾಮ ಲೆಕ್ಕಾಧಿಕಾರಿ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಅದರಂತೆ ಜಿಲ್ಲೆಗೆ ಸ್ಥಳೀಯ ಪ್ರಕೃತಿ ವಿಕೋಪದಡಿ ₹76 ಕೋಟಿ, ಕೋಯ್ಲೋತ್ತರ ನಷ್ಟದಡಿ ₹2.62 ಕೋಟಿ ಸೇರಿದಂತೆ ₹78.69 ಕೋಟಿ ಪರಿಹಾರ 2.03 ಲಕ್ಷ ರೈತರ ಖಾತೆಗೆ ಡಿಬಿಟಿ ಮೂಲಕ ವಿತರಿಸಲಾಗಿತ್ತು’ ಎಂದಿದ್ದಾರೆ.

ADVERTISEMENT

‘ಬೆಳೆ ವಿಮೆ ಬಾಕಿ ಹಣ ಬಿಡುಗಡೆಗೆ ಕೃಷಿ ಇಲಾಖೆಯಿಂದ ಆರ್ಥಿಕ ಇಲಾಖೆಗೆ ಪತ್ರ ಬರೆಯಲಾಗಿದೆ. ನಮ್ಮ ಕೆಲವು ವಿರೋಧಿಗಳ ದೂರಿನ ಮೇರೆಗೆ ಆರ್ಥಿಕ ಇಲಾಖೆ ಅನುಮಾನ ಪಟ್ಟು ಹಣ ಬಿಡುಗಡೆ ತಡೆಹಿಡಿದಿದೆ ಎಂಬ ಮಾತುಗಳು ಕೇಳಿ ಬಂದಿವೆ. ಸರ್ಕಾರದ ಅಧಿಕಾರಿಗಳು ಪ್ರಾಮಾಣಿಕವಾಗಿ ಸಮೀಕ್ಷೆ ಮಾಡಿದ್ದು, ಅದರ ಬಗೆಗೆ ಅನುಮಾನ ಪಡುವುದು ಸರಿಯಲ್ಲ’ ಎಂದಿದ್ದಾರೆ.

‘ಜಿಲ್ಲೆಯಲ್ಲಿ ಈಗಾಗಲೇ ಉತ್ತಮ ಮಳೆಯಾಗಿದ್ದು, ಬಿತ್ತನೆಗೂ ಮುನ್ನ ಸರ್ಕಾರ ಬೆಳೆ ವಿಮೆ ಪರಿಹಾರ ಹಣ ಬಿಡುಗಡೆ ಮೂಲಕ ಸಂಕಷ್ಟದಲ್ಲಿರುವ ರೈತರಿಗೆ ಸ್ಪಂದಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.