ಕಲಬುರಗಿ: ‘ಮೈಗೆ ಸೂಸೈಡ್ ಬಾಂಬ್ ಕಟ್ಟಿಕೊಂಡು ಯುದ್ಧಕ್ಕೆ ಹೋಗಲೂ ಸಿದ್ಧ ಎಂಬ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದಾನೆ. ನನಗೆ ದೇಶ ಮುಖ್ಯ. ದೇಶಕ್ಕಾಗಿ ಬಲಿಯಾಗಲೂ ನಾನು ಸಿದ್ಧ’ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
‘ಪಾಕ್ ವಿರುದ್ಧ ಜಮೀರ್ ಯುದ್ಧ ಮಾಡುವುದು ಬೇಡ, ಪಾಕ್ ಪರ ಘೋಷಣೆ ಕೂಗುವವರ ವಿರುದ್ಧ ಹೋರಾಡಲಿ’ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ನೀಡಿದ್ದ ಹೇಳಿಕೆಗೆ ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಈಗಲೂ ನಾನು ನನ್ನ ಹೇಳಿಕೆಗೆ ನೂರಕ್ಕೆ ನೂರರಷ್ಟು ಬದ್ಧನಾಗಿದ್ದೇನೆ. ಸೂಸೈಡ್ ಬಾಂಬ್ ಕೊಡಲಿ, ಅದನ್ನು ಕಟ್ಟಿಕೊಂಡು ನಾನೇ ಹೋಗುತ್ತೇನೆ’ ಎಂದು ಪುನರುಚ್ಚರಿಸಿದರು.
‘ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿಧಾನಸಭೆಯಲ್ಲಿ ವಿರೋಧ ಮಾಡಿದ್ದೇವೆ. ಸುಪ್ರೀಂಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ನಮಗೆ ನ್ಯಾಯ ಸಿಗುವ ವಿಶ್ವಾಸ ಇದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ಎಲ್ಲ ಸಚಿವರಿಗೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ (ಜಾತಿಗಣತಿ) ಸಮೀಕ್ಷೆ ವರದಿಯ ಬಗ್ಗೆ ಲಿಖಿತ ರೂಪದಲ್ಲಿ ಅಭಿಪ್ರಾಯಗಳನ್ನು ತಿಳಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಸಚಿವರ ಅಭಿಪ್ರಾಯಗಳನ್ನು ಪಡೆದು ಮತ್ತೊಮ್ಮೆ ಚರ್ಚೆ ಮಾಡುವುದಾಗಿ ಹೇಳಿದ್ದಾರೆ. ಬಂದಂತಹ ಅಭಿಪ್ರಾಯಗಳ ಮೇಲೆ ತೀರ್ಮಾನ ಆಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.