ADVERTISEMENT

ನಾನು ಕ್ಷಮೆ ಕೇಳಿಲ್ಲ: ಬಿ.ಆರ್. ಪಾಟೀಲ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 0:07 IST
Last Updated 30 ಜುಲೈ 2023, 0:07 IST
ಬಿ.ಆರ್.ಪಾಟೀಲ
ಬಿ.ಆರ್.ಪಾಟೀಲ   

ಕಲಬುರಗಿ: ‘ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾನು ಯಾರ ಕ್ಷಮೆಯನ್ನೂ ಕೇಳಿಲ್ಲ. ನನ್ನ ಮಾತಿಗೆ ಈಗಲೂ ಬದ್ಧನಾಗಿದ್ದೇನೆ. ಪಕ್ಷ ಬೇಕಿದ್ದರೆ ನನ್ನ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಿ’ ಎಂದು ಆಳಂದ ಶಾಸಕ ಬಿ.ಆರ್. ಪಾಟೀಲ ಸ್ಪಷ್ಟಪಡಿಸಿದರು.

ಪತ್ರ ಬರೆದ ಶಾಸಕರು ಕ್ಷಮೆ ಕೇಳಿದ್ದಾರೆ ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ ಅವರು ಹೇಳಿಕೆ ನೀಡಿದ್ದರು. ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಶಾಸಕ ಪಾಟೀಲ, ‘ಕ್ಷಮೆ ಕೇಳುವವರು ಕೇಳಿರಬಹುದು. ನಾನಂತೂ ಯಾವುದೇ ಅಪರಾಧ ಮಾಡಿಲ್ಲ. ಕ್ಷಮೆ ಕೇಳುವ ಹೇಡಿತನವೂ ನನ್ನಲ್ಲಿಲ್ಲ’ ಎಂದು ಹೇಳಿದರು.

‘ಪತ್ರದಲ್ಲಿ ಯಾವ ಅಂಶಗಳನ್ನು ಹೇಳಿದ್ದೇನೆಯೋ ಅದಕ್ಕೆ ಈಗಲೂ ಬದ್ಧನಾಗಿದ್ದೇನೆ’ ಎಂದರು.

ADVERTISEMENT

‘ಮೊದಲಿನಿಂದಲೂ ರೈತ ಹೋರಾಟದಲ್ಲಿ ಇದ್ದೇನೆ. ಹೀಗಾಗಿ, ಬಳ್ಳಾರಿಯಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ರಾಕೇಶ್ ಟಿಕಾಯತ್ ಬರುತ್ತಿದ್ದು, ಅದರಲ್ಲಿ ಭಾಗವಹಿಸುತ್ತೇನೆ. ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಪರಿಸ್ಥಿತಿ ಅರಿಯಲು ಅಲ್ಲಿಗೂ ಭೇಟಿ ನೀಡುತ್ತಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹಲಕ್ಷ್ಮಿ ಯೋಜನೆಗೆ ಕಲಬುರಗಿಯಲ್ಲಿ ಆಗಸ್ಟ್ 5ರಂದು ಚಾಲನೆ ನೀಡಲಿದ್ದು, ಆ  ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.