
ಕಲಬುರಗಿ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಬೆಳೆ ನಷ್ಟ ಅನುಭವಿಸಿದ ರೈತರಿಗೆ ರಾಜ್ಯ ಸರ್ಕಾರ ಪರಿಹಾರ ವರ್ಗಾಯಿಸುವ ಕೆಲಸ ಆರಂಭಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ಬಹುಭಾಗದಲ್ಲಿ ಅತಿವೃಷ್ಟಿಯಿಂದ ರೈತರ ಬದುಕು ದುಸ್ತರವಾಗಿತ್ತು. ಆಗ ಮುಖ್ಯಮಂತ್ರಿ ವೈಮಾನಿಕ ಸಮೀಕ್ಷೆ ಕೈಗೊಂಡಿದ್ದರು. ಎನ್ಡಿಆರ್ಎಫ್ ನಿಯಮಗಳಲ್ಲಿರುವ ಮೊತ್ತದೊಂದಿಗೆ ಹೆಚ್ಚುವರಿ ಪರಿಹಾರ ನೀಡುವುದಾಗಿ ಕಲಬುರಗಿಯಲ್ಲೇ ಪ್ರಕಟಿಸಿದ್ದರು.
ಜಿಲ್ಲೆಯ ಒಟ್ಟು 3.24 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿತ್ತು. ಅದರಲ್ಲಿ ಪರಿಹಾರ ಪಾವತಿಗೆ ಪರಿಗಣಿಸಲಾಗಿರುವ ವಿಸ್ತೀರ್ಣ 2,91,381.52 ಹೆಕ್ಟೇರ್ ಇದ್ದು, ಒಟ್ಟು 3.23 ಲಕ್ಷ ಫಲಾನುಭವಿ ರೈತರಿಗೆ ಎಸ್ಡಿಆರ್ಎಫ್ ನಿಯಮಗಳ ಪ್ರಕಾರ ₹ 250.97 ಕೋಟಿ ಪರಿಹಾರ ಪಾವತಿ ಪ್ರಕ್ರಿಯೆಯಲ್ಲಿದೆ.
‘ಅದಲ್ಲದೇ, ಜಿಲ್ಲೆಗೆ ರಾಜ್ಯ ಸರ್ಕಾರ ಘೋಷಿಸಿದ ಹೆಚ್ಚುವರಿ ಇನ್ಪುಟ್ ಸಬ್ಸಿಡಿ ಮೊತ್ತ ₹247.75 ಕೋಟಿ. ಜಿಲ್ಲೆಗೆ ಈಗಾಗಲೇ ವಿತರಿಸಲಾಗಿರುವ ಮತ್ತು ಪಾವತಿ ಪ್ರಕ್ರಿಯೆಯಲ್ಲಿರುವ ಒಟ್ಟು ಮೊತ್ತ ₹498.73 ಕೋಟಿ. ಸಂಕಷ್ಟದಲ್ಲಿರುವ ರೈತರಿಗೆ ಸಕಾಲದಲ್ಲಿ ನ್ಯಾಯಯುತ ಪರಿಹಾರ ಒದಗಿಸುವ ಮೂಲಕ ನಮ್ಮ ಸರ್ಕಾರವು ‘ಅನ್ನದಾತರೇ ಮೊದಲು’ ಎಂಬ ಬದ್ಧತೆಯನ್ನು ನಿರೂಪಿಸಿದೆ’ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುರುವಾರ ಪರಿಹಾರ ಬಿಡುಗಡೆಗೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಡಿಯೊ ಸಂವಾದದ ಮೂಲಕ ಎನ್ಡಿಆರ್ಎಫ್/ಎಸ್ಡಿಆರ್ಎಫ್ನಡಿ ಈಗಾಗಲೇ ಬೆಳೆ ಪರಿಹಾರ ಹಣ ಪಡೆದಿರುವ ಕಲಬುರಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ನಾವದಗಿ ರೈತ ಚಂದ್ರಶೇಖರ ಹರಸೂರ, ಟೆಂಗಳಿ ರೈತ ಓಂಪ್ರಕಾಶ ಹೆಬ್ಬಾಳ ಹಾಗೂ ಕೋಡ್ಲಿ ಗ್ರಾಮದ ಸಿದ್ದಪ್ಪ ಕೋಡ್ಲಿ ಅವರೊಂದಿಗೆ ಮಾತನಾಡಿದರು. ಬೆಳೆ ಪರಿಹಾರ ಹಣ ಜಮೆಯಾಗಿರುವ ಬಗ್ಗೆ ವಿಚಾರಿಸಿದರು.
‘ಈಗಾಗಲೆ ತಮ್ಮ ಖಾತೆಗೆ ಹಣ ಜಮೆಯಾಗಿದೆ. ಸಕಾಲದಲ್ಲಿ ಪರಿಹಾರ ಹಣ ಬಿಡುಗಡೆ ಮಾಡಿ ರೈತರ ಹಿತ ಕಾಯ್ದಿರುವ ಸರ್ಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಧನ್ಯವಾದಗಳು’ ಎಂದು ರೈತರು ತಿಳಿಸಿದರು.
ವರ್ಚುವಲ್ ಸಭೆಯಲ್ಲಿ ಬೆಂಗಳೂರಿನಿಂದ ಮುಖ್ಯಮಂತ್ರಿಗಳ ಜೊತೆಗೆ ಸಚಿವರಾದ ಪ್ರಿಯಾಂಕ್ ಖರ್ಗೆ, ಎಚ್.ಕೆ.ಪಾಟೀಲ, ಶರಣಬಸಪ್ಪ ದರ್ಶನಾಪುರ, ಎನ್.ಭೋಸರಾಜು, ಅರಣ್ಯ ಸಚಿವ ಈಶ್ವರ ಖಂಡ್ರೆ ಸೇರಿದಂತೆ ಅನೇಕರಿದ್ದರು. ಇತ್ತ ಕಲಬುರಗಿಯಿಂದ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಕೃಷಿ ಉಪನಿರ್ದೇಶಕಿ ಅನುಸೂಯಾ ಹೂಗಾರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.