ಅಫಜಲಪುರ: ಪಟ್ಟಣ ಪ್ರದೇಶದಲ್ಲಿಯೂ ಕೂಲಿಕಾರರು, ಇತರೆ ಕಾರ್ಮಿಕರು ಇದ್ದಾರೆ. ಅವರಿಗೂ ಕೆಲಸದ ಅಗತ್ಯವಿದೆ. ಸದ್ಯಕ್ಕೆ ಕೃಷಿ ಚಟುವಟಿಕೆ ಸ್ಥಗಿತವಾಗಿದೆ. ಅದಕ್ಕಾಗಿ ಸರ್ಕಾರ ಪಟ್ಟಣದಲ್ಲಿಯೂ ನರೇಗಾ ಯೋಜನೆಯಲ್ಲಿ ಕೆಲಸ ಆರಂಭಿಸಲು ಕಾನೂನಿಗೆ ತಿದ್ದುಪಡಿ ತರಬೇಕು’ ಎಂದು ಪುರಸಭೆ ಉಪಾಧ್ಯಕ್ಷ ಶಿವಕುಮಾರ ಪದಕಿ ತಿಳಿಸಿದರು.
ಈ ಕುರಿತು ಭಾನುವಾರ ಮಾಹಿತಿ ನೀಡಿ, ಪಟ್ಟಣ ಪ್ರದೇಶದಲ್ಲಿ ಎರಡು ತಾಂಡಾಗಳಿವೆ ಮತ್ತು ಸಾಕಷ್ಟು ಜನರು ಬಡವರಿದ್ದಾರೆ. ಬೇಸಿಗೆ ಅವಧಿಯಲ್ಲಿ ಕೃಷಿ ಚಟುವಟಿಕೆ ಸ್ಥಗಿತವಾಗಿವೆ. ಕಾರ್ಮಿಕರಿಗೆ ಕೆಲಸವಿಲ್ಲ. ಸರ್ಕಾರ ಕೇವಲ ಗ್ರಾಮೀಣ ಜನರಿಗೆ ಮಾತ್ರ ನರೇಗಾ ಯೋಜನೆ ಪ್ರಯೋಜನ ನೀಡುತ್ತಿದೆ. ಪಟ್ಟಣಕ್ಕೂ ವಿಸ್ತರಿಸಿದರೆ ಅನುಕೂಲವಾಗುತ್ತದೆ. ನರೇಗಾ ಯೋಜನೆ ಅಡಿಯಲ್ಲಿ ತೋಟಗಾರಿಕೆಯ ಬೆಳೆಗಳನ್ನು ಬೆಳೆಯಲು ಅನುಕೂಲವಾಗುತ್ತದೆ. ಪಟ್ಟಣದ ವ್ಯಾಪ್ತಿಯಲ್ಲಿ ಸಾಕಷ್ಟು ಕೃಷಿಕರು ಇದ್ದಾರೆ. ಅವರಿಗೆ ನರೇಗಾ ಯೋಜನೆ ಅನುಷ್ಠಾನವಾದರೆ ಬಡ ರೈತರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನಮ್ಮ ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಯಾಗಿದೆ. ಇತ್ತೀಚೆಗೆ ಬಿಜೆಪಿ ಸರ್ಕಾರ ರಾಜ್ಯಕ್ಕೆ ನೀಡುತ್ತಿರುವ ಅನುದಾನವು ಕಡಿಮೆ ಮಾಡಿದೆ. ಹೀಗಾಗಿ ಈ ಯೋಜನೆ ಅಡಿಯಲ್ಲಿ ಕೆಲಸ ಕಾರ್ಯಗಳು ಆಗುತ್ತಿಲ್ಲ. ಅದಕ್ಕಾಗಿ ಕೇಂದ್ರ ಸರ್ಕಾರ ನರೇಗಾ ಯೋಜನೆಯನ್ನು ಇನ್ನಷ್ಟು ವಿಸ್ತರಿಸಿ, ಬಜೆಟ್ನಲ್ಲಿ ಹೆಚ್ಚಿನ ಅನುದಾನವನ್ನು ನೀಡಬೇಕು. ಇದರಿಂದ ಕೃಷಿ ಚಟುವಟಿಕೆ ಇನ್ನಷ್ಟು ಅನುಕೂಲವಾಗುತ್ತದೆ. ಕೂಲಿಕಾರರಿಗೆ ಬೇಸಿಗೆ ಅವಧಿಯಲ್ಲಿ ಕೆಲಸ ನೀಡಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಮುಖಂಡರಾದ ರಾಜು ಪಾಟೀಲ, ರವಿ ನಂದಶೆಟ್ಟಿ, ಮಲ್ಲಯ್ಯ ಹೊಸಮಠ, ಸೈಫನ್ ಸಾಬ್ ಚಿಕ್ಕಳ್ಳಿಗಿ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.