ADVERTISEMENT

ಸುರಕ್ಷತಾ ಉಪಕರಣ ಬಳಕೆ ಮಾಡಿ: ರವೀಂದ್ರ ಕರಲಿಂಗಣ್ಣವರ

ವಿದ್ಯುತ್ ಸುರಕ್ಷತೆಯ ಜಾಗೃತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2024, 5:00 IST
Last Updated 23 ಡಿಸೆಂಬರ್ 2024, 5:00 IST
ಕಲಬುರಗಿಯ ಕೆಪಿಟಿಸಿಎಲ್ ನೌಕರರ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ‘ವಿದ್ಯುತ್ ಸುರಕ್ಷತೆಯ ಜಾಗೃತಿ ಕಾರ್ಯಾಗಾರ’ವನ್ನು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಕರಿಲಿಂಗಣ್ಣನವರ ಉದ್ಘಾಟಿಸಿದರು
ಕಲಬುರಗಿಯ ಕೆಪಿಟಿಸಿಎಲ್ ನೌಕರರ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ‘ವಿದ್ಯುತ್ ಸುರಕ್ಷತೆಯ ಜಾಗೃತಿ ಕಾರ್ಯಾಗಾರ’ವನ್ನು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಕರಿಲಿಂಗಣ್ಣನವರ ಉದ್ಘಾಟಿಸಿದರು   

ಕಲಬುರಗಿ: ಕೆಲಸದ ವೇಳೆ ಸುರಕ್ಷತಾ ಉಪಕರಣಗಳನ್ನು ಬಳಸುವ ಮೂಲಕ ವಿದ್ಯುತ್ ಅಪಘಾತಗಳಿಂದ ದೂರ ಇರಬೇಕು ಎಂದು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಕರಲಿಂಗಣ್ಣವರ ಹೇಳಿದರು.

ನಗರದ ಕವಿಪ್ರನಿ ನೌಕರರ ಸಭಾ ಭವನದಲ್ಲಿ ಕಾರ್ಯ ಮತ್ತು ಪಾಲನೆ ಗ್ರಾಮೀಣ ವಿಭಾಗ-1ರಿಂದ ಮಾರ್ಗದಾಳು, ಸಹಾಯಕ ಮಾರ್ಗದಾಳು ಹಾಗೂ ಕಿರಿಯ ಮಾರ್ಗದಾಳುಗಳಿಗೆ ಶನಿವಾರ ಹಮ್ಮಿಕೊಂಡಿದ್ದ ‘ವಿದ್ಯುತ್ ಸುರಕ್ಷತೆಯ ತರಬೇತಿ ಜಾಗೃತಿ ಕಾರ್ಯಾಗಾರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕಂಪನಿಯಿಂದ ಎಲ್ಲರಿಗೂ ಕೂಡ ಸುರಕ್ಷತೆಯ ಉಪಕರಣ ನೀಡಲಾಗಿರುತ್ತದೆ. ಅವುಗಳ ಬಳಕೆ ಕಡಿಮೆಯಾಗಿದೆ ಎಂಬ ಮಾತು ಕೇಳಿಬರುತ್ತಿವೆ. ನೀಡಿದ ಎಲ್ಲ ಉಪಕರಣಗಳ ಬಳಕೆ ಮಾಡಬೇಕು. ದೊಡ್ಡ ಕಾರ್ಖಾನೆಗಳಲ್ಲಿನ ಕಾರ್ಮಿಕರು, ಮೈನಿಂಗ್‌ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಯಾವಾಗಲೂ ಸಮವಸ್ತ್ರ ಹಾಗೂ ಸುರಕ್ಷತಾ ಉಪಕರಣ ಹಾಕಿಕೊಂಡು ತಯಾರಾಗಿರುತ್ತಾರೆ. ಇದು ಅವರ ಸುರಕ್ಷತೆ ಮತ್ತು ಕೆಲಸಕ್ಕೆ ಸಿದ್ಧವಾಗಿರುವ ಹಂತವಾಗಿದೆ. ಅವರಂತೆ ನೀವು ಕೂಡ ಯಾವುದೇ ತುರ್ತು ಪರಿಸ್ಥಿತಿಗೆ ತಯಾರಾಗಿ ಇರಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ವಿದ್ಯುತ್ ಅವಘಡಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಈ ವರ್ಷ 200ರ ಸಮೀಪ ವಿದ್ಯುತ್ ಅವಘಡ ಸಂಭವಿಸಿದ್ದು, 3 ಜನ ಇಲಾಖೆಯವರು ಮರಣ ಹೊಂದಿದ್ದು, ಹೊರಗಿನವರು 80ಕ್ಕೂ ಹೆಚ್ಚಿನ ಜನ ಮೃತಪಟ್ಟಿದ್ದಾರೆ. ಕಳೆದ ವರ್ಷ ಈ ಸಂಖ್ಯೆ 90ರ ಮೇಲೆ ಹೋಗಿತ್ತು’ ಎಂದು ತಿಳಿಸಿದರು.

ನಿಗಮದ ಕಾರ್ಯಾಚರಣೆ ಮುಖ್ಯ ಎಂಜಿನಿಯರ್‌ ವೆಂಕಟೇಶ್ ಪ್ರಸಾದ ಮಾತನಾಡಿ, ‘ನಮ್ಮನ್ನು ನಂಬಿಕೊಂಡವರು ಸುರಕ್ಷಿತವಾಗಿರಬೇಕೆಂದು ಎಲ್ಲರೂ ಕೆಲಸ ಮಾಡಬೇಕಿದೆ. ಅದಕ್ಕಾಗಿಯೇ ಕಾರ್ಯಾಗಾರ ನಡೆಸಲಾಗುತ್ತಿದೆ’ ಎಂದರು.

ಕಾರ್ಯನಿರ್ವಾಹಕ ಎಂಜಿನಿಯರ್‌ ಮರುಘೇಂದ್ರಯ್ಯ ಮಠಪತಿ ಅಧ್ಯಕ್ಷತೆ ವಹಿಸಿದ್ದರು. ಜೆಸ್ಕಾಂನ ತಾಂತ್ರಿಕ ನಿರ್ದೇಶಕ ಎನ್.ಆರ್.ಎಂ. ನಾಗರಾಜನ್, ಅಧಿಕಾರಿಗಳಾದ ಮುರುಳಿಧರ ನಾಯಕ್, ಅನಿಲ್ ಶೇರಿಕಾರ, ಸಂತೋಷ ಚವ್ಹಾಣ, ಡಿ.ಎಲ್.ಜಾಧವ, ಬಿ.ಆರ್.ಬುದ್ಧಾ, ಬಾಬು ಕೋರೆ, ಗ್ರಾಮೀಣ ವಲಯದ ಸಹಾಯಕ ಎಂಜಿನಿಯರ್ (ತಾಂತ್ರಿಕ) ಭೀಮಾಶಂಕರ ತಳವಾರ, ಸಂತೋಷ ಗಾಜರೆ, ಶಿಲ್ಪಾರಾಣಿ, ಸಂತೋಷ ಡಾಂಗೆ ಉಪಸ್ಥಿತರಿದ್ದರು.

ಮೆಹಬೂಬಸಾಬ ಗಂಜೆ ಅವರು ಪ್ರಥಮ ಚಿಕಿತ್ಸೆ ಬಗ್ಗೆ, ಅಂಕುಶ ಅವರು ಅಗ್ನಿ ಅವಘಡಗಳ ಬಗ್ಗೆ, ವಾಣಿ, ರೂಪಾಶ್ರೀ, ಗುರುದೇವ ಯೋಗದ ಬಗ್ಗೆ ಮಾಹಿತಿ ನೀಡಿದರು.

ರಾಜ್ಯದ ವಿದ್ಯುತ್ ಅವಘಡಗಳ ಶೇ 20ರಷ್ಟು ನಮ್ಮ ವಿಭಾಗದಲ್ಲಿ ನಡೆಯುತ್ತಿವೆ. ಆದ್ದರಿಂದ ಎಲ್ಲರನ್ನೂ ಜಾಗೃತಿ ಮಾಡಬೇಕೆಂಬುದು ಮುಖ್ಯ ಉದ್ದೇಶವಾಗಿದೆ. ಉದಾಸೀನ ತೋರದೆ ಸುರಕ್ಷತಾ ಉಪಕರಣ ಬಳಸಬೇಕು
ರವೀಂದ್ರ ಕರಲಿಂಗಣ್ಣವರ, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.