ADVERTISEMENT

ಕಲಬುರಗಿ | ಬರೀ ಚಾರಾಣೆ ಬೆಳಿ ಉಳದೈತಿ: ನಿಖಿಲ್‌ ಕುಮಾರಸ್ವಾಮಿ

ನಿಖಿಲ್‌ ಕುಮಾರಸ್ವಾಮಿ ಜೊತೆಗಿನ ಸಂವಾದದಲ್ಲಿ ಸಂಕಷ್ಟ ತೋಡಿಕೊಂಡ ಅನ್ನದಾತರು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 6:27 IST
Last Updated 16 ಸೆಪ್ಟೆಂಬರ್ 2025, 6:27 IST
ಕಲಬುರಗಿಯ ಎಪಿಎಂಸಿ ಯಾರ್ಡ್‌ನಲ್ಲಿ ನಡೆದ ರೈತರ ಜೊತೆಗಿನ ಸಂವಾದದಲ್ಲಿ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು. ಜೆಡಿಎಸ್‌ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ ಸೇರಿ ಹಲವರು ಪಾಲ್ಗೊಂಡಿದ್ದರು
ಕಲಬುರಗಿಯ ಎಪಿಎಂಸಿ ಯಾರ್ಡ್‌ನಲ್ಲಿ ನಡೆದ ರೈತರ ಜೊತೆಗಿನ ಸಂವಾದದಲ್ಲಿ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು. ಜೆಡಿಎಸ್‌ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ ಸೇರಿ ಹಲವರು ಪಾಲ್ಗೊಂಡಿದ್ದರು   

ಕಲಬುರಗಿ: ‘ಅತಿವೃಷ್ಟಿಯಿಂದ ರೈತ ಸಂಕಷ್ಟಕ್ಕ ಸಿಲಕ್ಯಾನ್‌. ರೈತ ದೇಶದ ಬೆನ್ನೆಲುಬು ಅಂತಾರ. ಭೂಮಿ ತಾಯಿ ಆಣೆ ಮಾಡಿ ಹೇಳ್ತಿನಿ, ರೈತರ ಬೆನ್ನೆಲುಬು ಮುರದೈತಿ. ಹೋದ್‌ ವರ್ಷಕ್ಕಿಂತ ಈ ಸಲ ಪರಿಸ್ಥಿತಿ ಖರಾಬ್‌ ಐತಿ. ಹೋದ ಸಲಾ ರೂಪಾಯಿದಾಗ ಅರ್ಧ ಬೆಳಿ ಉಳಿದಿತ್ತು. ಈ ಸಲ ಬರೀ ಚಾರಾಣೆ ಉಳದೈತಿ. ರೈತ ಅನ್ಯಾಯವಾಗಿ ಸರ್ಕಾರದಿಂದ ದುಡ್ಡ ಇಸ್ಕೊಂಡು ತಿನ್ನಾತಾನ ಅಂತ ತಿಳಕೊಂಡ್ರೂ ಪರ್ವಾಗಿಲ್ಲ, ರೈತರಿಗೆ ಪರಿಹಾರ ಕೊಡ್ಲಿ...’

ನಗರದ ಎಪಿಎಂಸಿ ಯಾರ್ಡ್‌ನಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾದ ರೈತರೊಂದಿಗೆ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಜೊತೆಗೆ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮುಗ್ಧ ರೈತರೊಬ್ಬರು ನೆರವು ಯಾಚಿಸಿದ ಪರಿಯಿದು.

ಅಲ್ಲಿ ನೆರೆದಿದ್ದ ರೈತರು ನಿಖಿಲ್‌ ಕುಮಾರಸ್ವಾಮಿ ಎದುರು ತಮ್ಮ ಸಂಕಷ್ಟ ತೋಡಿಕೊಂಡರು. ‘ವ್ಯಾಪಕ ಮಳೆಯಿಂದ ಶೇ 99ರಷ್ಟು ಬೆಳೆ ಹಾನಿಗೀಡಾಗಿ ಹೋಗಿದೆ. ಏನಾದರೂ ಮಾಡಿ ಸರ್ಕಾರದಿಂದ ಪರಿಹಾರ ಕೊಡಿಸಿ’ ಎಂದು ಭೀಮಳ್ಳಿ ಗ್ರಾಮದ ರೈತ ಶರಣಯ್ಯ ಕೋರಿದರು.

ADVERTISEMENT

‘ಬೆಳೆ ಹಾನಿ ಸಮೀಕ್ಷೆಯಲ್ಲಿ ದೋಖಾ ನಡೆಯುತ್ತಿದೆ. ಕೇವಲ ಶೇ 15ರಿಂದ ಶೇ 20ರಷ್ಟು ಮಾತ್ರವೇ ಸಮೀಕ್ಷೆ ನಡೆಸಲಾಗುತ್ತಿದೆ. ನಿಖರವಾಗಿ ಸಮೀಕ್ಷೆ ನಡೆಸಿ, ಶೇ 100ರಷ್ಟು ಹಾನಿಗೆ ಪರಿಹಾರ ನೀಡಬೇಕು’ ಎಂದು ಆಳಂದ ತಾಲ್ಲೂಕಿನ ಶಿವರಾಜ ನೆಲ್ಲೂರು ಒತ್ತಾಯಿಸಿದರು.

‘ರೈತ ಹಾಕಿದ ಬೆಳೆ ಹಾಳಾಗಿ ಹೋಗಿದೆ. ಅನ್ನದಾತರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದರೂ ಸರ್ಕಾರ ಕಣ್ತೆರೆದು ನೋಡಲು ಸಿದ್ಧವಿಲ್ಲ. ಹೀಗಾದರೆ ರೈತ ಬದುಕುವುದು ಹೇಗೆ?’ ಎಂದು ರೈತ ಮುಖಂಡ ದಶರಥ ಸಿಂಗ್‌ ಪ್ರಶ್ನಿಸಿದರು.

‘ಬೆಳೆ ವಿಮೆ ಮಧ್ಯವರ್ತಿಗಳ ಕಾಟ ಹೆಚ್ಚಾಗಿದ್ದು, ರೈತರನ್ನು ಯಾಮಾರಿಸಿ ವಿಮೆ ಕಂತು ಪಾವತಿಸಿ ಪರಿಹಾರ ಹಣ ದೋಚುತ್ತಿದ್ದಾರೆ. ಅದನ್ನು ಸರ್ಕಾರ ತಡೆಯಬೇಕು’ ಎಂದು ರೈತ ಶಂಕರಗೌಡ ಹಿರೇಗೌಡ ಒತ್ತಾಯಿಸಿದರು. ಇನ್ನೂ ಹಲವು ರೈತರು ಮಾತನಾಡಿದರು.

ಈ ಸಂದರ್ಭದಲ್ಲಿ ಜೆಡಿಎಸ್‌ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಕೆಕೆಸಿಸಿಐ ಮಾಜಿ ಅಧ್ಯಕ್ಷ ಶಶಿಕಾಂತ ಪಾಟೀಲ, ವೆಂಕಟಪ್ಪ ನಾಯಕ, ಶಿವಕುಮಾರ ನಾಟೀಕರ, ಕೃಷ್ಣಾರೆಡ್ಡಿ ಹಾಗೂ ಹಲವು ರೈತರು ಪಾಲ್ಗೊಂಡಿದ್ದರು.

ಸನ್ಮಾನ, ಅದ್ದೂರಿ ಸ್ವಾಗತ!: ರೈತ ಸಂಕಷ್ಟ ಆಲಿಸಲು ಬಂದ ನಿಖಿಲ್‌ ಕುಮಾರಸ್ವಾಮಿ ಅವರನ್ನು ಬ್ಯಾಂಡ್‌ ಬಾರಿಸಿ ಸ್ವಾಗತಿಸಲಾಯಿತು. ಸಂಕಷ್ಟ ಆಲಿಸುವ ಸಂದರ್ಭದಲ್ಲೂ ಸನ್ಮಾನಿಸುವ ನೋಟ ಕಂಡು ಬಂತು.

1972ರಲ್ಲಿ ತೀವ್ರ ಬರದಿಂದ ಜಿಲ್ಲೆಯ ರೈತರು ಹಾನಿ ಅನುಭವಿಸಿದ್ದರು. ಈಗ 2025ರಲ್ಲಿ ಅತಿವೃಷ್ಟಿಯಿಂದ ಅದಕ್ಕೂ ಹೆಚ್ಚಿನ ಹಾನಿಯಾಗಿದೆ. ಬರೀ ರೈತರಲ್ಲ ಕಾಳಿನ ವ್ಯಾಪಾರಿಗಳು ಅದನ್ನು ತುಂಬುವ ಹಮಾಲರೂ ಸಂಕಷ್ಟಕ್ಕೀಡಾಗಿದ್ದಾರೆ
ಬಸವರಾಜ ತಡಕಲ್ ಜೆಡಿಎಸ್‌ ಕೋರ್‌ ಕಮಿಟಿ ಸದಸ್ಯ
ರಸ್ತೆಯಿಂದ ನೋಡಿದರೆ ಶೇ 25ರಷ್ಟು ಬೆಳೆ ಹಾನಿ ಕಾಣಿಸುತ್ತಿದೆ. ಹೊಲದಲ್ಲಿ ಇಳಿದರೆ ಶೇ 60ರಷ್ಟು ನಷ್ಟ ಗೋಚರಿಸುತ್ತಿದೆ. ರೈತರ ಸರಣಿ ಆತ್ಮಹತ್ಯೆ ಸಂಭವಿಸುವ ಮುನ್ನ ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಿಸಬೇಕು
ಸಂತೋಷ ಲಂಗರ್‌ ಎಪಿಎಂಸಿ ವರ್ತಕ
‘ಉಸಿರಿರುವ ತನಕ ರೈತರ ಧ್ವನಿ’
ರೈತರ ಸಂಕಷ್ಟ ಆಲಿಸಿದ ನಿಖಿಲ್‌ ಕುಮಾರಸ್ವಾಮಿ ‘ವೇದಿಕೆಗಳಲ್ಲಿ ರೈತರ ಬಗ್ಗೆ ಉದ್ದುದ್ದ ಭಾಷಣ ಮಾಡುವ ಸರ್ಕಾರ ಸಂಕಷ್ಟದಲ್ಲಿರುವ ರೈತರಿಗೆ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಬರೀ ಕೇಂದ್ರದಲ್ಲಿ ಸಚಿವರಾದ ಕುಮಾರಸ್ವಾಮಿ ಕೇಂದ್ರ ಸರ್ಕಾರದ ಬಳಿ ಪರಿಹಾರ ಕೇಳಲಿ ಎಂದು ಟೀಕಿಸುತ್ತಾರೆ. ಕೇಂದ್ರದಲ್ಲಿ ಕುಮಾರಸ್ವಾಮಿ ಅವರೇನೂ ಕೃಷಿ ಸಚಿವರಾ? ಆದರೂ ಕುಮಾರಸ್ವಾಮಿ ಅವರು ನಿರಂತರವಾಗಿ ರೈತರ ಪರವಾಗಿ ಧ್ವನಿ ಎತ್ತುತ್ತಿದ್ದಾರೆ. ಸಚಿವ ಸ್ಥಾನದಲ್ಲಿ ಇರಲಿ–ಬಿಡಲಿ ಅಧಿಕಾರದಲ್ಲಿ ಇರಲಿ–ಬಿಡಲಿ ಹಿಂದಿನಂತೆಯೇ ದೇವೇಗೌಡರ ಕುಟುಂಬ ಕೊನೆಯ ಉಸಿರು ಇರುವ ತನಕ ರೈತರ ಪರವಾಗಿ ಧ್ವನಿ ಎತ್ತು ಕೆಲಸ ಮಾಡಲಿದೆ’ ಎಂದರು. ಫೋನ್‌ ಮೂಲಕ ಎಚ್‌ಡಿಕೆ ಭರವಸೆ ಬಳಿಕ ನಿಖಿಲ್‌ ಕುಮಾರಸ್ವಾಮಿ ದೂರವಾಣಿ ಮೂಲಕ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ರೈತರೊಂದಿಗೆ ಮಾತನಾಡಿಸಿದರು. ‘ಕಲಬುರಗಿಯ ಮಹಾಜನತೆ ರೈತ ಬಂಧುಗಳಿಗೆ ನಮಸ್ಕಾರ. ನಿಮ್ಮೆಲ್ಲರ ಸಂಕಷ್ಟ ನಾನು ಗಮನಿಸುತ್ತಿರುವೆ. ಬೆಳೆ ಹಾನಿಯಾದ ಬಗೆಗೆ ಒಂದು ಮನವಿ ಪತ್ರ ಕಳುಹಿಸಿಕೊಡಿ. ನಾನು ಪ್ರಧಾನಿ ಅವರನ್ನೊ ಇಲ್ಲವೇ ಗೃಹ ಸಚಿವರನ್ನೊ ಭೇಟಿ ಮಾಡಿ ಆರ್ಥಿಕ ನೆರವು ಒದಗಿಸಲು ಪ್ರಯತ್ನಿಸುವೆ’ ಎಂದು ಕುಮಾರಸ್ವಾಮಿ ಅವರು ಫೋನ್‌ ಮೂಲಕ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.