ಕಲಬುರ್ಗಿ: ಜಿಲ್ಲೆಯ ಸೇಡಂ ತಾಲ್ಲೂಕಿನ ಕೋಡ್ಲಾ ಗ್ರಾಮದ ಪ್ರಗತಿಪರ ರೈತ ಸೋಮನಾಥರೆಡ್ಡಿ ಪುರ್ಮಾ ಅವರು ಕೃಷಿ ಮತ್ತು ಯೋಗದಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ.
ಸೋಮನಾಥ ಅವರು 68ರ ವಯಸ್ಸಿನಲ್ಲೂ ತಮ್ಮ 18 ಎಕರೆ ಜಮೀನಿನಲ್ಲಿ ಉತ್ಸಾಹದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗುತ್ತಾರೆ. ಈ ಭಾಗದಲ್ಲಿ ಯೋಗಗುರುವೆಂದೇ ಕರೆಯಲ್ಪಡುವ ಅವರು ಇಳಿವಯಸ್ಸಿನಲ್ಲೂ ದೇಹವನ್ನು ತಗ್ಗಿಸಿ, ಬಗ್ಗಿಸಿ, ಬೆಂಡಾಗಿಸುತ್ತಾರೆ.
ಸಾವಿರಾರು ಜನರಿಗೆ ಯೋಗ ಹೇಳಿಕೊಟ್ಟಿದ್ದಾರೆ.
ಆಸಕ್ತಿಕರ ಸಂಗತಿಯೆಂದರೆ, ಅವರು ಯೋಗ ಕಲಿಯಲು ಆರಂಭಿಸಿದ್ದೆ 50ರ ವಯಸ್ಸಿನಲ್ಲಿ. 2005ರಲ್ಲಿ ಸ್ಥೂಲಕಾಯ, ಬೆನ್ನುನೋವು, ಮಂಡಿನೋವಿನಿಂದ ಅವರು ತುಂಬಾ ತೊಂದರೆ ಅನುಭವಿಸುತ್ತಿದ್ದರು. ಚಿಕಿತ್ಸೆಗಳು ಫಲಕಾರಿಯಾಗುತ್ತಿರಲಿಲ್ಲ. ಆಗ ಕೋಡ್ಲಾ ಗ್ರಾಮದ ಸರ್ಕಾರಿ ಶಾಲೆಯಲ್ಲಿದೈಹಿಕ ಶಿಕ್ಷಣ ಶಿಕ್ಷಕ ನಾಗಯ್ಯಮಠ ಅವರಿಂದ ಯೋಗ ಕಲಿತರು. ಅನಾರೋಗ್ಯ ಸಮಸ್ಯೆ ಕೊಂಚ ನೀಗಿಸಿಕೊಂಡರು.
‘ಮೊದಮೊದಲು ಯೋಗ ಕಲಿಕೆ ಕಷ್ಟವಾಯಿತು. ಕ್ರಮೇಣ ಕಠಿಣ ಆಸನಗಳಾದ ಸರ್ವಾಂಗಸನ, ಹಲಾಸನ, ಸರ್ವಾಂಗಸನ, ಮತ್ಸ್ಯಾಸನ, ಮರ್ಕಟಾಸನ, ಮಯೂರಾಸನ, ಪಾದ ಪಶ್ಚಿಮೋತ್ತಾಸನ, ಶೀರ್ಷಾಸನ, ಚಕ್ರಾಸನಗಳನ್ನು ಕಲಿತೆ. ಪ್ರತಿದಿನ ಬೆಳಗಿನ ಜಾವ ಒಂದೂವರೆ ಗಂಟೆ ಸಮಯವನ್ನು ಅವರು ಯೋಗಕ್ಕೆ ಮೀಸಲಿಟ್ಟಿರುವೆ’ ಎಂದು ಸೋಮನಾಥರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.
ಸೋಮನಾಥರೆಡ್ಡಿ ಅವರು ಹಲವಾರು ಯೋಗ ಶಿಬಿರಗಳಲ್ಲಿ ಮಾರ್ಗ ದರ್ಶನ ನೀಡಿದ್ದಾರೆ. ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯು (ಐಸಿಎಆರ್) ಅವರಿಂದ ದೇಶದ ವಿವಿಧ ಕೃಷಿ ವಿಶ್ವವಿದ್ಯಾಲಯಗಳಲ್ಲಿ ರೈತರು, ವಿದ್ಯಾರ್ಥಿಗಳಿಗೆ ಯೋಗ ತರಬೇತಿ ಕೊಡಿಸಿದೆ. ಗುಜರಾತ್, ಮಹಾರಾಷ್ಟ್ರ, ಛತ್ತಿಸ್ಗಡ್, ಮಧ್ಯಪ್ರದೇಶ ಸೇರಿದಂತೆ ದೇಶದ ವಿವಿಧೆಡೆ ನಡೆದ ಯೋಗ ಶಿಬಿರಗಳಲ್ಲಿ ಪಾಲ್ಗೊಂಡು ತರಬೇತಿ ನೀಡಿದ್ದಾರೆ. ರಾಜ್ಯ ಸರ್ಕಾರ, ಕೃಷಿ ವಿಶ್ವವಿದ್ಯಾಲಯಗಳು ಹಾಗೂ
ವಿವಿಧ ಸಂಘಸಂಸ್ಥೆಗಳು ಅವರನ್ನು ಗೌರವಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.