ADVERTISEMENT

ಗೌರಿಕುಂಡ ಮೇಘಸ್ಪೋಟದಲ್ಲಿ ಸಿಲುಕಿದ್ದ ಕಲಬುರಗಿಯ 9 ಜನ ಸುರಕ್ಷಿತ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 16:41 IST
Last Updated 20 ಅಕ್ಟೋಬರ್ 2021, 16:41 IST
ಉತ್ತರಾಖಂಡದ ಗೌರಿಕುಂಡದಿಂದ ಹರಿದ್ವಾರಕ್ಕೆ ಬಂದಿಳಿದಿರುವ ಕಲಬುರಗಿ ಜಿಲ್ಲೆಯ ಪ್ರವಾಸಿಗರ ತಂಡ
ಉತ್ತರಾಖಂಡದ ಗೌರಿಕುಂಡದಿಂದ ಹರಿದ್ವಾರಕ್ಕೆ ಬಂದಿಳಿದಿರುವ ಕಲಬುರಗಿ ಜಿಲ್ಲೆಯ ಪ್ರವಾಸಿಗರ ತಂಡ   

ಕಲಬುರಗಿ: ಜಿಲ್ಲೆಯ ಆಳಂದ ತಾಲ್ಲೂಕಿನ ಭೂಸನೂರ ಗ್ರಾಮದಿಂದ ಉತ್ತರಾಖಂಡ ಪ್ರವಾಸಕ್ಕೆ ತೆರಳಿದ್ದ ಒಂಬತ್ತು ಜನ ಪ್ರವಾಸಿಗರು ಕೇದಾರನಾಥ ಬಳಿಯ ಗೌರಿಕುಂಡದಿಂದ ಮೇಘಸ್ಪೋಟದಿಂದ ಪಾರಾಗಿ ಬುಧವಾರ ಸುರಕ್ಷಿತವಾಗಿ ಹರಿದ್ವಾರ ತಲುಪಿದ್ದಾರೆ.

ಇದೇ 14ರಂದು ಗ್ರಾಮದ ಚಿದಾನಂದ ಸ್ವಾಮಿ, ಲಕ್ಷ್ಮಿಕಾಂತ ಪಾಟೀಲ, ಅನಂತರಾಜ ಜಗತಿ, ನಾಗರಾಜ ಜಗತಿ, ಲಕ್ಷ್ಮೀಪುತ್ರ, ಕಿಟ್ಟು ಗೌಡಪ್ಪಗೋಳ, ವೈಜನಾಥ, ವೀರೇಶ ಪಾಟೀಲ, ಮಹಾದೇವ ಪಟ್ಟಣೆ ಅವರು ಕೇದಾರನಾಥಕ್ಕೆ ತೆರಳಿದ್ದರು. ಕಳೆದ ಮೂರು ದಿನಗಳಿಂದ ಉತ್ತರಾಖಂಡದಲ್ಲಿ ಮೇಘಸ್ಪೋಟದಿಂದಾಗಿ ವ್ಯಾಪಕ ಮಳೆ ಸುರಿಯುತ್ತಿದ್ದುದರಿಂದ ಗೌರಿಕುಂಡದ ಸಣ್ಣ ಕೊಠಡಿಯಲ್ಲಿ ಕಳೆದಿದ್ದರು. ಅಲ್ಲಿ ವಿದ್ಯುತ್ ಸಂಪರ್ಕ ವ್ಯತ್ಯಯಗೊಂಡಿದ್ದರಿಂದ ಮೊಬೈಲ್ ಸ್ವಿಚ್‌ ಆಫ್‌ ಆಗಿ ಸಂಪರ್ಕವೂ ಕಡಿತಗೊಂಡಿತ್ತು. ಪೊಲೀಸರ ನೆರವಿನಿಂದ ಎಲ್ಲ ಯಾತ್ರಾರ್ಥಿಗಳು ಖಾಸಗಿ ವಾಹನದಲ್ಲಿ ಹರಿದ್ವಾರ ತಲುಪಿದ್ದಾರೆ. ರಾತ್ರಿ ಅಲ್ಲಿಂದ ಹೊರಟು ದೆಹಲಿ ತಲುಪಲಿದ್ದಾರೆ. ಇದೀಗ ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾರೆ ಎಂದು ಅನಂತರಾಜ ಜುಗತಿ ಅವರ ಸಂಬಂಧಿ ರಮೇಶ ಜುಗತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಉತ್ತರಾಖಂಡದ ಗೌರಿಕುಂಡದಲ್ಲಿ ಸಿಲುಕಿದ್ದ ಬಗ್ಗೆ ಮಾಹಿತಿ ಪಡೆದ ಜಿಲ್ಲೆಯ ಬಿಜೆಪಿ ಮುಖಂಡ ಭೀಮಾಶಂಕರ ಪಾಟೀಲ ಈ ಬಗ್ಗೆ ಮುಖ್ಯಮಂತ್ರಿ ಕಚೇರಿಗೆ ಮಾಹಿತಿ ನೀಡಿದರು. ‘ಅಧಿಕಾರಿಗಳ ತಂಡವು ಉತ್ತರಾಖಂಡ ಸರ್ಕಾರದೊಂದಿಗೆ ಮಾತನಾಡಿ ಅವರ ಸುರಕ್ಷಿತ ಬರುವಿಕೆಯನ್ನು ಖಚಿತಪಡಿಸಿಕೊಂಡಿದೆ. ದೆಹಲಿಯಿಂದ ಶುಕ್ರವಾರ ಕಲಬುರಗಿಗೆ ವಾಪಸಾಗಲಿದ್ದಾರೆ. ಅವರಿಗೆಪ್ರಯಾಣದ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ’ ಎಂದು ಭೀಮಾಶಂಕರ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.