ಕಾಳಗಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಸಾಸರಗಾಂವ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪ್ರಭಾರ ಮುಖ್ಯಶಿಕ್ಷಕ ಶಂಕರ ರಾಠೋಡ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಚಿಂಚೋಳಿ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಲಕ್ಷ್ಮಯ್ಯ ಗುರುವಾರ ಆದೇಶ ಹೊರಡಿಸಿದ್ದಾರೆ.
ಈ ಶಿಕ್ಷಕ ಬುಧವಾರ (ಮಾ. 5) ಮಧ್ಯಾಹ್ನ 12.20 ಗಂಟೆಗೆ ಮದ್ಯ ಸೇವಿಸಿ ಶಾಲೆಗೆ ಬಂದಿರುತ್ತಾರೆ. ಶಾಲಾ ಅವಧಿಯಲ್ಲಿ ಶಾಲಾ ಕಚೇರಿಯಲ್ಲೇ ಮಲಗಿದ್ದನ್ನು ಪ್ರಶ್ನಿಸಿದ ಪೋಷಕರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಪ್ರತಿದಿನ ಶಾಲಾ ಸಮಯ ಪಾಲನೆ ಮಾಡುವುದಿಲ್ಲ. ಇದೇ ದಿನ ಮಧ್ಯಾಹ್ನ ಮಕ್ಕಳಿಗೆ ಬಿಸಿಯೂಟ ವಿತರಿಸಿರುವುದಿಲ್ಲ ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ವರದಿ ನೀಡಿರುತ್ತಾರೆ.
ಶಾಲಾ ಶಿಕ್ಷಣ ಇಲಾಖೆ ಕಲಬುರಗಿಯ ಹೆಚ್ಚುವರಿ ಆಯುಕ್ತರು ಗುರುವಾರ (ಮಾ.6) ದೂರವಾಣಿ ಮೂಲಕ ಆದೇಶಿಸಿದಂತೆ, ಪ್ರಭಾರ ಮುಖ್ಯಶಿಕ್ಷಕ ಶಂಕರ ರಾಠೋಡ ಅವರನ್ನು ಕರ್ನಾಟಕ ನಾಗರಿಕ ಸೇವಾ ನಿಯಮ (ನಡತೆ) ಗಳನ್ನು ಉಲ್ಲಂಘಿಸಿ, ಕರ್ತವ್ಯ ಲೋಪವೆಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಖ್ಯಶಿಕ್ಷಕನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಈ ಅವಧಿಯಲ್ಲಿ ಕೇಂದ್ರ ಕಾರ್ಯಸ್ಥಾನ ಬಿಡುವಂತಿಲ್ಲ. ಅಮಾನತು ಅವಧಿಯಲ್ಲಿ ಶೇ 50ರಷ್ಟು ಜೀವನಾಂಶ ಭತ್ಯೆಗೆ ಅರ್ಹರಿರುತ್ತಾರೆ ಎಂದು ಬಿಇಒ ಆದೇಶದಲ್ಲಿ ತಿಳಿಸಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಲಕ್ಷ್ಮಯ್ಯ, ಅಕ್ಷರದಾಸೋಹ ಯೋಜನೆ ಸಹಾಯಕ ನಿರ್ದೇಶಕ ಜಯಪ್ಪ ಚಾಪಲ್, ಸಿಆರ್ಪಿ ಬಸವರಾಜ ಹೊಸಳ್ಳಿ ಗುರುವಾರ ಮಧ್ಯಾಹ್ನ ಶಾಲೆಗೆ ಭೇಟಿ ನೀಡಿ ಪ್ರಭಾರ ಮುಖ್ಯಶಿಕ್ಷಕ ಶಂಕರ ರಾಠೋಡ ಕೈಗೆ ಅಮಾನತು ಆದೇಶ ನೀಡಿದರು.
ಈ ಕುರಿತು ಗುರುವಾರ (ಮಾ.6) ‘ಮದ್ಯ ಸೇವಿಸಿ ಶಾಲೆಯಲ್ಲೇ ಮಲಗಿದ ಮುಖ್ಯ ಶಿಕ್ಷಕ’ ಎಂಬ ಸುದ್ದಿ 'ಪ್ರಜಾವಾಣಿ'ಯಲ್ಲಿ ಪ್ರಕಟಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.