ಸೇಡಂ (ಕಲಬುರ್ಗಿ): ಸೇಡಂನಲ್ಲಿ ಬೆಳಿಗ್ಗೆ 4ಕ್ಕೆ ಸುರಿದ ಎರಡು ಗಂಟೆಯಲ್ಲಿ ದಾಖಲೆಯ 133 ಮಿಲಿ ಮೀಟರ್ ಮಳೆ ಸುರಿದಿದ್ದು, ಪಟ್ಟಣದಲ್ಲಿರುವ ವಾಸವದತ್ತಾ ಸಿಮೆಂಟ್ಸ್ ಘಟಕಕ್ಕೆ ನೀರು ನುಗ್ಗಿದೆ. ಇದರಿಂದಾಗಿ ಉತ್ಪಾದನಾ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ.
ಭಾರಿ ಮಳೆಯ ಪರಿಣಾಮ ಕಾಗಿಣಾ ಮತ್ತು ಕಮಲಾವತಿ ನದಿಗಳು ತುಂಬಿ ಹರಿಯುತ್ತಿದ್ದು, ಸೇಡಂ ಸಂಪರ್ಕಿಸುವ ಎಲ್ಲ ರಸ್ತೆಗಳು ಬಂದ್ ಆಗಿವೆ. ಚಿತ್ತಾಪುರ, ಚಿಂಚೋಳಿ, ಸೇಡಂನಿಂದ ಹೈದರಾಬಾದ್ಗೆ ಸಂಪರ್ಕ ಕಲ್ಪಿಸುವ ಕುರಕುಂಟಾ ಮಾರ್ಗದಲ್ಲಿ ನೀರು ಆವರಿಸಿಕೊಂಡಿದೆ. ಇಡೀ ಸೇಡಂ ಪಟ್ಟಣ ದ್ವೀಪದಂತಾಗಿದೆ.
ತಾಲ್ಲೂಕಿನಾದ್ಯಂತ 1 ಸಾವಿರಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದು, 30ಕ್ಕೂ ಅಧಿಕ ಮನೆಗಳು ಕುಸಿದು ಬಿದ್ದಿವೆ.
ಸೇಡಂ ಪೊಲೀಸ್ ಠಾಣೆಯಲ್ಲಿ ಟೊಂಕದವರೆಗೂ ನೀರು ನಿಂತಿದ್ದು, ಕಂಪ್ಯುಟರ್ ನೀರಿನಿಂದ ಹಾಳಾಗಿವೆ. ಸೇಡಂನ ಆರಾಧ್ಯ ದೈವ ಕೊತ್ತಲ ಬಸವೇಶ್ವರ ದೇವಾಲಯದಲ್ಲಿಯೂ ನೀರು ನುಗ್ಗಿದೆ. ಬಸವನಗರ, ಇಂದ್ರಾನಗರ, ಚೋಟಿಗಿಣಿ, ಅಗ್ಗಿಬಸವೇಶ್ವರ ಕಾಲೊನಿ, ಆಶ್ರಯ ಕಾಲೊನಿ, ಕೋಡ್ಲಾ ಕ್ರಾಸ್, ಇನ್ಫೋಸಿಸ್ ಕಾಲೋನಿ ಸೇರಿದಂತೆ ಅನೇಕ ಬಡಾವಣೆಗಲ್ಲಿ ನೀರು ನುಗ್ಗಿದೆ.
ಸಂತ್ರಸ್ತ ಪ್ರದೇಶಗಳಿಗೆ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಹಾಗೂ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಭೇಟಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.