
ಕಲಬುರಗಿ: ನಗರದ ಜಿಲ್ಲಾ ನ್ಯಾಯಾಲಯ ಕಟ್ಟಡಗಳ ಸಂಕೀರ್ಣದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆಯ ಇ–ಮೇಲ್ ಬಂದಿದ್ದರಿಂದ ಕೋರ್ಟ್ ಆವರಣದಲ್ಲಿ ಮಂಗಳವಾರ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಮೂರು ಗಂಟೆಗಳಿಗೂ ಅಧಿಕ ಕಾಲ ಸಮಗ್ರ ತಪಾಸಣೆ ನಡೆಸಿದರು. ಬಳಿಕ ಅದೊಂದು ‘ಹುಸಿ ಬಾಂಬ್’ ಬೆದರಿಕೆ ಎಂಬುದು ಗೊತ್ತಾಯಿತು. ಇದರಿಂದ ನ್ಯಾಯಾಧೀಶರು, ವಕೀಲರು, ಕಕ್ಷಿದಾರರು ನಿರಾಳರಾದರು. ಆದರೆ, ನ್ಯಾಯಾಲಯದ ಕಲಾಪ ಅರ್ಧ ದಿನ ಸ್ಥಗಿತಗೊಂಡಿತು.
‘ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಇ–ಮೇಲ್ ವಿಳಾಸಕ್ಕೆ ಬೆಳಿಗ್ಗೆ 5.40ರ ಹೊತ್ತಿಗೆ ಇ–ಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿತ್ತು. ‘ಬೆಳಿಗ್ಗೆ 11.50ಕ್ಕೆ ನಿಮ್ಮ ನ್ಯಾಯಾಲಯ/ ನ್ಯಾಯಾಧೀಶರ ಕೊಠಡಿಯಲ್ಲಿ ಸೈನೈಡ್ ವಿಷಾನಿಲ ತುಂಬಿದ ಆರ್ಡಿಎಕ್ಸ್ ಬಾಂಬ್ ಸ್ಫೋಟಗೊಳ್ಳಲಿದೆ. ಬೆಳಿಗ್ಗೆ 11 ಗಂಟೆಯೊಳಗೆ ನ್ಯಾಯಾಧೀಶರು/ ನಿರಪರಾಧಿ ನಾಗರಿಕರನ್ನು ಸ್ಥಳಾಂತರಿಸಬೇಕು ಎಂದು ಅದರಲ್ಲಿ ಎಚ್ಚರಿಸಲಾಗಿತ್ತು’ ಎಂದು ಮೂಲಗಳು ಹೇಳಿವೆ.
ಬೆದರಿಕೆ ಇ–ಮೇಲ್ ಅನ್ನು ಬೆಳಿಗ್ಗೆ 10.46ರ ಹೊತ್ತಿಗೆ ನೋಡಿದ ನ್ಯಾಯಾಲಯದ ಅಧಿಕಾರಿಗಳು ಕೂಡಲೇ ಸ್ಥಳೀಯ ಪೊಲೀಸರಿಗೆ ವಿಷಯ ಮುಟ್ಟಿಸಿದರು. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ನ್ಯಾಯಾಲಯಕ್ಕೆ ಬಂದು ನ್ಯಾಯಾಧೀಶರು, ವಕೀಲರು, ಕೋರ್ಟ್ ಸಿಬ್ಬಂದಿ, ಕಕ್ಷಿದಾರರು ಸೇರಿದಂತೆ ಸಾರ್ವಜನಿಕರನ್ನು ನ್ಯಾಯಾಲಯ ಸಂಕೀರ್ಣದ ವಿವಿಧ ಕಟ್ಟಡಗಳಿಂದ ಹೊರಗೆ ಕಳುಹಿಸಿದರು. ಅಷ್ಟೊತ್ತಿಗೆ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳದ ಸಿಬ್ಬಂದಿ ಸ್ಥಳಕ್ಕೆ ಬಂದರು.
ಆಗಷ್ಟೇ ಕೋರ್ಟ್ಗೆ ಬಂದ ವಕೀಲರು, ಗ್ರಾಮೀಣ ಪ್ರದೇಶದ ಕಕ್ಷಿದಾರರು ಏನು ನಡೆಯುತ್ತಿದೆ ಎಂಬುದು ತಿಳಿಯದೇ ಕೆಲ ಹೊತ್ತು ಗೊಂದಲಕ್ಕೂ ಒಳಗಾದರು. ಇ–ಮೇಲ್ನಲ್ಲಿ ಒಡ್ಡಿದ್ದ ಬೆದರಿಕೆಯಂತೆ ಬೆಳಿಗ್ಗೆ 11.50 ರತನಕವೂ ಎಲ್ಲರ ಎದೆಬಡಿತ ಜೋರಾಗಿಯೇ ಇತ್ತು. ಬಳಿಕ ಅದೊಂದು ‘ಹುಸಿ’ ಬಾಂಬ್ ಕರೆ ಇರಬಹುದು ಎಂಬ ಗುಸು–ಗುಸು ಶುರುವಾಯಿತು.
ಭರ್ತಿ ಮೂರು ಗಂಟೆಗಳಷ್ಟು ಹೊತ್ತು ನ್ಯಾಯಾಲಯದ ಕೋರ್ಟ್ ಹಾಲ್ಗಳು ಸೇರಿದಂತೆ ಮೂಲೆ–ಮೂಲೆಯನ್ನೂ ಪೊಲೀಸರು, ಬಾಂಬ್ ನಿಷ್ಕ್ರಿಯ ಹಾಗೂ ಶ್ವಾನದಳದ ಸಿಬ್ಬಂದಿ ಸಮಗ್ರವಾಗಿ ಜಾಲಾಡಿ ತಪಾಸಿಸಿದರು. ಆದರೆ, ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಲಿಲ್ಲ. ಬಳಿಕ ನ್ಯಾಯಾಧೀಶರು, ವಕೀಲರು ಸೇರಿದಂತೆ ನೆರೆದಿದ್ದವರೆಲ್ಲ ನಿಟ್ಟುಸಿರು ಬಿಟ್ಟರು.
ಮರಗಳ ನೆರಳಿನಡಿ ಆಶ್ರಯ:
ಬಾಂಬ್ ಬೆದರಿಕೆ ಕರೆ ಹಿನ್ನೆಲೆಯಲ್ಲಿ ಕೋರ್ಟ್ ಹಾಲ್ಗಳಿಂದ ಹೊರ ಬಂದ ನ್ಯಾಯಾಧೀಶರು, ವಕೀಲರು ಮರಗಳ ನೆರಳಿನಡಿ ಒಂದು ಗಂಟೆಯ ತನಕ ನಿಂತೇ ಇದ್ದರು. ಕೆಲವು ಬೆಂಚ್ಗಳನ್ನು ತಂದು ಮರಗಳ ನೆರಳಿನಡಿ ಇರಿಸಲಾಯಿತು. ಬಳಿಕ ನ್ಯಾಯಾಧೀಶರು ಅಲ್ಲಿ ವಿರಮಿಸಿದರು.
ವಕೀಲರು ಗುಂಪು ಗುಂಪಾಗಿ ನಿಂತು ಚರ್ಚಿಸುತ್ತಲೇ ಕಾಲ ಕಳೆದರು. ಸ್ಥಳಕ್ಕೆ ಕಲಬುರಗಿ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ., ಡಿಸಿಪಿ ಪ್ರವೀಣ ನಾಯಕ, ಎಸಿಪಿಗಳಾದ ಶರಣಬಸಪ್ಪ ಸುಬೇದಾರ, ಪ್ರಭು ಟಿ.ಡಿ., ಸ್ಟೇಷನ್ ಬಜಾರ್ ಇನ್ಸ್ಪೆಕ್ಟರ್ ಗುರು ಪಾಟೀಲ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಮಧ್ಯಾಹ್ನದ ಬಳಿಕ ಕಲಾಪ:
ಊಟದ ವಿರಾಮದ ಬಳಿಕ ಮಧ್ಯಾಹ್ನ ಕೋರ್ಟ್ ಕಲಾಪಗಳು ನಡೆದವು. ನ್ಯಾಯಾಧೀಶರು, ಸಿಬ್ಬಂದಿ ಮತ್ತು ವಕೀಲರು ಮತ್ತೆ ಕೋರ್ಟ್ ಕಲಾಪಗಳನ್ನು ಎಂದಿನಂತೆ ಮುಂದುವರಿಸಿದರು.
ಆದರೆ, ‘ಬಹುತೇಕ ಕಕ್ಷಿದಾರರು ಮನೆಗಳಿಗೆ ಮರಳಿದ್ದರಿಂದ ಹಲವು ಪ್ರಕರಣಗಳ ವಿಚಾರಣೆ ವೇಳೆ ಕಕ್ಷಿದಾರರ ಕೊರತೆ ಕಾಡಿತು’ ಎಂದು ಮೂಲಗಳು ಹೇಳಿವೆ.
ಹುಸಿ ಬಾಂಬ್ ಬೆದರಿಕೆ
ಕಮಿಷನರ್ ಸ್ಪಷ್ಟನೆ ‘ಕಲಬುರಗಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಮಂಗಳವಾರ ಬೆಳಗಿನ ಜಾವ ಒಂದು ಬೆದರಿಕೆ ಇ–ಮೇಲ್ ಬಂದಿತ್ತು. ವಿಧ್ವಂಸಕ ಕೃತ್ಯ ತಡೆ ಪಡೆ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಹಾಗೂ ಶ್ವಾನದಳ ತಂಡಗಳನ್ನು ಕಳುಹಿಸಿ ಸಮಗ್ರ ತಪಾಸಣೆ ನಡೆಸಲಾಯಿತು. ಆದರೆ ಯಾವುದೇ ಬಗೆಯ ಸಂಶಯಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಮೇಲ್ನೋಟಕ್ಕೆ ಇದೊಂದು ಹುಸಿ ಬಾಂಬ್ ಬೆದರಿಕೆ ಎಂಬುದು ಗೊತ್ತಾಗಿದೆ. ಬೆದರಿಕೆ ಇ–ಮೇಲ್ ಕಳುಹಿಸಿದವರ ವಿವರಗಳನ್ನು ಕಲೆ ಹಾಕಲು ಪೊಲೀಸರಿಗೆ ಸೂಚಿಸಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.